BREAKING: 14 'ಮುಡಾ ಸೈಟ್' ವಾಪಾಸ್ ಕೊಟ್ರೆ ಅಪರಾಧದ ತೀವ್ರತೆ ಕಡಿಮೆ ಆಗುತ್ತಾ!: ದೂರುದಾರ ಹೇಳಿದ್ದೇನು
ಮೈಸೂರು, ಅಕ್ಟೋಬರ್ 01: ಮುಡಾ ಹಗರಣವು ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲೂ ಬಿರುಗಾಳಿ ಎಬ್ಬಿಸಿದೆ. ಇದೀಗ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ನಿವೇಶನ ವಾಪಾಸ್ ಕೊಡುವುದಾಗಿ ಹೇಳಿದ್ದರಿಂದ ತನಿಖೆ ಮುಗಿಯುವುದಿಲ್ಲ. ಅಪರಾಧ ತೀವ್ರತೆ ಕಡಿಮೆ ಆಗುವುದಿಲ್ಲ ಎಂದು ಸ್ವತಃ ಮೈಸೂರಿನಲ್ಲಿ ಸಿಎಂ ವಿರುದ್ಧ ದೂರು ನೀಡಿದ್ದ ದೂರುದಾರ ಪಿ.ಎಸ್. ನಟರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ದೂರುದಾರ ಮೈಸೂರು ಪಿ.ಎಸ್. ನಟರಾಜ್ ಅವರು 'ಟಿವಿ ನೈನ್'ಗೆ ಪ್ರತಿಕ್ರಿಯಿಸಿದ್ದಾರೆ. ಕದ್ದ ಮಾಲನ್ನು ವಾಪಾಸ್ ಕೊಟ್ಟರೆ ಕಳ್ಳತನ ಮುಚ್ಚಿಹಾಕಲು ಆಗುವುದಿಲ್ಲ. ತನಿಖೆ ಮುಗಿದಂತಾಗುವುದಿಲ್ಲ. ಅಪರಾಧ ತೀವ್ರತೆ ಕಡಿಮೆ ಆಗಲ್ಲ ಎಂದು ತನಿಖೆ ಮುಂದುವರಿಯುವ ಬಗ್ಗೆ ಅವರು ತಿಳಿಸಿದರು.

ಮೂರು ತಿಂಗಳ ಹಿಂದೆ ನಿರ್ಧರಿಸಬೇಕಿತ್ತು
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ಮರಳಿ ನೀಡುವುದಾಗಿ ಹೇಳಿದ್ದಾರೆ. ಇದನ್ನೆ ಮೂರು ತಿಂಗಳ ಮೊದಲು ಹೇಳಬೇಕಿತ್ತು. ಹೇಳಿದ್ದರೆ ಇಲ್ಲಿಯವರೆಗೆ ಯಾವುದು ಬರುತ್ತಿರಲಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ನಾಲ್ಕು ದಶಕದಿಂದ ರಾಜಕೀಯದಲ್ಲಿದ್ದವರು. ಅವರೇ ಹೀಗೆ ಮಾಡಿದರೇ ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತಿರಲಿಲ್ಲ ಎಂದರು.
ಅಲ್ಲದೇ ಮೂರು ತಿಂಗಳ ಹಿಂದೆ ಮುಡಾ ಸೈಟ್ ವಾಪಾಸ್ ನೀಡಿದ್ದರೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಆಗುತ್ತಿರಲಿಲ್ಲ. ನ್ಯಾಯಾಲಯದಲ್ಲಿ ಬೇಕಾದಷ್ಟು ಅರ್ಜಿಗಳು ವಿಲೇವಾರಿ ಆಗಬೇಕಿದೆ. ಈ ಪ್ರಕರಣದಲ್ಲಿ ಕೋರ್ಟ್ ಸಮಯ, ಶ್ರಮ ಉಳಿಯುತ್ತಿತ್ತು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ವಿಷಯದಲ್ಲಿ ಕ್ಷಮೆ ಇಲ್ಲ!
