ಮಹದಾಯಿ : ಬೆಂಗಳೂರು ಚಲೋ, ಬಿಜೆಪಿ ಕಚೇರಿಗೆ ಮುತ್ತಿಗೆ
ಧಾರವಾಡ, ಡಿಸೆಂಬರ್ 22 : ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಬಿಜೆಪಿ ವಿಫಲವಾಗಿರುವುದರಿಂದ ರೈತರು ಆಕ್ರೋಶಗೊಂಡಿದ್ದಾರೆ. ಕರ್ನಾಟಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ರೈತರು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.
ಧಾರವಾಡದಲ್ಲಿ ಶುಕ್ರವಾರ ಮಹದಾಯಿ ಹೋರಾಟಗಾರರು ಸಭೆ ನಡೆಸಿ ಮುಂದಿನ ಹೋರಾಟದ ಯೋಜನೆ ರೂಪಿಸಿದ್ದಾರೆ. ವಿರೇಶ್ ಸೊಬರದ್ ಮಠ ನೇತೃತ್ವದಲ್ಲಿ ರೈತರು ಬೆಂಗಳೂರು ಚಲೋ ನಡೆಸಲಿದ್ದಾರೆ.
ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?
400ಕ್ಕೂ ಹೆಚ್ಚು ರೈತರು ಬೆಂಗಳೂರಿನತ್ತ ಹೊರಟಿದ್ದು, ಶನಿವಾರ ಬೆಳಗ್ಗೆ ಕರ್ನಾಟಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ರೈತರು ಒತ್ತಾಯಿಸಲಿದ್ದಾರೆ.
ಹುಬ್ಬಳ್ಳಿ ಸಮಾವೇಶ : ಹಿಂದುತ್ವ ಮತ್ತು ಮಹದಾಯಿ ವಿವಾದ
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ವಿವಾದವನ್ನು ಬಗೆಹರಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಪಕ್ಷ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಆದ್ದರಿಂದ ಕುಸುಗಲ್, ನವಲಗುಂದದ ಸುಮಾರು 400 ರೈತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದಾರೆ.