Government Employees: 7ನೇ ವೇತನ ಆಯೋಗ ವರದಿ ಅನುಷ್ಠಾನದ ಬದಲು ಸರ್ಕಾರಿ ನೌಕರರಿಗೆ ಹೊಸ ಹೊರೆ!
ಬೆಂಗಳೂರು, ಏಪ್ರಿಲ್. 20: ಈಗಾಗಲೇ ರಾಜ್ಯದ ಸರ್ಕಾರಿ ನೌಕರರು 7ನೇ ವೇತನ ಆಯೋಗ ವರದಿ ಜಾರಿಯಾಗಿಲ್ಲ ಎಂಬ ಬೇಸರದಲ್ಲಿದ್ದಾರೆ. ವರದಿ ಅನುಷ್ಠಾನಕ್ಕಾಗಿ ಕಾಯುತ್ತಿದ್ದವರಿಗೆ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಅಡ್ಡಿಯಾಗಿದೆ. ಇದರ ಬೆನ್ನಲ್ಲೇ ಸರ್ಕಾರಿ ನೌಕರರ ಮೇಲೆ ಹೊಸ ಬರೆ ಬಿದ್ದಿದೆ.
ಕಡ್ಡಾಯ ಜೀವ ವಿಮಾ ನಿಯಮಾವಳಿ ಅನ್ವಯ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ 72,754 ಸರ್ಕಾರಿ ಅಧಿಕಾರಿ ಮತ್ತು ನೌಕರರು ಜೀವ ವಿಮೆ ಪಡೆದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದೆ. ಹೀಗಾಗಿ ಅವರ ಸರಾಸರಿ ವೇತನ ಶ್ರೇಣಿಯಲ್ಲಿ ಕನಿಷ್ಠ ಶೇಕಡಾ 6.25 ಮಾಸಿಕ ವಿಮಾ ಕಂತು ಕಡ್ಡಾಯವಾಗಿ ತೆಗೆದುಕೊಳ್ಳಲು, ಕಂತು ಕಡಿತ ಮಾಡಿಲು ಆದೇಶಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಖಜಾನೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮೆ ಪಡೆಯಬೇಕಿರುತ್ತದೆ.
ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 6 (ii) ರ ಅನ್ವಯ 50 ವರ್ಷ ವಯಸ್ಸು ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಜೀವ ವಿಮಾ ಪಾಲಿಸಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಿಸಲಾಗಿದೆ. ಆದರೆ, 50 ವರ್ಷ ದಾಡದ ಹಲವು ಮಂದಿ ಜೀವ ವಿಮೆ ಪಡೆದಿಲ್ಲ ಎಂಬುದು ತಿಳಿದು ಬಂದಿದೆ.
ಮಾರ್ಚ್ 31ರ ಅಂತ್ಯಕ್ಕೆ 50 ವರ್ಷ ವಯಸ್ಸು ಪೂರ್ಣಗೊಂಡಿರುವ ನೌಕರರನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಸುಮಾರು 72,754 ಅಧಿಕಾರಿಗಳಳು ಮತ್ತು ನೌಕರರು ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ವಿಮಾ ಇಲಾಖೆಯಲ್ಲಿ ಜೀವ ವಿಮೆ ಪಡೆಯದೇ ಇರುವುದು ಕಂಡುಬಂದಿದೆ.
ಹೀಗಾಗಿ ಈಗಾಗಲೇ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವವಿಮಾ ನಿಯಮಾವಳಿಗಳ ನಿಯಮ 8 ನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಕರ್ನಾಟಕ ಆರ್ಥಿಕ ಸಂಹಿತ ಅನುಚ್ಛೇದ 26 (1) ಮತ್ತು ಕರ್ನಾಟಕ ಖಜಾನೆ ಸಂಹಿತೆಯ ಅನುಚ್ಛೇದ 87 (1) ರಲ್ಲಿ ಅವಕಾಶವಿರುವಂತೆ, ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಷ್ಟು ಶೇಕಡಾವಾರು ವಿಮಾ ಕಂತನ್ನು ನೌಕರರ ವೇತನದಲ್ಲಿ ಕಟಾವಣೆ ಮಾಡಬೇಕಿದೆ.
ಆದರೆ, 2024 ರ ಮಾರ್ಚ್ 31ರ ಅಂತ್ಯಕ್ಕೆ ಅಂದಾಜು 72,754 ಅಧಿಕಾರಿ ಮತ್ತು ನೌಕರರು ಜೀವವಿಮೆ ಪಡೆಯದಿರುವುದು ಪತ್ತೆಯಾಗಿದೆ. ಇವರಿಂದ ಕನಿಷ್ಠ ವಿಮಾ ಕಂತು ಕಡಿತಗೊಳಿಸಲು ಕ್ರಮಕ್ಕೆ ಆದೇಶಿಸಲಾಗಿದೆ. ಇವರ ವಿಮಾ ಕಂತನ್ನು ಕಟಾವಣೆ ಮಾಡಿರುವ ಬಗ್ಗೆ ವೇತನ ಬಿಲ್ಲುಗಳನ್ನು ತೀರ್ಣಗೊಳಿಸುವಾಗ ಖಜಾನೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ, ಪ್ರತಿಯೊರ್ವ ಅರ್ಹ ಅಧಿಕಾರಿ ಮತ್ತು ಸಿಬ್ಬಂದಿಯ ಕನಿಷ್ಠ ವಿಮಾ ಕಂತನ್ನು ಕಡಿತಗೊಳಿಸಿರುವ ಕುರಿತು ಖಚಿತಪಡಿಸಿಕೊಳ್ಳುವಂತೆ ವೇತನ ಬಟವಾಡೆ ಅಧಿಕಾರಿಗಳಿಗೆ ಖಜಾನೆ ಆಯುಕ್ತರು ಸೂಚಿಸಿದ್ದಾರೆ. ವೇತನ ಶ್ರೇಣಿಯಲ್ಲಿ ಶೇ.6.25 ವಿಮಾ ಕಂತು ಕಡಿಗೊಳ್ಳದಿದ್ದಲ್ಲಿ ಅಥವಾ ನಿಗದಿಗಿಂತ ಕಡಿಮೆ ಕಟಾವಣೆಯಾಗಿದ್ದಲ್ಲಿ ಅಂತಹ ಬಿಲ್ಲುಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಹಿಂದಿರುಗಿಸುವಂತೆಯೂ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
ಖಜಾನೆ ಇಲಾಖೆಯ 200 ಅಧಿಕಾರಿಗಳು/ಸಿಬ್ಬಂದಿಯ ಸರಾಸರಿ ವೇತನದ ಶೇ 6.25 ರಷ್ಟು ಕನಿಷ್ಠ ಮಾಸಿಕ ವಿಮಾ ಕಂತಿಗಿಂತ ಕಡಿಮೆ ಕಡಿತಗೊಳಿಸುತ್ತಿರುವುದು ಕಂಡುಬಂದಿರುತ್ತದೆ. ಈ ಕುರಿತು ಪರಿಶೀಲಿಸಿ ಕನಿಷ್ಠ ವಿಮಾ ಕಂತಿಗೆ ಪಾಲಿಸಿಯನ್ನು ಪಡೆದು ಕನಿಷ್ಠ ಕಂತನ್ನು ಕಡಿತಗೊಳಿಸುವ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದು ಎಂದು ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಮಾ ಕಂತಿಗೆ ಎಷ್ಟು ಕಡಿತವಾಗಲಿದೆ?
ಹೊಸ ವೇತನ ಶ್ರೇಣಿಯಂತೆ ಕೆಜಿಐಡಿ ವಿಮಾ ಕಂತು ನಿಗದಿಪಡಿಸಿದೆ. ಇದರ ಪ್ರಕಾರ ಆರಂಭಿಕ ಮೂಲವೇತನ 17 ಸಾವಿರ ರೂ.ನಿಂದ ಕೊನೆಯ ಮೂಲವೇತನ 28,950 ರೂ. ಹೊಂದಿರುವ ಹುದ್ದೆಯ ಅಧಿಕಾರಿ ಅಥವಾ ನೌಕರರರಿಂದ ಮಾಸಿಕ 1,436 ರೂಪಾಯಿ ವಿಮಾ ಕಂತು ಕಡಿತವಾಗಲಿದೆ. ಆರಂಭಿಕ ಮೂಲವೇತನ 1,046,00 ರೂ.ನಿಂದ ಕೊನೆಯ ಮೂಲವೇತನ 1,50,600 ರೂ. ಹೊಂದಿರುವ ಹುದ್ದೆಯ ಅಧಿಕಾರಿ ಅಥವಾ ನೌಕರನ ವೇತನದಿಂದ ಮಾಸಿಕ 7,975 ರೂಪಾಯಿ ಕಡಿತವಾಗಲಿದೆ.












Click it and Unblock the Notifications