ಕನ್ನಡದ ಹೆಮ್ಮೆಯ ವ್ಯಂಗ್ಯಚಿತ್ರಕಾರರ ಮನಸೆಳೆವ ಕಾರ್ಟೂನ್
ಸಮಾಜವನ್ನು ನೇರಗೊಳಿಸುವುದಕ್ಕಾಗಿಯೇ ಇರುವ ವಕ್ರ ರೇಖೆಯೇ ಕಾರ್ಟೂನ್! ಸತ್ಯವನ್ನು, ಸಮಾಜದ ಡೊಂಕುಗಳನ್ನು ವ್ಯಂಗ್ಯವಾಗಿಯೂ, ಹಾಸ್ಯಮಿಶ್ರಿತವಾಗಿಯೂ, ಕೆಲವೊಮ್ಮೆ ಗಂಭೀರವಾಗಿಯೂ, ಅಪರೂಪಕ್ಕೊಮ್ಮೆ ವಿವಾದಾತ್ಮಕವಾಗಿಯೂ ಚಿತ್ರಿಸುವ ವ್ಯಂಗ್ಯಚಿತ್ರಗಳನ್ನು ಮೆಚ್ಚದವರು ಯಾರು? ಅವು ಒಂದು ಪುಟ್ಟ ಚಿತ್ರದಲ್ಲಿ ಬಿಚ್ಚಿಡುವ ಭಾವಗಳು ಅಸಂಖ್ಯ!
ಸೃಜನಾತ್ಮಕ ಕಲಾವಿದನ ನೈಜ ಪ್ರತಿಭೆಯನ್ನು ಹೊರಗೆಡಹುವ ಈ ವಕ್ರ ರೇಖೆಯ ಮೂಲಕ 2017 ರ ವಿವಿಧ ಘಟನೆಗಳನ್ನು ಅಭಿವ್ಯಕ್ತಪಡಿಸಿದ ನಮ್ಮ ಕನ್ನಡದ ಹೆಮ್ಮೆಯ ವ್ಯಂಗ್ಯಚಿತ್ರಕಾರರ ಕೆಲವು ಮಹತ್ವದ ಕಾರ್ಟೂನ್ ಗಳು ಇಲ್ಲಿವೆ.
ಕರ್ನಾಟಕ ವ್ಯಂಗ್ಯ ಚಿತ್ರ ಕಲಾವಿದರಿಗೆ ವೇದಿಕೆ ನೀಡುವ ಸಲುವಾಗಿಯೇ ಆರಂಭವಾದ ಕರ್ನಾಟಕ ವ್ಯಂಗ್ಯಲೋಕ ಎಂಬ ಫೇಸ್ ಬುಕ್ ಗ್ರೂಪ್ ನಲ್ಲಿ ಈ ಎಲ್ಲ ಕಾರ್ಟೂನ್ ಗಳೂ ಲಭ್ಯ. ಸಮಾಜದ ಹಲವು ಮಜಲುಗಳನ್ನು ಮೊನಚು ದಾಟಿಯಲ್ಲಿ, ಹಾಸ್ಯ ಶೈಲಿಯಲ್ಲಿ, ವಿಡಂಬನಾತ್ಮಕವಾಗಿ, ಅರ್ಥಗರ್ಭಿತವಾಗಿ ಹೇಳಿದ ಎಲ್ಲ ವ್ಯಂಗ್ಯಚಿತ್ರಕಾರರಿಗೂ ನಮ್ಮ ನಮನ. ಇಲ್ಲಿರುವ ನೂರಾರು ಕಾರ್ಟೂನ್ ಗಳಲ್ಲಿ ಎಲ್ಲಕ್ಕೂ ಅದರದೇ ಆದ ಮಹತ್ವವಿದೆ, ಅರ್ಥವಿದೆ. ಆದರೆ ನಾವಿಲ್ಲಿ ಕೆಲವನ್ನಷ್ಟೇ ಬಳಸಿದ್ದೇವೆ.

