ನಲಪಾಡ್ ಪ್ರಕರಣಕ್ಕೆ 1 ವಾರ, 7 ಬೆಳವಣಿಗೆಗಳು
Recommended Video

ಬೆಂಗಳೂರು, ಫೆಬ್ರವರಿ 23 : ಯು.ಬಿ.ಸಿಟಿಯ ಘರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆದು ಒಂದು ವಾರ ಕಳೆದಿದೆ. ಮೊಹಮ್ಮದ್ ನಲಪಾಡ್ ಮತ್ತು ಇತರ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಬೆಂಗಳೂರಿನ 63ನೇ ಸೆಷನ್ಸ್ ಕೋರ್ಟ್ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿದೆ. ಆದ್ದರಿಂದ, ಮೊಹಮ್ಮದ್ ನಲಪಾಡ್ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ.
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಪತ್ನಿ ಜೊತೆಗೆ ಮಲ್ಯ ಆಸ್ಪತ್ರೆಗೆ ಗುರುವಾರ ರಾತ್ರಿ ಭೇಟಿ ನೀಡಿದ್ದರು. ವಿದ್ವತ್ ಆರೋಗ್ಯ ವಿಚಾರಿಸಿ, ಅವರ ತಂದೆ ಲೋಕನಾಥ್ ಅವರ ಜೊತೆ ಮಾತುಕತೆ ನಡೆಸಿದ್ದರು.
ಮೊಹಮ್ಮದ್ ನಲಪಾಡ್ಗೆ ಜಾಮೀನು ನೀಡಲು ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಮೊಹಮ್ಮದ್ ನಲಪಾಡ್ ಸೇರಿದಂತೆ ಏಳು ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದು, ಮಾರ್ಚ್ 7ಕ್ಕೆ ಪುನಃ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿದೆ. ಒಂದು ವಾರದ ಬೆಳವಣಿಗೆಗಳ ಚಿತ್ರಣ ಇಲ್ಲಿದೆ...

ಶುಕ್ರವಾರ ಜಾಮೀನು ಸಿಗಲಿಲ್ಲ
ಶುಕ್ರವಾರ 63ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ನಲಪಾಡ್ ಪರ ವಕೀಲ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದರು. ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಿಚಾರಣೆಯನ್ನು ಫೆ.24ರ ಶನಿವಾರಕ್ಕೆ ಮುಂದೂಡಲಾಗಿದೆ.

ಜಾಮೀನು ನೀಡಲು ಆಕ್ಷೇಪಣೆ
ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಕೋರ್ಟ್ನಲ್ಲಿ ನಲಪಾಡ್ಗೆ ಜಾಮೀನು ನೀಡಲು ಆಕ್ಷೇಪಣೆ ಸಲ್ಲಿಸಿದ್ದಾರೆ. ಅದರಲ್ಲಿನ ಅಂಶಗಳು ಹೀಗಿವೆ.
* ಆರೋಪಿಗೆ ಹಣ ಮತ್ತು ರಾಜಕೀಯ ಬಲವಿದೆ
* ಜಾಮೀನು ನೀಡಿದರೆ ಸಾಕ್ಷಿನಾಶ ಮಾಡಬಹುದು
* ವಿದ್ವತ್ ಸ್ಥಿತಿ ಗಂಭೀರವಾಗಿದೆ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ
* ಆರೋಪಿಯ ತಂದೆ ಶಾಸಕರು ಪ್ರಭಾವ ಬಳಸಿ ತನಿಖೆಯ ಹಾದಿ ತಪ್ಪಿಸಬಹುದು

ಬಿಜೆಪಿ ನಾಯಕರ ಭೇಟಿ
ಶುಕ್ರವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ವೈದ್ಯರು ವಿದ್ವತ್ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ವಿದ್ವತ್ ತಂದೆ ಲೋಕನಾಥ್ ಜೊತೆ ಮಾತುಕತೆ ನಡೆಸಿ ವಾಪಸ್ ಆದರು.

ವಿದ್ವತ್ ಸ್ಥಿತಿ ಹೇಗಿದೆ?
ವಿದ್ವತ್ ಮೂಗಿನ ಮೂಳೆ ಮುರಿದಿದೆ, ಕಣ್ಣಿನ ಕೆಳಭಾಗದ ಮೂಳೆಗಳು ಸಹ ಮುರಿದು ಹೋಗಿವೆ. ತುಟಿ ಊದಿಕೊಂಡಿದೆ. ಕಣ್ಣಿಗೆ ಇನ್ಫೆಕ್ಷನ್ ಆಗಿದೆ. ದ್ರವಾಹಾರವನ್ನು ಮಾತ್ರ ಸೇವಿಸುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಂಗಪುರದಲ್ಲಿ ಚಿಕಿತ್ಸೆ?
ವಿದ್ವತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಕರೆದುಕೊಂಡು ಹೋಗುವ ಕುರಿತು ಲೋಕನಾಥ್ ಚಿಂತನೆ ನಡೆಸಿದ್ದಾರೆ. ಆದರೆ, ಮಲ್ಯ ಆಸ್ಪತ್ರೆ ವೈದ್ಯರು ಇದಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ. ಇನ್ನಷ್ಟು ಚೇತರಿಕೆ ಕಂಡು ಬರಲಿ ಎಂದು ಸಲಹೆ ನೀಡಿದ್ದಾರೆ.

ಆಸ್ಪತ್ರೆಗೆ ಹ್ಯಾರೀಸ್ ಭೇಟಿ
ಗುರುವಾರ ರಾತ್ರಿ ಎನ್.ಎ.ಹ್ಯಾರೀಸ್ ಪತ್ನಿ ಜೊತೆ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿದ್ವತ್ ಆರೋಗ್ಯ ವಿಚಾರಿಸಿದ್ದರು. ಲೋಕಾನಾಥ್ ಜೊತೆ ಮಾತುಕತೆ ನಡೆಸಿದ್ದರು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸದಂತೆ ಮನವಿ ಮಾಡಿದ್ದರು.

ಮಾರ್ಚ್ 7ರ ತನಕ ನ್ಯಾಯಾಂಗ ಬಂಧನ
ಮೊಹಮ್ಮದ್ ನಲಪಾಡ್ ಸೇರಿದಂತೆ 7 ಆರೋಪಿಗಳನ್ನು ಮಾರ್ಚ್ 7ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.












Click it and Unblock the Notifications