ಡಿಸಿಎಂ ಇಲ್ಲಾಂದ್ರೂ ಓಕೆ, ಬಟ್, ಆ ಖಾತೆ ಕೊಟ್ಟಿಲ್ಲಾಂದ್ರೆ ಮಾತ್ರ ನಾಟ್ ಓಕೆ: ಜಾರಕಿಹೊಳಿ
ಬೆಳಗಾವಿ, ಜ 30: ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ವಿಮಾನ ಏರುತ್ತಿದ್ದಂತೆಯೇ, ಸಚಿವ ಸ್ಥಾನದ ಆಕಾಂಕ್ಷಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುವ ಸದ್ದು ಜೋರಾಗಿ ಕೇಳಲಾರಂಭಿಸಿದೆ.
Recommended Video
ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ವಾಲ್ಮೀಕಿ ಸಮುದಾಯದ ಇಬ್ಬರು ನಾಯಕರಾದ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದರು. ಈಗ ಅದು ಸಾಧ್ಯವಿಲ್ಲ ಎಂದು ಸಿಎಂ ಖಡಾಖಂಡಿತವಾಗಿ ಹೇಳಿದ ಮೇಲೆ, ತಮ್ಮ ವರಸೆಯನ್ನು ಇಬ್ಬರೂ ಬದಲಾಯಿಸಿದ್ದಾರೆ.
ಇನ್ನು ಅಣ್ಣನ ಪರವಾಗಿ ತಮ್ಮ, ಕಮ್ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡಾ ಲಾಬಿ ನಡೆಸಲಾರಂಭಿಸಿದ್ದಾರೆ. ಡಿಸಿಎಂ ಹುದ್ದೆ ಕೊಡದಿದ್ದರೂ ಪರವಾಗಿಲ್ಲ, ಆದರೆ ಆಯಕಟ್ಟಿನ ಸ್ಥಾನವನ್ನು ನೀಡಬೇಕೆಂದು ಸಹೋದರರಿಬ್ಬರೂ ಹಠ ಹಿಡಿದಿದ್ದಾರೆ ಎನ್ನುವ ಮಾಹಿತಿಯಿದೆ.

ಮೊದಲಿಂದಲೂ ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣಿಟ್ಟಿದ್ದ ರಮೇಶ್ ಜಾರಕಿಹೊಳಿ ಆ ಸ್ಥಾನವನ್ನು ತಮಗೇ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಅದ್ಯಾಕೋ, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಈ ಖಾತೆಯನ್ನು ನಿಭಾಯಿಸಿದ್ದರು ಎನ್ನುವ ಕಾರಣಕ್ಕಾಗಿಯೋ ಏನೋ, ರಮೇಶ್ ಈ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಯಾವ ಸ್ಥಾನದ ಖಚಿತ ಭರವಸೆಯೂ ನೂತನ ಶಾಸಕರಿಗೆ ಸಿಕ್ಕಿಲ್ಲ. ಕಾರಣ, ಬಿಜೆಪಿಯ ಆಂತರಿಕ ವಲಯದಲ್ಲಿ ತೋರಿಬರುತ್ತಿರುವ ಆಕ್ಷೇಪಗಳು. ಹಾಗಾಗಿ. ಸಂಪುಟ ವಿಸ್ತರಣೆಯದ್ದು ಒಂದು ಕಥೆಯಾದರೆ, ಸಚಿವ ಸ್ಥಾನ ಹಂಚುವುದು ಇನ್ನೊಂದು ಕಥೆಯಾಗುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications