ಭೀಕರ ಅಪಘಾತ: ಸ್ಥಳದಲ್ಲೇ 12 ಜನರ ದುರ್ಮರಣ
ಗದಗ, ಜೂ 19: ಟಿಪ್ಪರ್ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದ್ದು ಹನ್ನೆರಡು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಹುಲಕೋಟೆ ಬಳಿ ಸಂಭವಿಸಿದೆ.
ಮೃತ ಪಟ್ಟವರಲ್ಲಿ ಎಂಟು ಮಂದಿ ಮಹಿಳೆಯರು, ಇಬ್ಬರು ಪುರುಷರು ಮತ್ತು ಇಬ್ಬರು ಮಕ್ಕಳು. ಗಾಯಗೊಂಡ ಇಪ್ಪತ್ತು ಜನರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರು ಯಲಬುರ್ಗಾ ತಾಲೂಕು ಸಿದ್ನೆಕೊಪ್ಪ ಗ್ರಾಮದವರಾಗಿದ್ದು, ನವಲಗುಂದ ತಾಲೂಕಿನ ಉಮಚಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ತವರಿಗೆ ವಾಪಸಾಗುತ್ತಿದ್ದರು.
ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಭೇಟಿ ನೀಡಿ, ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ. ಟ್ರ್ಯಾಕ್ಟರ್ ನಲ್ಲಿ ಐವತ್ತು ಜನ ಪ್ರಯಾಣಿಸುತ್ತಿದ್ದರು, ಗದಗ ಕಡೆಯಿಂದ ವಾಯುವೇಗದಲ್ಲಿ ಬಂದ ಟಿಪ್ಪರ್ ವಾಹನ ಟ್ರ್ಯಾಕ್ಟರಿಗೆ ನೇರವಾಗಿ ಢಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮೊಮ್ಮಗಳು ಹಿರಿಯಳಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ಟ್ರ್ಯಾಕ್ಟರ್ ಮೂಲಕ ತೆರಳಿದ್ದರು. ಈ ಅಪಘಾತ ಗುರುವಾರ (ಜೂ 19) ರಾತ್ರಿ ಎಂಟು ಗಂಟೆ ಸುಮಾರಿಗೆ ಸಂಭವಿಸಿದೆ.












Click it and Unblock the Notifications