ಕಾಂಗ್ರೆಸ್ ಇರೋದೇ ಕೈಕೊಡಕ್ಕೆ-ಬಿಜಾಪುರದಲ್ಲಿ ಮೋದಿ
ಬಿಜಾಪುರ, ಮಾ.30: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಐದನೇ ದಿನದ ಭಾರತ್ ವಿಜಯ್ ಸಮಾವೇಶವನ್ನು ಭಾನುವಾರ ಮುಂದುವರೆಸಿದ್ದಾರೆ. ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಮೋದಿ ಅವರು ಕರ್ನಾಟಕದ ಬಿಜಾಪುರದಲ್ಲಿ ಸಮಾವೇಶಕ್ಕೆ ಒಂದು ಗಂಟೆ ತಡವಾಗಿ ಆಗಮಿಸಿದ್ದಾರೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ದರ್ಶನಕ್ಕಾಗಿ ಬಿರುಬಿಸಿಲಿನಲ್ಲಿ(ಸುಮಾರು 35 ಡಿಗ್ರಿ ಸೆಲ್ಸಿಯಸ್ ನಷ್ಟಿದೆ) ಸಾರ್ವಜನಿಕರು, ಯುವ ಮೋರ್ಚಾ ಕಾರ್ಯಕರ್ತರು ಕಾದು ಕುಳಿಕುಳಿತು ಬಸವಳಿದಿದ್ದರು. ಮೋದಿ ಭಾಷಣ ಆರಂಭಗೊಳ್ಳುತ್ತಿದ್ದಂತೆ ಮಿಂಚಿನ ಸಂಚಾರವಾದಂತೆ ಜಯಘೋಷ ಹಾಕತೊಡಗಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಬಂದ ಮೋದಿ ಅವರಿಗೆ ಸನ್ಮಾನಿಸಿ ಅಣ್ಣ ಬಸವಣ್ಣ ಅವರ ಪ್ರತಿಮೆ, ಬೆಳ್ಳಿ ಖಡ್ಗ ನೀಡಿ ಬಿಜಾಪುರದ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ಆತ್ಮೀಯವಾಗಿ ಸನ್ಮಾನಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮೋದಿ ಭಾಷಣದ ಮುಖ್ಯಾಂಶಗಳು ಇಂತಿದೆ:
* ಕನ್ನಡ ನಾಡಿನ ಮಂದಿಗೆ ಯುಗಾದಿ ಶುಭಾಶಯಗಳು ಎಂದು ಭಾಷಣ ಆರಂಭಿಸಿದ ಮೋದಿ
* ಕಾಂಗ್ರೆಸ್ ಪಕ್ಷದ ಚಿಹ್ನೆ ಕೈ. ಮೊದಲು ಕೈಮುಗಿತಾರೆ, ಆಮೇಲೆ ಕೈಕುಲುಕುತ್ತಾರೆ, ಕೊನೆಗೆ ಕೈ ಕೊಡುತ್ತಾರೆ
* ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎರಡಂಕಿ ಸೀಟುಗಳು ಸಿಗುವುದಿಲ್ಲ. ಕೆಲವೆಡೆ ಒಂದು ಸೀಟು ಗಳಿಸಲು ಪರದಾಡಲಿದೆ.
* ಮೋದಿ ಸಂಸತ್ತು ಪ್ರವೇಶಬಾರದು ಎಂದು ದೆಹಲಿಯಲ್ಲಿ ಕುಳಿತ ಸರ್ಕಾರ ಹಾಗೂ ಅವರ ಪಾಪಿ ಮಿತ್ರರು ಒಂದಾಗಿ ಕುತಂತ್ರದಲ್ಲಿ ತೊಡಗಿದ್ದಾರೆ.
* ಭಾರತದ ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವ ಸಮುದಾಯ ಹೊಂದಿದೆ. ಇದು ನಮ್ಮ ಬಳಿ ಇರುವ ಶಕ್ತಿಯಾಗಿದೆ.
* ಕುರ್ಚಿಗೆ ಅಂಟಿಕೊಂಡಿರುವ ಮಂದಿ ಎಂದಿಗೂ ಭ್ರಷ್ಟಾಚಾರವನ್ನು ಹೊರ ಹಾಕಲು ಸಾಧ್ಯವಿಲ್ಲ. ನನ್ನನ್ನು ನಂಬಿ ನಾನು ಭ್ರಷ್ಟಾಚಾರವನ್ನು ಕಿತ್ತುಹಾಕುತ್ತೇನೆ.
* ಅಮೆರಿಕ, ಯುರೋಪ್, ಜಪಾನ್ ಎಲ್ಲೆಡೆ ಸಂಚರಿಸಿ ನೋಡಿ ಕೌಶಲ್ಯ ಅಭಿವೃದ್ಧಿ ಬಗ್ಗೆ ಒತ್ತು ನೀಡಿರುವುದು ಕಾಣುತ್ತದೆ.
* ಕಾಂಗ್ರೆಸ್ ಸಮಾಪ್ತಿ ಮಾಡುವುದೇ ಮಹಾತ್ಮಾ ಗಾಂಧಿ ಅವರ ಅಂತಿಮ ಆಸೆಯಾಗಿತ್ತು. ಗಾಂಧೀಜಿ ಕನಸು ನನಸು ಮಾಡಲು ನನ್ನ ಜತೆ ಕೈ ಜೋಡಿಸಿ. ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಓಡಿಸೋಣ.
* ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಇಚ್ಛಾಶಕ್ತಿಯಿಲ್ಲ. ಕಾಂಗ್ರೆಸ್ಸಿಗೆ ನೀತಿ ನಿಯತ್ತಿಲ್ಲ. ಕಾಂಗ್ರೆಸ್ ರಾಜ್ಯಭಾರ ಮಾಡಲು ನಾಲಾಯಕ್ ಎಂದು ಗಾಂಧೀಜಿಗೆ ತಿಳಿದಿತ್ತು. ಅವರು ಕಾಂಗ್ರೆಸ್ ಪರಿಸಮಾಪ್ತಿ ಬಗ್ಗೆ ಆಲೋಚಿಸಿದ್ದರು.
* ವಾಜಪೇಯಿ ಸರ್ಕಾರವಿದ್ದಾಗ ಆರೂವರೆ ಕೋಟಿ ಜನರಿಗೆ ಉದ್ಯೋಗ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ನಿಮಗೆ ಉದ್ಯೋಗ ನೀಡಿದೆಯೇ? ಎಂದು ಪ್ರಶ್ನಿಸಿದರು.
* ಬಿಜಾಪುರದ ಸಮಾವೇಶ ಮುಗಿಸಿಕೊಂಡು ಮೋದಿ ಅವರು ಕುಂದಾ ನಗರಿ ಬೆಳಗಾವಿಗೆ ತೆರಳಿದಿದ್ದಾರೆ.

ಈ ನಡುವೆ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಬಸವನಗೌಡ ಆರ್ ಯತ್ನಾಳ್ ಅವರು ಹಿಂದುತ್ವದ ಬಗ್ಗೆ ಹೆಚ್ಚು ಒತ್ತು ನೀಡಿದರು. ನರೇಂದ್ರ ಮೋದಿ ಅವರು ಗೆದ್ದರೆ ಮಾತ್ರ ದೇಶದಲ್ಲಿ ಹಿಂದುತ್ವ ಉಳಿಯಲು ಸಾಧ್ಯ. ಕಾಂಗ್ರೆಸ್ ಸಂಸದರು ಗೆದ್ದರೆ ದೆಹಲಿಯಲ್ಲೇ ಉಳಿಯುತ್ತಾರೆ. ಬಿಜೆಪಿ ಸಂಸದರು ಮಾತ್ರ ನಿಮ್ಮ ನೋವಿಗೆ ಸ್ಪಂದಿಸಲಿದ್ದಾರೆ ಎಂದಿದ್ದಾರೆ.
ಮಾಜಿ ಸಚಿವ, ಮುಧೋಳದ ಶಾಸಕ ಗೋವಿಂದ ಕಾರಜೋಳ ಮಾತನಾಡುತ್ತಾ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿಯಾಗಬೇಕಿತ್ತು. ಆಗ ದೇಶ ಸುಭಿಕ್ಷವಾಗುತ್ತಿತ್ತು. ಮಹಾತ್ಮಾ ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸಾಗುತ್ತಿತ್ತು. ಕಾಂಗ್ರೆಸ್ ಕ್ಯಾನ್ಸರ್ ನಂತೆ ಹಬ್ಬಿದೆ. ಮೋದಿ ಅವರು ಪ್ರಧಾನಿಯಾದರೆ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದರು.
ಬಿಜಾಪುರದ ಲೋಕಸಭೆ ಕಣ: ಹಾಲಿ ಸಂಸದ ಬಿಜೆಪಿಯ ರಮೇಶ್ ಜಿಗಜಿಣಗಿ, ಕಾಂಗ್ರೆಸ್ಸಿನಿಂದ ಪ್ರಕಾಶ್ ರಾಥೋಡ್, ಜೆಡಿಎಸ್ ನಿಂದ ಕೆ .ಶಿವರಾಮ್(ಐಎಎಸ್ ಅಧಿಕಾರಿ) ಸ್ಪರ್ಧೆಯಲ್ಲಿದ್ದಾರೆ.
ಮೋದಿ ಸಮಾವೇಶದ ಲೈವ್ ವಿಡಿಯೋ ಇಲ್ಲಿದೆ ನೋಡಿ...












Click it and Unblock the Notifications