Siddaramaiah: ಡಿಸೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗ: ಜ್ಯೋತಿಷಿ ಭವಿಷ್ಯ
ಬೆಂಗಳೂರು, ಸೆಪ್ಟೆಂಬರ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಮುಡಾ ಪ್ರಾಸಿಕ್ಯೂಷನ್ ಸಂಬಂಧದ ಎರಡೆರಡು ಕಾನೂನು ಹೋರಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿನ್ನಡೆಯಾಗಿದ್ದು, ಸಿದ್ದರಾಮಯ್ಯ ಪದತ್ಯಾಗದ ಕುರಿತು ಜ್ಯೋತಿಷಿ ಒಬ್ಬರು ಅಚ್ಚರಿಯ ಭವಿಷ್ಯವನ್ನ ನುಡಿದಿದ್ದಾರೆ.
40 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಯಾವುದು ಸಂಕಷ್ಟಕ್ಕೆ ಸಿಲುಕದ ಸಿದ್ದರಾಮಯ್ಯ ಅವರ ಸುತ್ತ ಇದೀಗ ಮುಡಾ ಹಗರಣ ಹೆಜ್ಜೆ ಹೆಜ್ಜೆಗೂ ಸುತ್ತಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ರಾಜಕಾರಣ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಜಾತಕಗಳ ವಿಶ್ಲೇಷಣೆ ಮತ್ತು ಅಧ್ಯಯನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವ ರಾಜ್ಯ ಮಟ್ಟದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಅಚ್ಚರಿ ಹೇಳಿಕೆಯನ್ನ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ರಾಜೀನಾಮೆ ನೀಡಬೇಕು ಎಂದು ಸಾಕಷ್ಟು ಒತ್ತಡಗಳು ಕೇಳಿ ಬರುತ್ತಿದ್ದು, ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಯಾವಾಗ ರಾಜೀನಾಮೆಯನ್ನ ನೀಡುತ್ತಾರೆ ಎಂಬ ದಿನಾಂಕ ಹಾಗೂ ತಿಂಗಳನ್ನು ಸಹ ತಿಳಿದ್ದಾರೆ. ಇನ್ನೂ ಈ ಎಲ್ಲಾ ಬೆಳವಣೆಗೆಗಳಿಗೆ ಜಾತಕಗಳಲ್ಲಿನ ಗ್ರಹಗಳ ಸ್ಥಿತಿ- ಗತಿ ಹೇಗೆ ಕಾರಣ ಎಂಬುದನ್ನು ಸಹ ವಿವರಿಸಿದ್ದಾರೆ.
ಇದೇ ಡಿಸೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ತ್ಯಜಿಸುವುದಕ್ಕೆ ವಿಪರೀತ ಒತ್ತಡ ಸೃಷ್ಟಿಯಾಗಲಿದೆ. ಆದರೆ ಹಲವರಿಗೆ ಪ್ರಶ್ನೆಗಳಿವೆ, ತಮ್ಮ ಜನ್ಮದಿನಾಂಕ, ಹುಟ್ಟಿದ ಸಮಯ ಇತ್ಯಾದಿಗಳು ತನಗೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದು ಹೇಗೆ ಜಾತಕ ಸಿದ್ಧಪಡಿಸುವುದಕ್ಕೆ ಮತ್ತು ವಿಶ್ಲೇಷಣೆ ಮಾಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಅದು. ಈ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕ, ಸಮಯದ ಬಗ್ಗೆ ನಿಖರತೆ ಇಲ್ಲದಿದ್ದಾಗ ಅದನ್ನು ತಿಳಿದುಕೊಳ್ಳುವುದಕ್ಕೆ ಅಂತಲೇ ವಿಧಾನಗಳಿವೆ. ಅದರ ಆಧಾರದಲ್ಲಿ ಕಂಡುಕೊಂಡಂಥ ನಕ್ಷತ್ರ, ರಾಶಿ ಹಾಗೂ ಜನ್ಮ ಕುಂಡಲಿಯ ಆಧಾರದಲ್ಲಿ ಇದನ್ನು ನುಡಿಯಲಾಗುತ್ತಿದೆ ಎಂದು ಜ್ಯೋತಿಷಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ಜಾತಕ ಬಹಳ ವಿಚಿತ್ರವಾಗಿದೆ. ಸಿದ್ದರಾಮಯ್ಯ ಅವರ ಜಾತಕದಲ್ಲಿನ ಯೋಗಗಳನ್ನು ಅವರು ತಮ್ಮದೇ ಸ್ವಭಾವದ ಕಾರಣಗಳಿಂದಾಗಿ ಬಹಳ ಕಳೆದುಕೊಂಡಿರುವುದು ಸಹ ಇದೆ. ಅದೇ ವೇಳೆ ಹಠಮಾರಿ ಧೋರಣೆಯಿಂದ ಆ ಯೋಗವನ್ನು ಅನುಭವಿಸುವುದಕ್ಕೆ ಶತಪ್ರಯತ್ನ ಪಟ್ಟು, ಅವಮಾನಗಳನ್ನು ಅನುಭವಿಸಿರುವುದೂ ಇದೆ. ಇದನ್ನು ಸಿದ್ದರಾಮಯ್ಯ ಅವರು ಎಷ್ಟು ಒಪ್ಪುತ್ತಾರೋ ಬಿಡುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದಾದದ್ದು ಏಕೆಂದರೆ, ಗುರು ಗ್ರಹವು ಸಿಂಹಾಂಶದಲ್ಲಿ ಸಂಚರಿಸುವ ಕಾಲ ಇದಾಗಿದ್ದು, ಅವರ ಜನ್ಮ ಜಾತಕದ ವಿಶ್ಲೇಷಣೆ ಮಾಡಿದ ಪ್ರಕಾರ ಕನ್ಯಾ ಲಗ್ನ ಅವರದಾಗುತ್ತದೆ. ಇದಕ್ಕೆ ವ್ಯಯ ಸ್ಥಾನದಲ್ಲಿ ಗುರು ಗ್ರಹವು ಸಿಂಹಾಂಶದಲ್ಲಿ ಇಂಥದ್ದೊಂದು ಸ್ಥಿತಿಯನ್ನು ಸೃಷ್ಟಿ ಮಾಡಬಹುದಾಗಿದೆ. ಇನ್ನು ಅವರ ಜನನ ಕಾಲದಲ್ಲಿ ಸಿಂಹ ರಾಶಿಯಲ್ಲಿ ಶನಿ ಸ್ಥಿತವಾಗಿದ್ದು, ಅಲ್ಲಿಂದ ಎಂಟನೇ ಮನೆಗೆ ಮುಂದಿನ ಯುಗಾದಿ ದಿನ ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇದು ಅಧಿಕಾರ ಹೋಗುವ ಅಥವಾ ತ್ಯಜಿಸುವ ಸಮಯದ ಮುನ್ಸೂಚನೆಯಾಗಿ ಹೇಳಬಹುದಾಗಿದೆ.
ಜ್ಯೋತಿಷ್ಯ ಪ್ರಕಾರವಾಗಿ ಇರುವ ಯೋಗಗಳು ಯಾವುದೋ ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ತಲೆಯನ್ನು ಕಾಯಬಹುದು ಮತ್ತು ಯಾರದೋ ಪುಣ್ಯದ ಫಲಕ್ಕೋ ಅಥವಾ ದೇವತಾ ಅನುಗ್ರಹದಿಂದ ಆ ಪಕ್ಷದ ನಾಯಕನ ಸ್ಥಾನವನ್ನು- ಮುಖ್ಯಮಂತ್ರಿ ಸಿಂಹಾಸನವನ್ನು ಗಟ್ಟಿಯಾಗಿ ಮಾಡಿಡಬಹುದು. ಆದರೆ ಒಂದಂತೂ ಸತ್ಯ, ಜ್ಯೋತಿಷ್ಯವು ಸನ್ನಿವೇಶ- ಸೂಚನೆಯನ್ನು ಖಂಡಿತಾ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications