ಯಲ್ಲಾಲಿಂಗನ ಕೊಲೆ, ಪರಿಷತ್ನಲ್ಲಿ ಕಾವೇರಿದ ಚರ್ಚೆ
ಬೆಳಗಾವಿ, ಜು.02 : ಕೊಪ್ಪಳದಲ್ಲಿ ನಡೆದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ಆದರೆ, ಪ್ರಕರಣದ ತನಿಖೆಯನ್ನು ಸಿಐಡಿಯಿಂದಲೇ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಬುಧವಾರದ ಕಲಾಪದ ವೇಳೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಯಲ್ಲಾಲಿಂಗನ ಕೊಲೆ ಪ್ರಕರಣದ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಮಾತಿನ ಮಧ್ಯೆ ಸಚಿವ ಶಿವರಾಜ ತಂಗಡಗಿ ಅವರನ್ನು ಕೊಲೆಗಡುಕ ಎಂದು ಆರೋಪಿಸಿದರು. ಇದರಿಂದ ಕಾಂಗ್ರೆಸ್ ಸದಸ್ಯರು ಅಸಮಾಧಾನಗೊಂಡರು. [ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆ ಸಿಐಡಿಗೆ]

ಸುಮಾರು ಮೂರು ಗಂಟೆಗಳ ಕಾಲ ಈ ಬಗ್ಗೆ ವಿಧಾನಪರಿಷತ್ತಿನಲ್ಲಿ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಸಚಿವ ತಂಗಡಗಿ ಅವರ ಪರವಾಗಿ ಮಾತನಾಡಿದರು. ಸಿಬಿಐ ತನಿಖೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಉತ್ತರ ಕೊಟ್ಟರು. ಉತ್ತರದಿಂದ ತಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಇದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು. [ಯಲ್ಲಾಲಿಂಗನ ಕೊಲೆ, ಹನುಮೇಶ ನಾಯಕ ಸಿಐಡಿ ವಶಕ್ಕೆ]
ಕಲಾಪದಲ್ಲಿದ್ದರು : ಯಲ್ಲಾಲಿಂಗನ ಕೊಲೆ ಪ್ರಕರಣದ ಚರ್ಚೆ ನಡೆಯುವಾಗ ಸಚಿವ ಶಿವರಾಜ ತಂಗಡಗಿ ಕಲಾಪದಲ್ಲಿದ್ದರು, ಕೆ.ಎಸ್.ಈಶ್ವರಪ್ಪ ಅವರು ಹೆಸರು ಪ್ರಸ್ತಾಪಿಸಿದ್ದಕ್ಕೆ ಕೋಪಗೊಂಡ ಅವರು, 'ಘಟನೆ ಬೆಳಕಿಗೆ ಬಂದ ನಂತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ನನ್ನ ಕ್ಷೇತ್ರದ ಜನ ಏನೆಂದು ನನಗೆ ಗೊತ್ತಿದೆ. ಸುಮ್ಮನೇ ಟೀಕಿಸಬೇಡಿ' ಎಂದರು.[ಬುಧವಾರದ ಕಲಾಪದಲ್ಲಿ ಏನಾಯ್ತು?]
ಇದಕ್ಕೆ ಉತ್ತರಿಸಿದ ಈಶ್ವರಪ್ಪ ಅವರು, 'ಕೊಲೆಗಡುಕ ಸಚಿವ ಇಲ್ಲಿ ಮಾತನಾಡುವುದು ಬೇಡ. ಅವರ ಉತ್ತರ ಕೇಳಲು ಬಂದಿಲ್ಲ ಎಂದು ಹೇಳಿದ್ದು ಕಾಂಗ್ರೆಸ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಪ್ರಕರಣದ ಬಗ್ಗೆ ಸದನಕ್ಕೆ ಉತ್ತರ ನೀಡಿದರು, ಆದರೆ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಸಿದ್ದರಾಮಯ್ಯ ಕೊಟ್ಟ ಉತ್ತರ : ಸದನಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಯಲ್ಲಾಲಿಂಗ ಕೊಲೆ ಪ್ರಕರಣದ ತನಿಖೆ ಸಿಐಡಿಯಿಂದಲೇ ನಡೆಸಲಾಗುವುದು. ತನಿಖೆಯನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ. ನಮ್ಮ ಕರ್ನಾಟಕ ಪೊಲೀಸರು ಸಮರ್ಥರಿದ್ದು ಈಗಾಗಲೇ ಪ್ರಕರಣದಲ್ಲಿ ಭಾಗಿಯಾದ 9 ಜನರನ್ನು ಬಂಧಿಸಿದ್ದಾರೆ' ಎಂದರು.
'ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸತ್ಯ ಹೊರಬರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಸಮಂಜಸವಲ್ಲ' ಎಂದು ಹೇಳಿದರು.
ಏನಿದು ಪ್ರಕರಣ : ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಬೈಟ್ ಕೊಟ್ಟಿದ್ದ ಕೊಪ್ಪಳದಲ್ಲಿ ಯಲ್ಲಾಲಿಂಗ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿತ್ತು. 2015ರ ಜನವರಿ 10ರಂದು ಯಲ್ಲಾಲಿಂಗನ ಕೊಲೆಯಾಗಿದ್ದು, ಸಣ್ಣ ನೀರಾವರಿ ಸಚಿವ ಸಚಿವ ಶಿವರಾಜ ತಂಗಡಗಿ ಆಪ್ತರು ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ.












Click it and Unblock the Notifications