ಈಗ ಅವರು ನಿವೇಶನ ವಾಪಾಸ್ ಕೊಡುವುದಾಗಿ ಹೇಳಿದ್ದಾರೆ. ಇದು ಅವರ ದೊಡ್ಡಗುಣ. ವೈಯಕ್ತಿಕವಾಗಿ ಏನನ್ನಾದರೂ ಕಳ್ಳತನ ಮಾಡಿದ್ದಾಗ ಕ್ಷಮಿಸಬಹುದಿತ್ತು. ಆದರೆ ಇದು ಸಾರ್ವಜನಿಕ ವಿಷಯಗಳಲ್ಲಿ ಇಂತಹ ಅಕ್ರಮ ನಡೆದಿದೆ. ವಾಪಾಸ್ ಕೊಟ್ಟ ಮಾತ್ರಕ್ಕೆ ಎಲ್ಲವು ಸರಿ ಹೋಗಲ್ಲ. ಅಪರಾಧ ಅಪರಾಧವೇ, ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇದೇ ಎಂದು ನಟರಾಜ್ ಅವರು ವಿವರಿಸಿದ್ದಾರೆ.
ಪಾಧಿಕಾರದ 377 ಕೋಟಿ ರೂ. ಖರ್ಚು ಪ್ರಶ್ನಿಸಿದ ನಟರಾಜ್
ಈ ನಟರಾಜ್ ಅವರು ಕಳೆದ ಆಗಸ್ಟ್ 27ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಇದೇ ನಟರಾಜ್ ಅವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ನಿರ್ದೇಶನ ಮೇರೆಗೆ ಪ್ರಾಧಿಕಾರದ 377 ಕೋಟಿ ಹಣ ಖರ್ಚು ಮಾಡಿದ್ದನ್ನು ಪ್ರಶ್ನಿಸಿದ್ದರು. ವಿವಿಧ ಯೋಜನೆಗಳಿಗೆ ಹಣ ಸಿಎಂ ಸೂಚನೆ ಮೇರೆಗೆ ಬಳಕೆ ಆಗಿದೆ. ಈ ಕುರಿತು ಬೂಟು ಪಾಲಿಶ್ ಮಾಡುವ ಮೂಲಕ ಅವರು ಪ್ರತಿಭಟಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪತಿಯ ಮರಿಯಾದೆಗಿಂತ ತಮ್ಮ ಹೆಸರಿನಲ್ಲಿರುವ ಈ ನಿವೇಶನಗಳು ಮುಖ್ಯ ಅಲ್ಲ ಎಂದು 14 ನಿವೇಶಗಳನ್ನು ಮರಳಿ ಮುಡಾಗೆ ನೀಡುವುದಾಗಿ ಪತ್ರ ಬರೆದಿದ್ದಾರೆ. ಈ ಪತ್ರ ನೋಡಿದ ಸಿಎಂ ಸಿದ್ದರಾಮಯ್ಯ ಭಾವುಕರಾಗಿದ್ದಾರೆ.
ಸಂಚಿಗೆ ಬಲಿ ಆಗಬಾರದೆಂದು ಸುಮ್ಮನಿದ್ದೆ: ಸಿಎಂ ಪತ್ನಿ ಪಾರ್ವತಿ
ಮುಡಾ ನಿವೇಶನ ಆರೋಪ ರಾಜಕೀಯ ಸಂಚು ಎಂದುಕೊಂಡಿದ್ದೆ. ಈ ಆರೋಪ ಕೇಳಿ ಬಂದಾಗಲೇ ನಾನು ಸೈಟ್ ವಾಪಾಸ್ ನೀಡಲು ಸಿದ್ಧವಾಗಿದ್ದೆ. ಆದರೆ ಎದುರಾಳಿಗಳ ಸಂಚಿಗೆ ಬಲಿ ಆಗಬಾರದು ಎಂಬ ಆಪ್ತರ ಮಾತಿನಂತೆ ಸುಮ್ಮನಿದ್ದೆ. ಆದರೆ ಇದೀಗ ಪತಿಯ ರಾಜಕೀಯ ಜೀವನದ ಮೇಲೆ ಇದರ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಮರಳಿ ನೀಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ಮಗನ ಜೊತೆಗೆ ಅಥವಾ ಪತಿಯ ಜೊತೆಗೆ ಚರ್ಚಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಿಎಂ ಪತಿ ಪಾರ್ವತಿಯವರು ಸೈಟ್ ಮರಳಿ ನೀಡುತ್ತಿದ್ದಾರೆ ಎಂದರೆ, ಸಿಎಂ ತಪ್ಪು ಮಾಡಿದ್ದನ್ನು, ಒಪ್ಪಿಕೊಂಡಂತೆ ಎಂಬ ಮಾತುಗಳು ವಿಪಕ್ಷದಿಂದ ಕೇಳಿ ಬಂದಿವೆ.












Click it and Unblock the Notifications