ಡಿಕೆಶಿ ವೇಗ ತಡೆಯಲು ಹಳೇ ದ್ವೇಷ ಮರೆತು ಒಂದಾದ ಯತ್ನಾಳ್, ರೇಣುಕಾಚಾರ್ಯ
ಬೆಂಗಳೂರು, ಜನವರಿ 21; ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂಬ ಸುದ್ದಿ ಬಿಜೆಪಿಯಲ್ಲಿ ನಿಜವಾಗಿದೆ. ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮತ್ತು ಬಿಜೆಪಿ ನಾಯಕರ ವಿರುದ್ಧವೇ ಸದಾ ಗುಡುಗುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಳೇ ದ್ವೇಷ ಮರತೆ ಒಂದಾಗಿದ್ದಾರೆ.
ಗುರುವಾರ ಬೆಂಗಳೂರಿನ ವಿಕಾಸಸೌಧದಲ್ಲಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಕಚೇರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಉಭಯ ನಾಯಕರು ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.
ನಾನು ತಪ್ಪು ಮಾಡಿದ್ದೇನೆ, ನನ್ನ ವಿರುದ್ಧ ಎಫ್ಐಆರ್ ಹಾಕಿ: ರೇಣುಕಾಚಾರ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಉಭಯ ನಾಯಕರ ಭೇಟಿ ಕುತೂಹಲ ಮೂಡಿಸಿದೆ. ಬಿಜೆಪಿ ಇಬ್ಬರೂ ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳು. ಬಹಿರಂಗವಾಗಿಯೇ ಈ ಕುರಿತು ಹಲವು ಬಾರಿ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ: ಯತ್ನಾಳ ಬೆದರಿಕೆಗೆ ಮಣಿದರೇ ಯಡಿಯೂರಪ್ಪ?
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂ. ಪಿ. ರೇಣುಕಾಚಾರ್ಯ ನಡುವೆ ಪ್ರತಿದಿನ ವಾಗ್ವಾದ ನಡೆಯುತ್ತಿತ್ತು. ಆಗಲೂ ಸಹ ಇಬ್ಬರೂ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈಗ ಹಳೇ ದ್ವೇಷ ಮರೆತು ಇಬ್ಬರೂ ಒಂದಾಗಿದ್ದು, ಪರಸ್ಪರು ಮಂತ್ರಿಯಾಗಲಿ ಎಂದು ಶುಭ ಹಾರೈಸಿಕೊಂಡಿದ್ದಾರೆ.
ಸಂಕ್ರಾಂತಿ ನಂತರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆ!
ರೇಣುಕಾಚಾರ್ಯ ಹೇಳಿದ್ದೇನು?
ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಬಳಿಕ ಮಾತನಾಡಿದ ರೇಣುಕಾಚಾರ್ಯ, "ನಮ್ಮದು ಆಕಸ್ಮಿಕ ಸೌಜನ್ಯದ ಭೇಟಿ. ಯತ್ನಾಳ್ ಅನುಭವಿ ರಾಜಕಾರಣಿ, ಕೇಂದ್ರ ಸಚಿವರಾಗಿದ್ದರು. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪಾದಯಾತ್ರೆ ಮೂಲಕ ಅಧಿಕಾರಕ್ಕೆ ಬಂದೆವು ಅನ್ನೋಥರ ಡಿ. ಕೆ. ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ಡಿಕೆಶಿ ವೇಗ ತಡೆಯಲು ಚರ್ಚೆ ನಡೆಸಿದೆವು. ಕಾಲ ಬಂದರೆ ಒಟ್ಟಿಗೆ ಹೈಕಮಾಂಡ್ ನಾಯಕನ್ನು ಭೇಟಿ ಯಾಗುತ್ತೇವೆ. ಯತ್ನಾಳ್ ಹಿರಿಯರಿದ್ದಾರೆ, ಅವರು ಮಂತ್ರಿಯಾಗಲಿ ಎಂದು ಶುಭ ಹಾರೈಸುತ್ತೇನೆ" ಎಂದರು.
ಅವರ ನಾಯಕತ್ವದಲ್ಲೇ ಇರುತ್ತಾರೆ
ರೇಣುಕಾಚಾರ್ಯ ಭೇಟಿ ಬಳಿಕ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, "ರೇಣುಕಾಚಾರ್ಯ ಯಾರದರೂ ನಾಯಕತ್ವ ಒಪ್ಪಿಕೊಂಡರೆ ಅವರ ನಾಯಕತ್ವದಲ್ಲೇ ಇರುತ್ತಾರೆ. ಈಗ ಅವರು ಬಿಜೆಪಿ ನಾಯಕತ್ವ ಒಪ್ಪಿಕೊಂಡಿದ್ದಾರೆ. ಪಂಚ ರಾಜ್ಯ ಚುನಾವಣೆ ಬಳಿಕ ಒಳ್ಳೆಯ ಬೆಳವಣಿಗೆ ಆಗುತ್ತದೆ. ರೇಣುಕಾಚಾರ್ಯ ಮಂತ್ರಿ ಆಗಲಿ ಅಂತ ಅಶೀರ್ವಾದ ಮಾಡುತ್ತೇನೆ" ಎಂದರು.
ಯತ್ನಾಳ್ ಕಾಂಗ್ರೆಸ್ ಪಕ್ಷದ ಏಜೆಂಟ್
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆಗ ಎಂ. ಪಿ. ರೇಣುಕಾಚಾರ್ಯ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುತ್ತಿದ್ದರು.
"ಸಿಎಂ ಯಡಿಯೂರಪ್ಪ ನಾಯಕತ್ವ ಪ್ರಶ್ನೆ ಮಾಡುವ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷದ ಏಜೆಂಟ್. ಅವರು ಹೇಳಿದಂತೆ ಮಾತನಾಡುತ್ತಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು" ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದರು.
ಹೊನ್ನಾಳಿಗೆ ಬಂದು ಮಾತನಾಡಿ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂ. ಪಿ. ರೇಣುಕಾಚಾರ್ಯ ಬಸನಗೌಡ ಪಾಟೀಲ್ ಯತ್ನಾಳ್ಗೆ ಸವಾಲು ಹಾಕಿದ್ದರು. "ಆಡಳಿತ ಪಕ್ಷದ ಶಾಸಕರಾಗಿ ಪಕ್ಷದ ಚೌಕಟ್ಟು ಅಥವ ಶಾಸಕಾಂಗ ಸಭೆಯಲ್ಲಿ ಮಾತನಾಡುವ ಬದಲು ಹಾದಿಬೀದಿಯಲ್ಲಿ ಮಾತನಾಡುತ್ತೀರಿ. ತಾಕತ್ತಿದ್ದರೆ ನನ್ನ ಮತ ಕ್ಷೇತ್ರ ಹೊನ್ನಾಳಿಗೆ ಬಂದು ಮಾತನಾಡಿ" ಎಂದು ರೇಣುಕಾಚಾರ್ಯ ಆಹ್ವಾನ ನೀಡಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಹೊಸದಾಗಿ ಸಂಪುಟವೂ ರಚನೆ ಆಯಿತು. ಆದರೆ ಬಸನಗೌಡ ಪಾಟೀಲ್ ಯತ್ನಾಳ್, ಎಂ. ಪಿ. ರೇಣುಕಾಚಾರ್ಯ ಇಬ್ಬರಿಗೂ ಮಂತ್ರಿಗಿರಿ ಸಿಗಲಿಲ್ಲ. ಈಗ ಇಬ್ಬರು ಶಾಸಕರು ಒಂದಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
Recommended Video