ನಾಮಪತ್ರ ಸಲ್ಲಿಸಿದ ಎಂಟಿಬಿ ನಾಗರಾಜ್: ಶ್ರೀಮಂತ ರಾಜಕಾರಣಿಯ ಘೋಷಿಸಿದ ಒಟ್ಟು ಆಸ್ತಿ ಎಷ್ಟು?
ಬೆಂಗಳೂರು, ಏಪ್ರಿಲ್ 17: ಹೊಸಕೋಟೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಹೊಸಕೋಟೆ ನಗರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರ್ಯಾಲಿ ನಡೆಸಿದ ಎಂಟಿಬಿ ನಾಗರಾಜ್ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಈ ಬಾರಿ 1510 ಕೋಟಿ ರೂ ಆಸ್ತಿ ಘೋಷಣೆ ಮಾಡಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ವೇಳೆ 1015 ಕೋಟಿ ಘೋಷಣೆ ಮಾಡಿದ್ದರು. ಎಂಟಿಬಿ ನಾಗರಾಜ್ ಕಳೆದ ಚುನಾವಣೆಗಿಂತ 495 ಕೋಟಿ ರೂಪಾಯಿ ಆಸ್ತಿ ಹೆಚ್ಚಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೊಸಕೋಟೆ ಕ್ಷೇತ್ರದ ದೇವ ಮೂಲೆಯ ಕೊನೆಯ ಗ್ರಾಮದಿಂದ ಪ್ರಚಾರ ಆರಂಭಿಸಿದರೆ ಗೆಲುವು ಖಚಿತ ಎಂಬ ನಂಬಿಕೆ ಹೊಂದಿರುವ ಎಂಟಿಬಿ ನಾಗರಾಜ್ ದಳಸಗೆರೆ ಗ್ರಾಮದಿಂದ ಪ್ರಚಾರ ಆರಂಭಿಸಿದ್ದಾರೆ. ಕಳೆದ ಬಾರಿ ಉಪಚುನಾವಣೆಯಲ್ಲಿ ಸೋಲು ಕಂಡಿರುವ ಎಂಟಿಬಿ ನಾಗರಾಜ್ ಬಾರಿ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸದಿಂದ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಎಂಟಿಬಿ ನಾಗರಾಜ್ ಆಸ್ತಿಯ ಈ ಹಿಂದಿನ ವಿವರ
ಈ ಹಿಂದೆ 2019ರ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ 1,195 ಕೋಟಿ ರೂಪಾಯಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಇರುವುದಾಗಿ ಘೋಷಣೆ ಮಾಡಿದ್ದರು. ಅಫಿಡವಿಟ್ ಪ್ರಕಾರ ಎಂಟಿಬಿ ನಾಗರಾಜ್, 419,28,63,731 ರೂ. ಮೌಲ್ಯದ ಚರಾಸ್ತಿ, 2.54 ಕೋಟಿ ರೂ. ಮೌಲ್ಯದ ಕಾರುಗಳು ಸೇರಿದಂತೆ ಒಟ್ಟು 1,195 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ 2020ರ ಜೂನ್ನಲ್ಲಿ ವಿಧಾನ ಪರಿಷತ್ಗೆ ನಾಮಪತ್ರ ಸಲ್ಲಿಸಿದ್ದ ಎಂಟಿಬಿ ನಾಗರಾಜ್ ಅತ್ಯಂತ ಹೆಚ್ಚು ಸಂಪತ್ತು ಹೊಂದಿದ್ದ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಎಂಟಿಬಿ ನಾಗರಾಜ್ ತಮ್ಮ ಹೆಸರಿನಲ್ಲಿ 884 ಕೋಟಿ ರೂಪಾಯಿಗಳಿಗೂ ಹೆಚ್ಚು ಆಸ್ತಿ, ಪತ್ನಿ ಶಾಂತ ಕುಮಾರಿ ಹೆಸರಿನಲ್ಲಿ 331 ಕೋಟಿ ರೂಪಾಯಿ ಆಸ್ತಿ. ಎಂಟಿಬಿ ನಾಗರಾಜ್ ಹೆಸರಿನಲ್ಲಿ 52.72 ಕೋಟಿ ರೂಪಾಯಿ ಹಾಗೂ ಪತ್ನಿ ಶಾಂತ ಕುಮಾರಿ ಹೆಸರಿನಲ್ಲಿ 1.97 ಕೋಟಿ ರೂಪಾಯಿ ಸಾಲ ಇರುವುದಾಗಿ ವಿಧಾನ ಪರಿಷತ್ ನಾಮಪತ್ರ ಸಲ್ಲಿಕೆ ವೇಳೆ ತಿಳಿಸಿದ್ದರು.
ಇನ್ನು ಎಂಟಿಬಿ ನಾಗರಾಜ್ ಪ್ಲಾಟಿನಂ, ವಜ್ರ, ಚಿನ್ನಾಭರಣ, ಬೆಳ್ಳಿ ಆಭರಣ, ದುಬಾರಿ ಬೆಲೆಯ ರೋಲ್ಸ್ ರಾಯ್ ಫಾಟಂಮ್, ಲ್ಯಾಂಡ್ ರೋವರ್ಸ್, ಮೆರ್ಸಿಡಿಸ್ ಬೆಂಜ್, ಫಾರ್ಚುನರ್ ಕಾರುಗಳನ್ನು ಹೊಂದಿರುವುದಾಗಿ ವಿಧಾನ ಪರಿಷತ್ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿದ್ದರು.
ಇನ್ನು ಈಗಾಗಲೇ ಹೊಸಕೋಟೆಯಿಂದ ನಾಮಪತ್ರ ಸಲ್ಲಿಸಿರುವ ಎಂಟಿಬಿ ನಾಗರಾಜ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಬದಲು ಪುತ್ರನಿಗೆ ಟಿಕೆಟ್ ನೀಡಬೇಕೆಂದು ಕೋರಿದ್ದರು. ಈಗ ರಾಜಕೀಯ ನಿವೃತ್ತಿ ಪಡೆದು, ಮಗ ಜನಸೇವೆಗೆ ಮುಂದಾಗಲಿ ಎಂದು ಬಯಸಿ ಟಿಕೆಟ್ ಬೇಡ ಎಂದು ಪತ್ರ ಬರೆದಿದ್ದೆ ಎಂದು ಎಂಟಿಬಿ ನಾಗರಾಜ್ ಹೇಳಿಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಎಂಟಿಬಿ ನಾಗರಾಜ್ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.
ಇನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರ ಮತ್ತೆ ಹೈವೋಲ್ಟೇಜ್ ಕ್ಷೇತ್ರವಾಗಲಿದ್ದು, ಹಾಲಿ ಸಚಿವರಾಗಿರುವ ಎಂಟಿಬಿ ನಾಗರಾಜ್ ಕ್ಷೇತ್ರವನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಮತ ಸೆಳೆಯಲು ಮುಂದಾಗಿದ್ದಾರೆ. 2018ರ ಚುನಾವಣೆಯಂತೆ 2023ರ ವಿಧಾನಸಭೆ ಚುನಾವಣೆಯಲ್ಲೂ ಹೊಸಕೋಟೆಯಲ್ಲಿ ಅದೇ ಅಭ್ಯರ್ಥಿಗಳು ಮುಖಾಮುಖಿಯಾಗಲಿದ್ದು, ಅಭ್ಯರ್ಥಿಗಳ ಪಕ್ಷ ಮಾತ್ರ ಪರಸ್ಪರ ಬದಲಾವಣೆಯಾಗಿದೆ.












Click it and Unblock the Notifications