ಕರ್ನಾಟಕದಲ್ಲಿ "ನವೆಂಬರ್ ಕ್ರಾಂತಿ" ದೆಹಲಿಯಲ್ಲಿ ಬೀಡುಬಿಟ್ಟ 10 ಕಾಂಗ್ರೆಸ್ ಶಾಸಕರು!
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎರಡು ಶಕ್ತಿ ಕೇಂದ್ರಗಳು ನಿರ್ಮಾಣವಾದವು ಎನ್ನುವ ಮಾತು ಪ್ರಾರಂಭದ ಹಂತದಿಂದಲೇ ಕೇಳಿ ಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಪ್ರಮುಖ ರಾಜಕೀಯ ನಾಯಕರಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಅಧಿಕಾರದ ಕಾರಣಕ್ಕೆ ಜಿದ್ದಾಜಿದ್ದಿ ನಡೆಯುತ್ತಲ್ಲೇ ಇದೆ. ಇದೀಗ ಕಳೆದ ಆರು ತಿಂಗಳಿನಿಂದ ಚರ್ಚೆ ಆಗುತ್ತಿರುವ ನವೆಂಬರ್ ಕ್ರಾಂತಿ ಎನ್ನುವ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಪ್ರಾರಂಭವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಧಿಕಾರ ಹಂಚಿಕೆಗಾಗಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗ ಶಾಸಕರು ದೆಹಲಿಗೆ ಧಾವಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಡಿ.ಕೆ ಶಿವಕುಮಾರ್ ಪಾಳಯದ ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹಂಚಿಕೆ ವಿಚಾರವು ಚರ್ಚೆ ಆಗುತ್ತಲ್ಲೇ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ 2.5 ವರ್ಷಗಳ ಅವಧಿಗೆ (ತಲಾ) ಅಧಿಕಾರ ಹಂಚಿಕೆ ಮಾತುಕತೆ ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ನಡೆದಿದೆ ಎಂದು ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರು ಪ್ರಾರಂಭದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ.
ಆದರೆ, ಸಿದ್ದರಾಮಯ್ಯ ಅವರ ಬೆಂಬಲಿಗರು ಹಾಗೂ ಬಣದವರು ಈ ಹೇಳಿಕೆಯನ್ನು ವಿರೋಧಿಸಿಕೊಂಡು ಬಂದಿದ್ದು, ಸಿದ್ದರಾಮಯ್ಯ ಅವರೇ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಈ ರೀತಿ ಇರುವಾಗಲೇ ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ.
ಇದನ್ನು ನವೆಂಬರ್ ಕ್ರಾಂತಿಯ ಮುನ್ಸೂಚನೆ ಎಂದು ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್ 2.5 ವರ್ಷಗಳನ್ನು ಪೂರೈಸುತ್ತಿರುವುದರಿಂದ ಶಾಸಕರು ಅಧಿಕಾರ ಹಂಚಿಕೆಗೆ ಒತ್ತಾಯಿಸಿದ್ದಾರೆ. 'ನವೆಂಬರ್ ಕ್ರಾಂತಿ'ಯ ಬಗ್ಗೆ ವದಂತಿಗಳ ನಡುವೆ ಈ ಹೆಜ್ಜೆಯನ್ನು ಹಲವು ಶಾಸಕರು ಇರಿಸಿರುವುದು ಅಚ್ಚರಿ ಮೂಡಿಸಿದೆ.












Click it and Unblock the Notifications