ಸಿಎಎ ಸಮಾವೇಶದ ವೇಳೆ ಕೊಲೆ ಯತ್ನ; ನಾಲ್ವರಿಗೆ ಜಾಮೀನು
ಬೆಂಗಳೂರು, ಜುಲೈ 23 : ಸಿಎಎ ಮತ್ತು ಎನ್ಆರ್ಸಿ ಸಮಾವೇಶದ ವೇಳೆ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ವರುಣ್ ಎಂಬುವವರು ಆರೋಪಿಗಳ ದಾಳಿಯಿಂದ ಗಾಯಗೊಂಡಿದ್ದರು.
2019ರ ಡಿಸೆಂಬರ್ 22ರಂದು ಬೆಂಗಳೂರು ನಗರದ ಟೌನ್ ಹಾಲ್ ಬಳಿ ಸಿಎಎ ಪರವಾಗಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವರುಣ್ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಕೊಲೆ ಮಾಡಲು ಆರೋಪಿಗಳು ಯತ್ನಿಸಿದರು.
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಮೊಹಮದ್ ಇರ್ಫಾನ್, ಅಕ್ಟರ್ ಪಾಷಾ, ಸೈಯದ್ ಸಿದ್ಧಿಕಿ ಮತ್ತು ಸನಾಉಲ್ಲಾ ಶರೀಫ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ನಾಲ್ವರನ್ನು ಜನವರಿ 12ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಆರೋಪಿಗಳು ಜಾಮೀನು ನೀಡುವಂತೆ ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ಮಾರ್ಚ್ 2ರಂದು ತಿರಸ್ಕಾರವಾಗಿತ್ತು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು. ಈಗ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದೆ.
ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ, 'ಪೊಲೀಸರು ಹೇಳಿದಂತೆ ಕೃತ್ಯದ ಸಂಚು ಮತ್ತು ಉದ್ದೇಶದಲ್ಲಿ ಸ್ಪಷ್ಟತೆ ಇಲ್ಲ. ಮೇಲಾಗಿ ಆರೋಪಿಗಳನ್ನು ದೈಹಿಕ ಚಹರೆ ಆಧಾರದ ಮೇಲೆ ಮಾತ್ರ ಗುರುತಿಸಲಾಗಿದೆ. ಇವರನ್ನು ಬಂಧನದಲ್ಲಿ ಮುಂದುವರೆಸುವ ಸಕಾರಣ ಇಲ್ಲ" ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆ.












Click it and Unblock the Notifications