ಸಿದ್ದರಾಮಯ್ಯ ರಾಜೀನಾಮೆ; ದಲಿತ ಸಿ.ಎಂ, ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ - ಬಿ!
Muda Scam Row: ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣದ ಕಾನೂನು ಪ್ರಕ್ರಿಯೆ ತೀವ್ರ ಹಂತಕ್ಕೆ ತಲುಪಿದೆ. ಈ ಬಾರಿ ಮುಖ್ಯಮಂತ್ರಿ ಬದಲಾದರೆ, ದಲಿತ ಸಿ.ಎಂ ಕನ್ಫರ್ಮ್ ಎಂದೇ ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಯಾದೆ ಪ್ರಶ್ನೆಯಿಂದ ಸೈಟುಗಳನ್ನು ಹಿಂದಿರುಗಿಸಿದ್ದಾರೆ ಎಂದು ರಾಜ್ಯ ಸಚಿವ ಮಂಡಲವೇ ಹೇಳುತ್ತಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ಸಾಲು ಸಾಲು ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಬಿಯೊಂದನ್ನು ರೆಡಿ ಮಾಡಿಕೊಂಡಿದೆ. ಆ ಪ್ಲಾನ್ ಬಿ ಏನು, ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ದಲಿತ ಸಿ.ಎಂ ಸಿಗಲಿದ್ದಾರೆಯೇ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕಾಲ ಸನ್ನಿಹಿತವಾದಂತಿದೆ. ಮೊದ ಮೊದಲು ನಿವೇಶನ ಹಂಚಿಕೆ ತಪ್ಪು ಎನ್ನುವುದಾದರೆ, ಮುಡಾದವರು 62 ಕೋಟಿ ರೂಪಾಯಿ ನೀಡಲಿ ಎಂದಿದ್ದರು ಸಿದ್ದರಾಮಯ್ಯ. ಮುಡಾದಿಂದ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಲಾಗಿದೆ. ನಾವು ಯಾಕೆ ಕೇಳಬಾರದು ಎಂದಿದ್ದ ಸಿದ್ದರಾಮಯ್ಯ ಅವರು ಸೈಟುಗಳನ್ನು ಮುಡಾಗೆ ಹಿಂದಿರುಗಿಸಿದ್ದರ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅವರ ದ್ವೇಷದ ರಾಜಕೀಯದಿಂದ ಬೇಸತ್ತು ಪತ್ನಿ ಪಾರ್ವತಿ ಅವರು ಸೈಟು ಹಿಂದಿರುಗಿಸಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಹಗರಣಗಳಲ್ಲಿ ಸಿಲುಕಿಲ್ಲ, 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯೂ ಇಲ್ಲ ಎಂದು ಹೇಳಿದ್ದಾರೆ. ಆದರೆ, ಮುಡಾದಲ್ಲಿ ಮುಖ್ಯಮಂತ್ರಿಯ ಪಾತ್ರವಿದೆ. ಮುಖ್ಯಮಂತ್ರಿ ರಾಜೀನಾಮೆ ಕೊಡಲೇಬೇಕು ಎಂದು ವಿರೋಧ ಪಕ್ಷಳು ಆಗ್ರಹಿಸಿವೆ. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ, ಹೋರಾಟ ನಡೆಸುತ್ತಿವೆ. ಇದು ಕಾಂಗ್ರೆಸ್ ಹೈಕಮಾಂಡ್ ಅನ್ನು ಮುಜುಗರಕ್ಕೆ ದೂಡಿದೆ.

ಕರ್ನಾಟಕ ದಲಿತ ಸಚಿವರ ರಹಸ್ಯ ಸಭೆ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎನ್ನುವ ವಿಷಯ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್ನಲ್ಲಿಯೇ ಚರ್ಚೆಯಾಗುತ್ತಿದೆ. ಈ ನಡುವೆ ಮಂಗಳವಾರ ತಡರಾತ್ರಿ ಕರ್ನಾಟಕ ಕಾಂಗ್ರೆಸ್ನ ಪ್ರಮುಖ ದಲಿತ ಸಚಿವರು ಒಂದೆಡೆ ಸೇರಿ ಸಭೆ ನಡೆಸಿದ್ದಾರೆ. ಸಚಿವ ಎಚ್.ಸಿ ಮಹದೇವಪ್ಪ ಅವರ ಮನೆಯಲ್ಲಿ ರಹಸ್ಯ ಸಭೆ ನಡೆದಿದೆ. ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಇದ್ದರು. ಸುದೀರ್ಘ ಅವಧಿಗೆ ಈ ಸಭೆ ನಡೆದಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಮುಂದೆ ಸಿ.ಎಂ ಬದಲಾವಣೆ ವಿಷಯ ಪ್ರಸ್ತಾಪವಾದರೆ ಅವಕಾಶ ಬಿಡಬಾರದು ಎಂದು ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ದಲಿತ ಸಿ.ಎಂ ಕೂಗು ಬಹುದಿನಗಳಿಂದ ಇದೆ. ದಲಿತ ನಾಯಕೊರಬ್ಬರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಈ ಹಿಂದೆಯೂ ಹಲವು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಇನ್ನು ಈಚೆಗಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಭೆ ಸೇರಿದ್ದರು. ಆದರೆ, ಇದು ರಾಜಕೀಯ ಸಭೆ ಅಲ್ಲ ಎಂದು ಪರಮೇಶ್ವರ್ ಅವರು ಸ್ಪಷ್ಟ ಪಡಿಸಿದ್ದರು. ಆದರೆ, ಮುಡಾ ಕಾವು ಹೆಚ್ಚಾಗುತ್ತಿರುವುದು ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿರುವ ಸಂದರ್ಭದಲ್ಲೇ ಈ ರೀತಿ ಸಚಿವರು ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಹೈಕಮಾಂಡ್ನಿಂದ ಪ್ಲಾನ್ ಬಿ
ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಬಿಯೊಂದನ್ನು ರೆಡಿ ಮಾಡಿಕೊಂಡಿದೆ. ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿದರೆ ಪ್ಲಾನ್ ಬಿಯೊಂದನ್ನು ಸಿದ್ಧ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾದರೆ, ಅಗತ್ಯ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಪ್ಲಾನ್ - ಬಿ ಎಕ್ಸಿಕ್ಯೂಟ್ ಮಾಡಲಿದೆ. ಈಚೆಗಷ್ಟೇ ಕಾಂಗ್ರೆಸ್ ಹೈಕಮಾಂಡ್ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಡಾ.ಜಿ ಪರಮೇಶ್ವರ್ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿತ್ತು. ಇದೀಗ ಗೌಪ್ಯ ಸಭೆ ನಡೆದಿದೆ. ಇದೆಲ್ಲವನ್ನೂ ಗಮನಿಸಿದರೆ, ಒಂದಕ್ಕೊಂದು ಕನೆಕ್ಷನ್ ಇರುವಂತೆಯೇ ಇದೆ.












Click it and Unblock the Notifications