ಬಿಜೆಪಿಯಿಂದ ಪೆಟ್ಟು ತಿಂದ ಕಾಂಗ್ರೆಸ್!
ಡಿಸೆಂಬರ್ 18 ರಂದು ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಹಾಂತೇಶ್ ವಿ.ಅಂಗಡಿಯವರು ರಚಿಸಿದ ಹಾಸ್ಯ ಮಿಶ್ರಿತ ಕಾರ್ಟೂನ್ ಗಮನ ಸೆಳೆಯಿತು! ಬೆಳಿಗ್ಗೆ ತುಂಬಾ ಉತ್ಸಾಹದಲ್ಲಿದ್ದ ಕಾಂಗ್ರೆಸ್ ನ ಕೈ ಚಿಹ್ನೆ ಸಂಜೆಯ ಹೊತ್ತಲ್ಲಿ ಬಿಜೆಪಿಯ ಪೆಟ್ಟಿಗೆ ಗಾಯಗೊಂಡು ಬ್ಯಾಂಡೇಜ್ ಸುತ್ತಿಕೊಂಡ ಚಿತ್ರ ಅದು! ಕೇವಲ ಎರಡು ಕೈ ಚಿಹ್ನೆಯ ಮೂಲಕವೇ ಇಡೀ ಗುಜರಾತ್ ಫಲಿತಾಂಶ ಕಾಂಗ್ರೆಸ್ ಮೇಲೆ ಬೀರಿದ ಪರಿಣಾಮವನ್ನು ಆರ್ಥವತ್ತಾಗಿ ತೋರಿಸಿದಂತಿತ್ತು ಇದು.

ಜನಸಾಮಾನ್ಯನಿಗೆ ಜಿಎಸ್ಟಿ ಬರೆ!
ಕೇಂದ್ರ ಸರ್ಕಾರ 2017 ರಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾರ ತೆರಿಗೆ(ಜಿಎಸ್ಟಿ) ನೀತಿಯಿಂದ ಜನ ಸಾಮಾನ್ಯನ ಮೇಲೆ ಎಷ್ಟು ಪರಿತಪಿಸುತ್ತಿದ್ದಾನೆ ಎಂಬುದನ್ನು ತಮ್ಮ ಅರ್ಥಗರ್ಭಿತ ಚಿತ್ರದ ಮೂಲಕ ಅಭಿವ್ಯಕ್ತಿಪಡಿಸಿದ್ದಾರೆ ಅರುಣ್ ಕುಮಾರ್ ಎಂಬುವವರು.

ಇಂದಿರಾ ಕ್ಯಾಂಟೀನ್ ಭಾಗ್ಯ!
ಬಡವರಿಗೆ ಅತೀ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ನೀಡುವ ಕರ್ನಾತಕ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ಯೋಜನೆಗೆ ಸಂಬಂಧಿಸಿದ ಮಹಾಂತೇಶ್ ಅಂಗಡಿ ಅವರ ಕಾರ್ಟೂನ್ ಗಮನ ಸೆಳೆಯುತ್ತದೆ. ಮೊದಲೆಲ್ಲ ಅಮ್ಮಂದಿರು ಚಿಕ್ಕ ಮಕ್ಕಳಿಗೆ ಚಂದಿರನನ್ನು ತೋರಿಸಿ ಊಟ ಮಾಡಿಸಿ, ಅವರ ಅಳುವನ್ನು ನಿಲ್ಲಿಸುವಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರಿಗೆ ಇಂದಿರಾ ಕ್ಯಾಂಟೀನ್ ತೋರಿಸುತ್ತಿದ್ದಾರೆ ಎಂಬರ್ಥದಲ್ಲಿ ಈ ಚಿತ್ರ ರೂಪುಗೊಂದಿದೆ.

