ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಬೇಡ ಸುಪ್ರೀಂಗೆ ವರದಿ
ಬೆಂಗಳೂರು, ಜುಲೈ 23 : ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಸುಪ್ರೀಂಕೋರ್ಟ್ ರಚನೆ ಮಾಡಿದ್ದ ಸಮಿತಿ ವರದಿ ನೀಡಿದೆ. ವರದಿಗೆ ಆಕ್ಷೇಪಣೆ ಸಲ್ಲಿಸಲು ಕೇರಳ ಸರ್ಕಾರ ಕಾಲಾವಕಾಶ ಕೇಳಿದೆ.
ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಬಂಡೀಪುರ: ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ
ಈ ವರ್ಷದ ಆರಂಭದಲ್ಲಿ ಸುಪ್ರೀಂಕೋರ್ಟ್ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವ ಕುರಿತು ವರದಿ ನೀಡುವಂತೆ ಸಮಿತಿ ರಚನೆ ಮಾಡಿತ್ತು. ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದ ಸಮಿತಯಲ್ಲಿ ಕೇರಳ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರದ ಪ್ರತಿನಿಧಿಗಳಿದ್ದರು.
ಈಗ ಸಮಿತಿ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದೆ. ರಾತ್ರಿ ವೇಳೆ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಪುನಃ ಆರಂಭಿಸುವ ಅಗತ್ಯವಿಲ್ಲ. ಪರ್ಯಾಯ ಮಾರ್ಗದತ್ತ ಗಮನಹರಿಸಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.
2009ರಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗಳು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯ ತನಕ ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿದ್ದರು. ಆದರೆ, ಕೆಲವು ತಿಂಗಳ ಬಳಿಕ ಈ ಆದೇಶ ವಾಪಸ್ ಪಡೆಯಲಾಗಿತ್ತು.
ಬಸ್ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋ
ಬಳಿಕ ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ರಾತ್ರಿ ವೇಳೆ ವಾಹನ ಸಂಚಾರ ಬೇಡ ಎಂದು ಹೇಳಿದ ಕೋರ್ಟ್, ಪರ್ಯಾಯ ಮಾರ್ಗ ನಿರ್ಮಿಸುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಿತು. ಕರ್ನಾಟಕ ಹುಣಸೂರು-ಗೋಣಿಕೊಪ್ಪ-ಕುಟ್ಟಾ ನಡುವಿನ ರಾಜ್ಯ ಹೆದ್ದಾರಿಯನ್ನು 30 ಕಿ.ಮೀ. ವಿಸ್ತರಣೆ ಮಾಡಿ ಪರ್ಯಾಯ ಮಾರ್ಗ ನಿರ್ಮಿಸಬಹುದು ಎಂದು ವಾದ ಮಂಡಿಸಿದೆ.