ಬಿಜೆಪಿ ಶಾಸಕರಿಗೆ ಶಾಕ್ ಕೊಟ್ಟ ಬಿಎಸ್ವೈ : ನಾಲ್ಕಾರು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ: ಯಡಿಯೂರಪ್ಪ
ಕಲಬುರಗಿ, ಮಾರ್ಚ್7: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಗುಜರಾತ್ ಮಾದರಿ ಈ ಬಾರಿಯ ಚುನಾವಣೆಯಲ್ಲಿ ಜಾರಿಯಾಗುತ್ತಾ ಎನ್ನುವ ಚರ್ಚೆ ಹಾಗೂ ಆತಂಕ ಬಿಜೆಪಿ ಶಾಸಕರಲ್ಲಿ ಹೆಚ್ಚಾಗಿತ್ತು.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕೊಟ್ಟ ಹೇಳಿಕೆ ಕೆಲ ಬಿಜೆಪಿ ಶಾಸಕರಿಗೆ ಖುಷಿ ತಂದಿದ್ರೆ, ಇನ್ನೂ ಕೆಲವರಿಗೆ ಶಾಕ್ ಕೊಟ್ಟಂತಾಗಿದೆ. ಹೌದು ಈ ಬಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡುವ ಮಾನತಂಡದ ಕುರಿತು ಸಾಕಷ್ಟು ಊಹಪೋಹಗಳು ಸೃಷ್ಟಿಯಾಗಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇನ್ನೂ ಸಚಿವರಾದ ವಿ. ಸೋಮಣ್ಣ, ನಾರಾಯಯಣಗೌಡ ಅವರು ಪಕ್ಷ ಬಿಡುವ ಬಗ್ಗೆ ಮಾಹಿತಿ ಇಲ್ಲ. ಪಕ್ಷದಿಂದ ಹೋಗುವವರು ಹೋಗಬಹುದು. ಬರುವವರು ಬರಬಹುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕನಿಷ್ಠ 140 ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಜನ ಸೇರುತ್ತಿಲ್ಲ. ನಮ್ಮ ಯಾತ್ರೆಯಲ್ಲಿ ಉತ್ಸಾಹದಿಂದ ಜನರು ಸೇರುತ್ತಿದ್ದಾರೆ. ವಾತಾವರಣ ಬಿಜೆಪಿಗೆ ಅನುಕೂಲಕರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರ ನಾಯಕರ ಭೇಟಿಯು ಬಿಜೆಪಿ ಬಲವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಕೇವಲ ಟೀಕೆ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಜವಾಬ್ದಾರಿಯುತ ನಾಯಕರಾದ ರಮೇಶ್ಕುಮಾರ್ ಅವರು, ನಾವೆಲ್ಲ ಸಾಕಷ್ಟು ಮಾಡಿಕೊಂಡಿದ್ದೇವೆ; ತೃಪ್ತಿ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕು. ಲೋಕಾಯುಕ್ತವನ್ನು ಮುಚ್ಚಿಸಿದ್ದಕ್ಕೆ ಉತ್ತರ ಕೊಡಬೇಕು ಎಂದ ಅವರು, ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಿದೆ ಎಂದು ತಿಳಿಸಿದರು.

ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 54 ಲಕ್ಷ ರೈತರಿಗೆ ಪ್ರಯೋಜನ ಸಿಗುತ್ತಿದೆ. ಭೂಸಿರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರೈತ ಶಕ್ತಿ ಯೋಜನೆಯಡಿ ಡೀಸೆಲ್ ಸಬ್ಸಿಡಿ ನೀಡುತ್ತಿದ್ದು, ಕೂಲಿ ಕಾರ್ಮಿಕ ಮಹಿಳೆಯರಿಗೆ 1 ಸಾವಿರ ಕೊಡುವ ಘೋಷಣೆ ಮಾಡಿದ್ದೇವೆ ಎಂದ ಅವರು ಕೇಂದ್ರ- ರಾಜ್ಯ ಸರಕಾರಗಳ ಜನಪರ ಯೋಜನೆಗಳ ವಿವರ ಕೊಟ್ಟರು. ಮೀಸಲಾತಿ ಹೆಚ್ಚಳದ ಕುರಿತು ಮಾಹಿತಿ ನೀಡಿದರಲ್ಲದೆ, ಬಿಜೆಪಿ ಗೆಲುವು ಶತಸ್ಸಿದ್ಧ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ಹೊರದೇಶಕ್ಕೆ ಹೋಗಿ ಭಾರತದ ಬಗ್ಗೆ ಹಗುರವಾಗಿ ಮಾತನಾಡುವುದು ಇದು ಮೊದಲಲ್ಲ. ಇದು ಶೋಭೆ ತರುವ ವಿಚಾರವಲ್ಲ. ಅವರು ದೇಶದ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications