ನಳಿನ್ ಕುಮಾರ್ ಕಟೀಲ್ ನಿರ್ಗಮನ, ಕರ್ನಾಟಕ ಬಿಜೆಪಿಗೆ ಸಾರಥಿ ಯಾರು?
ಬೆಂಗಳೂರು, ಆಗಸ್ಟ್ 11: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುರ್ಚಿ ಅಲುಗಾಡುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬಗ್ಗೆ ಊಹಾಪೋಹಗಳು ಎದ್ದಿವೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಕರ್ನಾಟಕದ ಬಿಜೆಪಿ ನಾಯಕರು ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಾಗ ಆಗಸ್ಟ್ ಅಂತ್ಯದ ವೇಳೆಗೆ ಅಧಿಕಾರ ತ್ಯಜಿಸುತ್ತಾರೆ ಎಂದು ಸುಳಿವು ನೀಡಿದರು. ಆದಾಗ್ಯೂ ಕಟೀಲ್ ಮತ್ತು ಕೆಲವು ಬಿಜೆಪಿ ಪದಾಧಿಕಾರಿಗಳು ಆಗಸ್ಟ್ ಅಂತ್ಯದಲ್ಲಿ ಅವರು ನಿರ್ಗಮಿಸುವ ಸಾಧ್ಯತೆಯ ವರದಿಗಳನ್ನು ನಿರಾಕರಿಸಿದ್ದಾರೆ.
ಬಿಜೆಪಿಯಲ್ಲಿ ಈಗ ಮೂವರ ಹೆಸರು ರಾಜ್ಯಾಧ್ಯಕ್ಷರ ಹುದ್ದೆಗೆ ಜೋರಾಗಿ ಕೇಳಿ ಬರುತ್ತಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ. ಟಿ. ರವಿ ಹೆಸರು ಮುನ್ನಲೆಯಲ್ಲಿದ್ದರೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
"ನನ್ನ ಅಧಿಕಾರಾವಧಿ ಮುಗಿದಿದೆ ಎಂದು ಯಾರು ಹೇಳಿದರು?. ಪದಾಧಿಕಾರಿಗಳ ಅಧಿಕಾರಾವಧಿ ಮುಗಿದಾಗ ಬದಲಾವಣೆ ಆಗುವುದು ಸಹಜ. ನನ್ನ ಅಧಿಕಾರಾವಧಿ ಮುಗಿದಿಲ್ಲ" ಎಂದು ಬುಧವಾರ 2023ರ ಕರ್ನಾಟಕ ಚುನಾವಣೆಗೆ ಬಿಜೆಪಿಯ ಹೊಸ ವಾರ್ ರೂಮ್ ಉದ್ಘಾಟನಾ ಸಮಾರಂಭದಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿದರು.
ಜುಲೈನಲ್ಲಿ ಬಿಜೆಪಿ ಯುವ ಕಾರ್ಯಕರ್ತನ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಬಲಪಂಥೀಯ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅವರ ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸಾರ್ವಜನಿಕವಾಗಿ ಆಕ್ರೋಶ ಪ್ರದರ್ಶಿಸಿದ್ದರು. ಪ್ರವೀಣ್ ನೆಟ್ಟಾರು ಅಂತಿಮ ದರ್ಶನ ಪಡೆಯಲು ಆಗಮಿಸಿದ್ದಾಗ ನಳಿನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ ಹಾಕಲಾಗಿತ್ತು.

ದೊಡ್ಡ ಭಾಷಣಗಳನ್ನು ಮಾಡುವ ಅಗತ್ಯವಿಲ್ಲ
ಬಿಜೆಪಿಯ ಕೆಲವು ಕಾರ್ಯಕರ್ತರು ಚುನಾವಣೆ ಎದುರು ಇರುವಾಗ ರಾಜ್ಯಾಧ್ಯಕ್ಷರ ಬದಲಾವಣೆಯನ್ನು ನಿರೀಕ್ಷಿಸುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವ ಅಗತ್ಯವಿಲ್ಲ, ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ ಅಷ್ಟೇ. ಪಕ್ಷ ಸಂಘಟನೆ ಮಾಡುವಲ್ಲಿ ತೆರೆಮರೆಯಲ್ಲಿ ಅವರ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ, ಅವರು ಬೂತ್ ನಾಯಕರು ಮತ್ತು ಪಕ್ಷದ ಪ್ರಮುಖರಿಂದ ಸಂಘಟನೆಯನ್ನು ತಿಳಿದಿದ್ದಾರೆ ಎಂದು ಬಿಜೆಪಿ ವರಿಷ್ಠರೊಬ್ಬರು ಹೇಳಿದ್ದಾರೆ.

ಸಾಮಾನ್ಯ ಕಾರ್ಯಕರ್ತನಾಗಿ ಜೀವನ ಆರಂಭ
ಸದ್ಯ ದಕ್ಷಿಣ ಕನ್ನಡದ ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚುನಾವಣೆಗೆ ಸೂಕ್ತರು ಎಂದು ಪದಾಧಿಕಾರಿಗಳು ಸಲಹೆ ನೀಡಿದ್ದಾರೆ. ಏಕೆಂದರೆ ಅವರ ಪಾತ್ರವು ಕೊನೆಯ ಕಾರ್ಯಕರ್ತರ ಕಾರ್ಯತಂತ್ರಗಳನ್ನೂ ಕಾರ್ಯಗತಗೊಳಿಸುವುದರಿಂದ ಒಳಗೊಂಡಿರುತ್ತದೆ ಎನ್ನಲಾಗಿದೆ. ನಳಿನ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಆರಂಭಿಸಿ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ಅವರು ಉನ್ನತ ಸಂಸದರಲ್ಲಿ ಒಬ್ಬರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಹಣವನ್ನು ಬಳಸಿದ್ದಾರೆ ಎಂದು ಕಟೀಲ್ ಅವರ ಬೆಂಬಲಿಗರಲ್ಲಿ ಒಬ್ಬರು ಮತ್ತು ಬಿಜೆಪಿ ವಕ್ತಾರ ಜಗದೀಶ್ ಶೇಣವ ಕಳೆದ ವಾರ ಮಂಗಳೂರಿನಲ್ಲಿ ಹೇಳಿದ್ದಾರೆ.

ಅಮಿತ್ ಶಾ ಅವರೊಂದಿಗೆ ಚರ್ಚೆ
ನಳೀನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಅಮಿತ್ ಶಾ ಭೇಟಿ ಮಾಡಿದ್ದಾರೆ. ಭೇಟಿಯ ವೇಳೆ ಕರ್ನಾಟಕದಲ್ಲಿ ಪಕ್ಷದ ಕಾರ್ಯತಂತ್ರಗಳ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಕಟೀಲ್ ಅವರು ಆಗಸ್ಟ್ 3ರಂದು ಅಮಿತ್ ಶಾ ಜೊತೆ ದೆಹಲಿಯಿಂದ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಮರುದಿನ ಹೋಟೆಲ್ನಲ್ಲಿ ಅಮಿತ್ ಶಾರನ್ನು ಪದಾಧಿಕಾರಿಗಳ ಜೊತೆ ಭೇಟಿಯಾಗಿದ್ದರು.

ಕಾಲ್ ಸೆಂಟರ್ ಕೂಡ ಇರುತ್ತದೆ
ಹೊಸ ವಾರ್ ರೂಮ್ ಕುರಿತು ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಮುಂದಿನ ಚುನಾವಣೆಯ ನಿರೀಕ್ಷೆಯಲ್ಲಿ ಇಂದು ನಾವು ವಾರ್ ರೂಮ್ ತೆರೆದಿದ್ದೇವೆ. ಇಲ್ಲಿ ಕಾಲ್ ಸೆಂಟರ್ ಕೂಡ ಇರುತ್ತದೆ. ಮುಂದಿನ ಚುನಾವಣೆಗೆ ಸಂಪೂರ್ಣ ತಯಾರಿ ನಡೆಸುತ್ತಿದ್ದೇವೆ. ನಾವು ಚುನಾವಣೆಗೆ ಯುದ್ದೋಪಾದಿಯಲ್ಲಿ ತಯಾರಿ ನಡೆಸುತ್ತಿದ್ದೇವೆ. ಮತದಾರರಿಗೆ ಮಾಹಿತಿ ನೀಡಲು ಈ ವಾರ್ ರೂಂ ತೆರೆಯಲಾಗಿದೆ. ವಾರ್ ರೂಂ ಮಾಧ್ಯಮ ಕೇಂದ್ರ ಮತ್ತು ಸಾಮಾಜಿಕ ಮಾಧ್ಯಮ ಘಟಕವನ್ನು ಹೊಂದಿರುತ್ತದೆ. ಕಾಲ್ ಸೆಂಟರ್ ಬೂತ್ ಕಾರ್ಯಕರ್ತರ ಮಟ್ಟಕ್ಕೆ ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗಳನ್ನು ಪೂರೈಸುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications