ರಾಮದಾಸ್ ಕೇಸ್: 'ಪ್ರೇಮಾ' ಪುರಾಣ ಬಯಲು
ಮೈಸೂರು, ಫೆ. 13: ಮಹಿಳೆಯೊಬ್ಬಳ ಸಂಗ ಮಾಡಿದ ತಪ್ಪಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಬಿಜೆಪಿ ಮಾಜಿ ಸಚಿವ ಎಸ್ ಎ ರಾಮದಾಸ್ ವಿರುದ್ಧ ಕುವೆಂಪುನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರಾಮದಾಸ್ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಗ್ಯ ಸುಧಾರಿಸಿದ ಬಳಿಕ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ ಎಂದು ಮೈಸೂರ್ ನಗರ ಪೊಲೀಸ್ ಆಯುಕ್ತ ಡಾ. ಎಂಎ ಸಲೀಂ ತಿಳಿಸಿದ್ದಾರೆ. ಈ ಮಧ್ಯೆ ರಾಮದಾಸ್ ಗೆ ಇನ್ನೂ ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಶುಶ್ರೂಷಣೆ ನೀಡಲು ನಿರ್ಧರಿಸಲಾಗಿದೆ.
ಇದು ರಾಮದಾಸ್ ಅವರ ದುಃಸ್ಥಿತಿಯಾಗಿದ್ದರೆ ಮತ್ತೊಂದೆಡೆ ಪ್ರಕರಣದ ಕಥಾನಾಯಕಿ ಪ್ರೇಮಕುಮಾರಿ ಎಂಬ 35 ವರ್ಷದ ಮಹಿಳೆಯ ಕಥೆ ಬೇರೆಯದ್ದೇ ಆಗಿದೆ. ಪ್ರಸ್ತುತ ರಾಮದಾಸರಿಂದ ತನಗೆ ಅನ್ಯಾಯವಾಗಿದೆ ಎಂದು ಬೊಬ್ಬಿಡುತ್ತಿರುವ ಪ್ರೇಮಕುಮಾರಿ ಈ ಹಿಂದೆಯೂ ಕೆಲವರಿಗೆ ಇದೇ ಗತಿಯನ್ನು ಕರುಣಿಸಿದ್ದಾಳೆ ಎನ್ನಲಾಗಿದೆ. ಪ್ರೇಮಕುಮಾರಿ ವಂಚಕಿ ಎಂಬುದು ಸಾಬೀತಾಗಿ ಆಕೆ ಚಿಕ್ಕಮಗಳೂರಿನಲ್ಲಿ ಒಂದು ವಾರ ಕಾಲ ಜೈಲು ರುಚಿಯನ್ನೂ ನೋಡಿಬಂದಿದ್ದಾಳೆ ಎಂದು ಪೊಲೀಸ್ ಕಡತಗಳು ಹೇಳುತ್ತಿವೆ.
ಅಷ್ಟೇ ಅಲ್ಲ ಚಿಕ್ಕಮಗಳೂರಿನ ಜನ ಪ್ರೇಮಕುಮಾರಿಯ ಜಾತಕ ಜಾಲಾಡಿದ್ದು, ಇನ್ನೂ ಅನೇಕ ಗುಪ್ತ ವಿಷಯಗಳು ಹೊರಬಿದ್ದಿವೆ. 2003ರಲ್ಲಿ ಇಪ್ಪತ್ತರ ಹರೆಯದ ಪ್ರೇಮಕುಮಾರಿ ಮೊದಲು ಪೊಲೀಸ್ ಪೇದೆಯಾಗಿದ್ದ ರುದ್ರೇಗೌಡ ಎಂಬ ಯುವಕನ ಕೈಹಿಡಿಯುತ್ತಾಳೆ. ಅದಕ್ಕೂ ಮುನ್ನ,
ಭದ್ರವಾತಿಯಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ಪ್ರೇಮಕುಮಾರಿ, ತನ್ನನ್ನು ಹುಡುಗರು ಚುಡಾಯಿಸುತ್ತಿದ್ದಾರೆ ಎಂದು ತರೀಕೆರೆ ಪೊಳೀಸ್ ಠಾಣೆಯಲ್ಲಿ ಅನೇಕ ಸಲ ದೂರು ನೀಡುತ್ತಾರೆ. ಹೀಗೆ ಪದೇ ಪದೆ ಠಾಣೆಗೆ ಬಂದು ದೂರು ನೀಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಪ್ರೇಮಕುಮಾರಿಯತ್ತ ಅದೇ ಠಾಣೆಯ ಪೇದೆ ರುದ್ರೇಗೌಡ ಮನಸು ಮಾಡುತ್ತಾನೆ. ಮುಂದೆ ವಿವಾಹ ಬಂಧನವೂ ಆಗುತ್ತದೆ.
ಆದರೆ ರುದ್ರೇಗೌಡನ ವಿರುದ್ಧ ವರಾತ ತೆಗೆದ ಪ್ರೇಮಕುಮಾರಿ ಅವನ ಜತೆ ನಿತ್ಯ ಜಗಳ ಕಾಯುತ್ತಾಳೆ. ಇಲಾಖೆಯ ಹಿರಿಯರು ಪ್ರೇಮಾಗೆ ಕರೆದು ಬುದ್ಧಿವಾದ ಹೇಳುತ್ತಾರೆ. ಆದರೆ ಮೂರು ವರ್ಷ ಇಬ್ಬರ ವಿವಾಹ ಬಂಧನ ಹಾಗೂ ಹೀಗೂ ಮುಂದುವರಿಯುತ್ತದೆ. ಆದರೆ ಅಷ್ಟೊತ್ತಿಗೆ ರುದ್ರೇಗೌಡನಿಗೆ ಜೀವನ ಸಾಕು ಅನ್ನಿಸಿರುತ್ತದೆ. ಅದರಂತೆ 2006ರ ಆ. 26ರಂದು ಮನೆ ಸಮೀಪದ ಮರವೊಂದರಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ರುದ್ರೇಗೌಡನ ಶವ ಪತ್ತೆಯಾಗುತ್ತದೆ.
ಅಲ್ಲಿಗೆ ಪ್ರೇಮಕುಮಾರಿ ಪುರಾಣದ ಒಂದು ಅಧ್ಯಾಯ ಮುಗಿಯುತ್ತದೆ. ಮುಂದೆ ಅನುಕಂಪದ ಆಧಾರದಲ್ಲಿ ತರೀಕೆರೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತೆಯಾಗಿ ಕೆಲಸ ಗಿಟ್ಟಿಸುತ್ತಾಳೆ. ಅಲ್ಲೂ ರಗಳೆ ಮಾಡಿಕೊಳ್ಳುತ್ತಾಳೆ. ಬೇಸತ್ತ ಹಿರಿಯ ಅಧಿಕಾರಿಗಳು ಪ್ರೇಮಾಳನ್ನು ಚಿಕ್ಕಮಗಳೂರಿಗೆ ಎತ್ತಂಗಡಿ ಮಾಡುತ್ತಾರೆ. ಅಲ್ಲೂ ಸಾಕಷ್ಟು ಭಾನಗಡಿಗಳನ್ನು ಮಾಡಿಕೊಳ್ಳುತ್ತಾಳೆ. ಸಸ್ಪೆಂಡ್ ಸಹ ಆಗುತ್ತಾಳೆ. ಆ ವೇಳೆಯೇ ಜೈಲಿಗೂ ಹೋಗಿಬರುತ್ತಾಳೆ.
ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮತ್ತೊಂದು ರಂಗೀನ್ ಕಥೆಗೆ ನಾಯಕಿಯಾಗುತ್ತಾಳೆ. ಗ್ರಾಮ ಲೆಕ್ಕಿಗ ಬಾಬು ಮತ್ತು ಮಂಜುಳಾರ ಸುಂದರ ದಾಂಪತ್ಯಕ್ಕೆ ಕೊಳ್ಳಿ ಇಡುತ್ತಾಳೆ. ಕೊನೆಗೆ ಮಂಜುಳಾ ವಿಚ್ಛೇಧನಕ್ಕೂ ಮುಂದಾಗುತ್ತಾರೆ. ಇದುವರೆಗೂ ಬಾಬು-ಮಂಜುಳಾ ದೂರವಾಗಿಯೇ ಇದ್ದಾರೆ. ಮಂಜುಳಾರ ಜತೆ ದೊಡ್ಡ ರಾದ್ಧಾಂತವನ್ನೇ ಮಾಡಿಕೊಳ್ಳುವ ಪ್ರೇಮಾ, ಆಕೆಯ ತವರು ಮನೆಯವರನ್ನೂ ಬಹುವಾಗಿ ಕಾಡುತ್ತಾರೆ.
ಆದರೆ ಅದಕ್ಕೆಲ್ಲ ಸ್ತ್ರೀಸಂಗದಲ್ಲಿ ಸಿಲುಕಿದ್ದ ಬಾಬು ನೀರೆರೆಯುತ್ತಾನೆ. ಈಗ ಪ್ರೇಮಾಳ ಮತ್ತೊಂದು ಪುರಾಣ ಬಹಿರಂಗವಾದ ಮೇಲೆ ಸಚಿವರಾದಿಯಾಗಿ ಯಾರೂ ಇಂತಹ ಹೆಂಗಸಿನ ಸಹವಾಸ ಮಾಡಬೇಡಿ, ನಾನು ಈವತ್ತಿಗೂ ಅದರಿಂದ ದುರ್ದಿನಗಳನ್ನು ಅನುಭವಿಸುತ್ತಿದ್ದೇನೆ ಎಂದು ತನ್ನ ಅನುಭವಾಮೃತವನ್ನು ಹರಿಸುತ್ತಾನೆ.
ಶಿಕ್ಷೆಯ ರೂಪದಲ್ಲಿ ಚಿಕ್ಕಮಗಳೂರಿನಿಂದಲೂ ಪ್ರೇಮಾ ಎತ್ತಂಗಡಿಯಾಗುತ್ತದೆ. ಅಲ್ಲಿಂದ ಸಾಂಸ್ಕೃತಿಕ ನಗರಿಗೆ ವರ್ಗವಾಗಿ ಬಂದ ಪ್ರೇಮಾ ತನ್ನೊಂದಿಗೆ ತನ್ನ ಹೀನ ಜಾತಕವನ್ನೂ ಹೊತ್ತುತರುತ್ತಾಳೆ. ಆಗಲೇ ಅಚಾನಕ್ಕಾಗಿ ರಾಮದಾಸರ ಕಣ್ಣಿಗೆ ಬೀಳುತ್ತಾಳೆ. ಮುಂದೆ ಅದು ಲವ್ವುಡವ್ವಿಗೆ ತಿರುಗುತ್ತದೆ. ಅದರ ಫಲವೇ ಆತ್ಮಹತ್ಯೆ ಯತ್ನ ಪುರಾಣ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತದೋ ಆಸ್ಪತ್ರೆಯ ಬೆಡ್ ನಿಂದ ಎದ್ದುಬಂದು ರಾಮದಾಸರೇ ಹೇಳಬೇಕು.