ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ
ಮುಂಬೈ, ಫೆಬ್ರವರಿ 03: ಪ್ರೀತಿಸಲು ನಿರಾಕರಿಸಿದ ಕಾಲೇಜು ಉಪನ್ಯಾಸಕಿ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯು ಮಹಾರಾಷ್ಟ್ರದ ವಿದರ್ಭ ಸಮೀಪ ನಡೆದಿದೆ.
ವಾರ್ದಾ ಜಿಲ್ಲೆಯ ಹಿಂಗನ್ ಘಾಟ್ ಬಳಿ ಯುವಕ ವಿಕೇಶ್ ನಗ್ರಾಲೆ ಹಾಡ ಹಗಲೇ, ರಸ್ತೆಯಲ್ಲಿಯೇ ಕಾಲೇಜು ಉಪನ್ಯಾಸಕಿ ಒಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿಯಿಂದಾಗಿ ಸುಟ್ಟು ಒದ್ದಾಡುತ್ತಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಯುವತಿಯನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಗೆ ಶೇ 40 ಭಾಗ ಸುಟ್ಟಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ಯುವತಿ ಇಂದು ಬೆಳಿಗ್ಗೆ ತನ್ನ ದೋದ್ರಾ ಹಳ್ಳಿಯಿಂದ ಕಾಲೇಜಿಗೆ ತೆರಳುವಾಗ ಹಿಂದಿನಿಂದ ವಾಹನದಲ್ಲಿ ಬಂದ ಯುವಕ ವಿಕೇಶ್ ನಗ್ರಾಲೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹಚ್ಚಿದಾತ ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಕೇಶ್ ನಗ್ರಾಲೆ ಮತ್ತು ಉಪನ್ಯಾಸಕಿ ಇಬ್ಬರು ಈ ಮುಂಚೆ ಗೆಳೆಯರಾಗಿದ್ದರು. ಆದರೆ ಮದುವೆ ಆಗುವಂತೆ ಕೇಳಿದಾಗ ಉಪನ್ಯಾಸಕಿ ನಿರಾಕರಿಸಿದ್ದರು. ನಂತರ ವಿಕೇಶ್ ಗೆ ಬೇರೊಬ್ಬರ ಜೊತೆ ಮದುವೆ ಆಗಿತ್ತು. ಆದರೆ ಈಗ ಮತ್ತೆ ಆಕೆಯೊಂದಿಗೆ ಸ್ನೇಹ ಬಯಸಿ ಕಾಡಿಸುತ್ತಿದ್ದ ಎನ್ನಲಾಗಿದೆ. ಉಪನ್ಯಾಸಕಿ ವಿಕೇಶ್ ಸ್ನೇಹ ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.