ನಂಜುಂಡಸ್ವಾಮಿ ವ್ಯಂಗ್ಯ!
ಪುಢಾರಿಗಳಿಬ್ಬರು ಇಂದಿರಾ ಕ್ಯಾಂಟೀನ್ ಬಗ್ಗೆ ಚರ್ಚೆ ನಡೆಸುತ್ತಿರುವುದನ್ನು ಚಿತ್ರಸಿ, ಒಬ್ಬ ಪುಢಾರಿ ಇನ್ನೊಬ್ಬರ ಬಳಿ, "ನಾನು ಕೇಳಿದ್ದು ಇಲ್ಲಿ ತಿಂಡಿ ತಿಂದ್ರಾ ಅಂತ ಅಲ್ಲ, ಈ ಯೋಜನೇಲಿ ಎಷ್ಟು ತಿಂದ್ರಿ ಅಂತ...!" ಎಂದು ಪ್ರಶ್ನಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂದು ಈ ಮುಲಕ ಅವರು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಕಾಟಾಚಾರದ ಸೇವೆ!
ಮುಳುಗಿದ ಬೆಂಗಳೂರು ಕಳೆದ ವರ್ಷ ಅತಿಯಾದ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಮುಳುಗುತ್ತಿರುವ ಜನಸಾಮಾನ್ಯನಿಗೆ ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕೆ ಛತ್ರಿಯೊಂದನ್ನು ಬಿಬಿಎಂಪಿ ನೀಡಿದೆ. ಆದರೆ ಆ ಛತ್ರಿ ಎಲ್ಲೆಲ್ಲೂ ಹರಿದು ಹಾಳಾಗಿದೆ. ಅಂದರೆ ಜನಸಾಮಾನ್ಯನಿಗೆ ಕಾಟಾಚಾರಕ್ಕೆ ಬಿಬಿಎಂಪಿ ಸೌಲಭ್ಯ ನೀಡುತ್ತಿದೆ ಎಂಬ ಅರ್ಥವನ್ನು ಇದು ಸ್ಪುರಿಸಿದೆ.

ಡೊನಾಲ್ಡ್ ಟ್ರಂಪ್ ಟೆಕ್ಕಿ ಜ್ವರ!
ಅಮೆರಿಕದಲ್ಲಿರುವ ಭಾರತೀಯರು ಉದ್ಯೋಗ ಕಳೆದುಕೊಳ್ಳಬಹುದಾದ ಸಾಧ್ಯತೆಯನ್ನು ಹೆಚ್ಚಿಸಿದ್ದ ಎಚ್ 1 B ವೀಸಾ ನೀತಿಗಳನ್ನು ಮತ್ತಷ್ಟು ಜಟಿಲ ಗೊಳಿಸಿದ್ದ ಡೊನಾಲ್ಡ್ ಟ್ರಂಪ್ ನಡೆಯನ್ನು ಟೀಕಿಸಿ ರಮೇಶ್ ಚಂಡೆಪ್ಪನವರ ಬಿಡಿಸಿದ ಚಿತ್ರವಂತೂ ಅಮೋಘ. ಟ್ರಂಪ್ ಅವರನ್ನು ಹಕ್ಕಿಯಂತೇ ಬರೆದು, ಇದು ಹಕ್ಕಿ ಜ್ವರವಲ್ಲ, 'ಟೆಕ್ಕಿ' ಜ್ವರ ಎಂಬ ಅರ್ಥದಲ್ಲಿ ಕಾರ್ಟೂನ್ ಬರೆದಿದ್ದಾರೆ.

ಅಜೆಂಡಾ ಬದಲಾಗುತ್ತೆ!
2017 ರಲ್ಲಿ ಕಾಂಗ್ರೆಸ್ ತೊರೆದು ಜೆ.ಡಿ.ಎಸ್ ಸೇರಿದ ಮಾಜಿ ಸಂಸದ ಎಚ್.ವಿಶ್ವನಾಥ್, ಪಕ್ಷ ತೊರೆದ ನಂತರ, 'ಝಂಡಾ ಬದಲಾದರೂ ಅಜೆಂಡಾ ಬದಲಾಗೋಲ್ಲ' ಎಂದಿದ್ದರು. ಆಮೂಲಕ ಪಕ್ಷ ಬದಲಾದರೂ ತಮ್ಮ ತತ್ತ್ವ-ಆದರ್ಶ ಬದಲಾಗೋಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಚಿತ್ರಿಸಿ, 'ಜೆಡಿಎಸ್ ನದ್ದು ಝಂಡಾ ಬದಲಾಗಲ್ಲ, ಆಗಾಗ ಅಜೆಂಡಾ ಬದಲಾಗುತ್ತಿರುತ್ತದೆ' ಎನ್ನುತ್ತಿರುವಂತೆ ವ್ಯಂಗ್ಯಚಿತ್ರ ಬರೆದಿದ್ದಾರೆ ರಾಮ್ ಗೋಪಾಲ್ ಎನ್ನುವವರು.












Click it and Unblock the Notifications