ಶಾಸಕರು-ಸಚಿವರ ಜಟಾಪಟಿಗೆ ಪರಿಹಾರ ಕೊಟ್ಟ ಸಿಎಂ
ಬೆಂಗಳೂರು, ಜೂ. 24 : ಶಾಸಕರು ಮತ್ತು ಸಚಿವರ ನಡುವಿನ ಜಟಾಪಟಿ ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಇನ್ನು ಮುಂದೆ ಪ್ರತಿ ಬುಧವಾರ ಹಾಗೂ ಗುರುವಾರ ವಿಧಾನಸೌಧದಲ್ಲಿ ಸಚಿವರು ಹಾಜರಿದ್ದು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದ ವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ಕಾರ್ಯವೈಖರಿ ಬಗ್ಗೆ ಶಾಸಕರು ಅಸಮಾಧಾನಗೊಂಡಿದ್ದರಿಂದ ಸೋಮವಾರ ಅಧಿವೇಶನ ಆರಂಭವಾಗುವುದಕ್ಕೂ ಮೊದಲು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಿ. ಯಾವುದೇ ಕಾರಣಕ್ಕೂ ಬಹಿರಂಗ ಕೆಸರೆರಚಾಟ ಮಾಡಿದರೆ ಸಹಿಸುವುದಿಲ್ಲ ಎಂದು ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಕಳೆದವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ, ಸೋಮವಾರದ ಸಭೆಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಬುಧವಾರ ಹಾಗೂ ಗುರುವಾರ ಸಚಿವರು ವಿಧಾನಸೌಧದಲ್ಲಿ ಹಾಜರಿದ್ದು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು. [ಅಧಿವೇಶನದ ಮೊದಲ ದಿನದ ಮುಖ್ಯಾಂಶಗಳು]
ಕೆಪಿಸಿಸಿ ಕಚೇರಿಗೆ ಹೋಗ್ರಿ : ಸಚಿವರು ಕೆಪಿಸಿಸಿ ಕಚೇರಿಗೆ ಬರುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ಅವರು ದೂರುತ್ತಿದ್ದಾರೆ. ಸಚಿವರು ಇನ್ನು ಮುಂದೆ ಕೆಪಿಸಿಸಿ ಕಚೇರಿಗೆ ಕಡ್ಡಾಯವಾಗಿ ಹೋಗಬೇಕು. ಜಿಲ್ಲಾ ಪ್ರವಾಸ ತೆರಳುವ ಮುನ್ನ ಈ ಬಗ್ಗೆ ಶಾಸಕ ಹಾಗೂ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು. ಜಿಲ್ಲೆಗೆ ತೆರಳಿದ ಸಮಯದಲ್ಲಿ ಕಡ್ಡಾಯವಾಗಿ ಡಿಸಿಸಿ ಕಚೇರಿಯಲ್ಲಿ ಅರ್ಧ ಗಂಟೆಯಾದರೂ ಕಳೆದು ಕಾರ್ಯಕರ್ತರ ಅಹವಾಲು ಆಲಿಸಬೇಕು ಎಂದು ಸಿಎಂ ಹೇಳಿದರು.
ಸಚಿವರು ಹಾಗೂ ಶಾಸಕರು ವಿಧಾನಮಂಡಲ ಅಧಿವೇಶನ ಪೂರ್ಣಗೊಳ್ಳುವ ತನಕ ಯಾವುದೇ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು. ಒಬ್ಬರೇ ಸಚಿವರು ಇತರೆ ಎಲ್ಲಾ ಸಚಿವರ ಪ್ರಶ್ನೆಗಳಿಗೂ ಉತ್ತರ ನೀಡುವ ಅವಮಾನಕಾರಿ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. [ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವಿರುದ್ಧ ದೂರು]












Click it and Unblock the Notifications