ಕರ್ನಾಟಕ; ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಇಲ್ಲ
ಬೆಂಗಳೂರು, ಅಕ್ಟೋಬರ್ 19; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ.
1 ರಿಂದ 5ನೇ ತರಗತಿಗಳ ಆರಂಭ, ಈಜುಕೊಳಗಳನ್ನು ತೆರೆಯುವುದು ಮತ್ತು ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸುವುದಿಲ್ಲ ಎಂದು ಸೋಮವಾರ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ನಡೆಸುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಯಾಣಿಕರಿಗೆ ಸಾಮಾನ್ಯ ತಪಾಸಣೆ ಸ್ಥಗಿತಗೊಳಿಸಲಾಗುತ್ತದೆ (ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ ಹೊರತುಪಡಿಸಿ).

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಅದರಲ್ಲಿ ಸೂಚಿಸಿರುವ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.
ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲೇ ತಮ್ಮ ಆರ್ಟಿಪಿಸಿಆರ್ ಪ್ರಮಾಣ ಪತ್ರವನ್ನು ಏರ್ ಸುವಿಧಾ ವೆಬ್ ಪೋರ್ಟಲ್ನಲ್ಲಿ ಅಪ್ ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಪ್ರಮಾಣ ಪತ್ರ ಅಪ್ಲೋಡ್ ಆಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದು, ಸ್ವಯಂ ಚಾಲಿತ ಥರ್ಮಲ್ ಕ್ಯಾಮರಾ ಮೇಲ್ವಿಚಾರಣೆ ಮಾಡುವುದು ಮುಂದುವರೆಯಲಿದೆ ಎಂದು ಮಾರ್ಗಸೂಚಿ ಸ್ಪಷ್ಟಪಡಿಸಿದೆ.
ಬ್ರಿಟನ್ನಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರು ಭಾರತಕ್ಕೆ ಬಂದಾಗ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯ ಕ್ವಾರಂಟೈನ್ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ.
ಯಾರಿಗೆ ಪರೀಕ್ಷೆ; ವಿದೇಶದಿಂದ ಬರುವ ಪ್ರಯಾಣಿಕರು ಕೋವಿಡ್ ಆರ್ಟಿಪಿಸಿಆರ್ ಪ್ರಮಾಣ ಪತ್ರ ತೋರಿಸುವ ಅಗತ್ಯವಿಲ್ಲ. ಒಂದು ವೇಳೆ ಪ್ರಯಾಣಿಕರಿಗೆ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅವರ ಪರೀಕ್ಷೆ ನಡೆಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಅತಿ ಹೆಚ್ಚು ಜನರು ವಿದೇಶದಿಂದ ಆಗಮಿಸುತ್ತಾರೆ. ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ ವಿದೇಶಿ ಪ್ರಯಾಣಿಕರಿಗೆ ಕೊಂಚ ನೆಮ್ಮದಿ ತಂದಿದೆ.
ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಮಂಗಳವಾರದ ಹೆಲ್ತ್ ಬುಲೆಟಿನ್ ಪ್ರಕಾರ 349 ಹೊಸ ಕೋವಿಡ್ ಪ್ರಕರಣಗಳು 24 ಗಂಟೆಯಲ್ಲಿ ದಾಖಲಾಗಿವೆ. 399 ಜನರು ಡಿಸ್ಚಾರ್ಜ್ ಆಗಿದ್ದು, 14 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳು 9100. ಒಟ್ಟು ಮೃತಪಟ್ಟವರು 37967. ಒಟ್ಟು ಪ್ರಕರಣಗಳ ಸಂಖ್ಯೆ 2984022. ಒಟ್ಟು ಡಿಸ್ಚಾರ್ಜ್ ಆದವರು 2936926.
ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್ ಸಂದರ್ಭದಲ್ಲಿ ವಿಮಾನ ಸಂಚಾರಕ್ಕೆ ಹೇರಿದ್ದ ನಿರ್ಬಂಧಗಳಲ್ಲಿ ಹಲವು ಸಡಿಲಿಕೆಗಳನ್ನು ಮಾಡಿದೆ. ಅಕ್ಟೋಬರ್ 18 ರಿಂದ ಜಾರಿಗೆ ಬರುವಂತೆ ದೇಶಿಯ ವಿಮಾನಗಳಲ್ಲಿ ಶೇ 100ರಷ್ಟು ಪ್ರಯಾಣಿಕರು ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ.
ವಿವಿಧ ರಾಜ್ಯಗಳಲ್ಲಿ ಸಹ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅಕ್ಟೋಬರ್ 19ರ ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 24 ಗಂಟೆಯಲ್ಲಿ 13,058 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,40,96,768.
24 ಗಂಟೆಯಲ್ಲಿ ದೇಶದಲ್ಲಿ 164 ಜನರು ಮೃತಪಟ್ಟಿದ್ದಾರೆ. ಇದುವರೆಗೂ ದೇಶದಲ್ಲಿ 3,34,54,720 ಜನರು ಗುಣಮುಖಗೊಂಡಿದ್ದಾರೆ. ಒಟ್ಟು ಮೃತಪಟ್ಟವರು 4,52,526 ಜನ. ಸಕ್ರಿಯ ಪ್ರಕರಣಗಳ ಸಂಖ್ಯೆ 1,76,388. ಕೇರಳ ರಾಜ್ಯದಲ್ಲಿ ಮಾತ್ರ ಹೊಸ ಪ್ರಕರಣಗಳು ಹೆಚ್ಚಿವೆ. ಉಳಿದಂತೆ ಎಲ್ಲಾ ರಾಜ್ಯಗಳಲ್ಲಿ ಹೊಸ ಪ್ರಕರಣ ಇಳಿಮುಖವಾಗಿದೆ.












Click it and Unblock the Notifications