ಇಂದಿನಿಂದ 'ನಿವಾರ್' ಆರ್ಭಟ: ಬೆಂಗಳೂರಲ್ಲೂ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ನವೆಂಬರ್ 25: ತಮಿಳುನಾಡು ಮತ್ತು ಪುದುಚೆರಿಯ ಕರಾವಳಿ ಭಾಗಗಳಲ್ಲಿ ನಡುಕ ಹುಟ್ಟಿಸಿರುವ ನಿವಾರ್ ಚಂಡಮಾರುತ ಇಂದು (ಬುಧವಾರ) ಮಧ್ಯಾಹ್ನ ಅಪ್ಪಳಿಸಿದೆ. ಇದರ ಪರಿಣಾಮ ನೆರೆಯ ರಾಜ್ಯಗಳ ಮೇಲೆಯೂ ಆಗಲಿದ್ದು, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಮಳೆ ಸುರಿಯಲಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ಸ್ಥಿತಿ ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಭಾರಿ ಮಳೆ ಸುರಿಸುವ ಸಾಧ್ಯತೆ ಇದೆ. ಗಂಟೆಗೆ ಸುಮಾರು 120 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಭಾರಿ ಅನಾಹುತ ಉಂಟುಮಾಡುವ ಭಯ ಮೂಡಿಸಿದೆ.
ಬೆಂಗಳೂರಿನಲ್ಲಿ ಈಗಾಗಲೇ ಚಂಡಮಾರುತದ ಪ್ರಭಾವ ಕಂಡುಬಂದಿದ್ದು, ಮೋಡ ಹಾಗೂ ಗಾಳಿ ತೀವ್ರವಾಗಿದೆ. ಹಾಗೆಯೇ ಮಧ್ಯಾಹ್ನದ ಬಳಿಕ ವಿಪರೀತ ಮಳೆ ಸುರಿಯುವ ಸಂಭವ ಇದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುವ ಆತಂಕವಿದೆ. ಕಳೆದ ಕೆಲವು ವಾರಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ಬೆಂಗಳೂರಿನ ಹಲವು ಭಾಗಗಳು ಜಲಾವೃತಗೊಂಡಿದ್ದವು. ಅದರಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತ ಎದುರಾಗಬಹುದು.
ಸಂಭಾವ್ಯ ಹಾನಿ ತಪ್ಪಿಸಲು ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಲ್ಲಿ ಜನರ ರಕ್ಷಣೆಗೆ ಮತ್ತು ಪರಿಹಾರ ಕಾರ್ಯಾಚರಣೆಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ಮುಂದೆ ಓದಿ.

ರಾಜ್ಯದಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಈ ಭಾಗಗಳಲ್ಲಿ ಎರಡೂ ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

22 ಎನ್ಡಿಆರ್ಎಫ್ ತಂಡ
ಇನ್ನು ತಮಿಳುನಾಡು, ಪುದುಚೆರಿ ಮತ್ತು ಆಂಧ್ರಪ್ರದೇಶದ ರಾಯಲಸೀಮೆ ಭಾಗಗಳಲ್ಲಿ ಎನ್ಡಿಆರ್ಎಫ್ನ 22 ತುಕಡಿ ಸೇರಿದಂತೆ 1,200 ಮಂದಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರಲ್ಲಿ 800 ಮಂದಿಯ ತಂಡಗಳು ಸನ್ನದ್ಧವಾಗಿವೆ.

ಎನ್ಡಿಆರ್ಎಫ್ ತಂಡಗಳು ಸಜ್ಜು
ತಮಿಳುನಾಡಿನಲ್ಲಿ 12 ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಎರಡು ತಂಡಗಳು ಪುದುಚೆರಿ, ಒಂದು ತಂಡ ಕಾರೈಕಲ್ನಲ್ಲಿ ಸಜ್ಜುಗೊಂಡಿವೆ. ಇನ್ನು ಮೂರು ತಂಡಗಳು ನೆಲ್ಲೂರು, ವಿಶಾಖಪಟ್ಟಣ ಮತ್ತು ಒಂದು ತಂಡ ಚಿತ್ತೂರಿನಲ್ಲಿ ವಿಪತ್ತು ಎದುರಿಸಲು ಸನ್ನದ್ಧವಾಗಿವೆ. 22 ತಂಡಗಳು ಅಪಾಯಕಾರಿ ಎಂದು ಗುರುತಿಸಲಾಗಿರುವ ಸ್ಥಳಗಳಲ್ಲಿ ಬೀಡುಬಿಟ್ಟಿದ್ದರೆ, ಇನ್ನು ಎಂಟು ತಂಡಗಳು ಹೆಚ್ಚುವರಿ ನೆರವು ನೀಡಲು ಸಿದ್ಧವಾಗಿವೆ.

ಮುನ್ನಗ್ಗುತ್ತಿದೆ ಚಂಡಮಾರುತ
ತಮಿಳುನಾಡು ಮತ್ತು ಪುದುಚೆರಿಯ ಅನೇಕ ಕಡೆ ಈಗಾಗಲೇ ಮಳೆ ಆರ್ಭಟ ಶುರುವಾಗಿದೆ. ಪುದುಚೆರಿಯಿಂದ ಪೂರ್ವ ಆಗ್ನೇಯ ದಿಕ್ಕಿನ 410 ಕಿಮೀ ದೂರ ಮತ್ತು ಚೆನ್ನೈಗೆ ದಕ್ಷಿಣ ಆಗ್ನೇಯ ದಿಕ್ಕಿನಿಂದ 450 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ಭೂಭಾಗಗಳತ್ತ ಮುನ್ನುಗ್ಗುತ್ತಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ ಅದರ ತೀವ್ರತೆಯ ಪ್ರಮಾಣ ಅರಿವಾಗಲಿದೆ.












Click it and Unblock the Notifications