ಮಳೆಯಿಲ್ಲದೆ ಕಂಗೆಟ್ಟ ಗ್ರಾಮಸ್ಥರು ಏನ್ಮಾಡಿದ್ರು ನೋಡಿ

ಈ ಮಧ್ಯೆ, ಚಾಮರಾಜನಗರ ಜಿಲ್ಲೆ ಗ್ರಾಮವೊಂದರ ಗ್ರಾಮಸ್ಥರು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಮೂಢನಂಬಿಕೆಗೆ ಮೊರೆಹೋಗಿದ್ದಾರೆ. ಕೃಷಿ ಭಾರತದಲ್ಲಿ ಮೂರು ವರ್ಷಗಳಿಂದ ಮಳೆಯೆ ಬಾರದಿರುವಾಗ ಪಾಪ ಗ್ರಾಮಸ್ಥರು ತಾನೆ ಏನು ಮಾಡಿಯಾರು?
ಅನ್ಯಮಾರ್ಗ ಕಾಣದೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ಚಿರಕನಹಳ್ಳಿ ಗ್ರಾಮದ ಜನ 'ತೊನ್ನು ಬಂದವರನ್ನು ಸುಡದೆ ಹೂಳಿದ್ದರಿಂದ ಮಳೆ ಬಂದಿಲ್ಲ' ಎಂದು ಅನುಮಾನಿಸಿ ಒಂಬತ್ತು ಶವಗಳನ್ನು ಹೊರ ತೆಗೆದು ಸುಟ್ಟು ಹಾಕಿದ್ದಾರೆ.
ಚಿರಕನಹಳ್ಳಿಯ ಗ್ರಾಮಸ್ಥರು ಗುರುವಾರ ರಾತ್ರಿ ಸಭೆ ಸೇರಿ 'ತಮ್ಮೂರಿಗೆ ಮೂರು ವರ್ಷದಿಂದ ಸರಿಯಾಗಿ ಮಳೆಯಾಗುತ್ತಿಲ್ಲ. ಇದಕ್ಕೆ ಕಾರಣವೇನು?' ಎಂದು ಮುಗ್ಧರಾಗಿ ಸಾಮೂಹಿಕ ಚಿಂತನೆ ನಡೆಸಿದ್ದಾರೆ.
'ರಾಜ್ಯದ ಯಾವುದೋ ಹಳ್ಳಿಯಲ್ಲಿ ಈ ಹಿಂದೆಯೂ ಇಂತಹುದೇ ಪರಿಸ್ಥಿತಿ ಎದುರಾಗಿತ್ತಂತೆ. ಆಗ ಸಮಾಧಿ ಮಾಡಲಾಗಿದ್ದ ತೊನ್ನು ಹೊಂದಿದ್ದ ವ್ಯಕ್ತಿಗಳ ಶವಗಳನ್ನು ಮತ್ತೆ ಭೂಮಿಯಿಂದ ಹೊರತೆಗೆದು, ಚಿತೆಗೇರಿಸಿ, ಶವಸಂಸ್ಕಾರಗಳನ್ನು ಮಾಡಿದರಂತೆ. ಅದಾದ ಮೇಲೆ ಮಳೆಯಾಗಿತ್ತಂತೆ' ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಗ್ರಾಮದ ಹಿರಿಯರು 'ನಾವೂ ಹಾಗೆ ಮಾಡೋಣ' ಎಂದು ಚರ್ಚಿಸಿ, 3 ವರ್ಷಗಳ ಹಿಂದೆ ಮರಣ ಹೊಂದಿದ್ದ ಅರೆಬರೆ ಜೀರ್ಣಾವಸ್ಥೆಯಲ್ಲಿದ್ದ 7 ಶವಗಳು ಮತ್ತು 2 ಅಸ್ಥಿಪಂಜರಗಳನ್ನು ನಿನ್ನೆ ಶುಕ್ರವಾರ ಬೆಳಗ್ಗೆ 10 ಗಂಟೆಯಲ್ಲಿ ಹೊರತೆಗೆದು, ಬೆಂಕಿಯಲ್ಲಿ ಸುಟ್ಟಿದ್ದಾರೆ.
ಮಳೆರಾಯನಿಗೆ ಚಿರಕನಹಳ್ಳಿಯ ಮೇಲಿನ ಮುನಿಸು ಇನ್ನಾದರೂ ಶಾಂತವಾಗುತ್ತದಾ? ಗೊತ್ತಿಲ್ಲ, ಆದರೂ ಗ್ರಾಮದ ಮುಗ್ಧ ಮನಸ್ಸುಗಳ ಪ್ರಾರ್ಥನೆಗೆ ವರುಣರಾಯ ಅಸ್ತು ಅನ್ನಲಿ, ಸಾಕು.












Click it and Unblock the Notifications