ಫೆ.11 ಕ್ಕೆ ಉಳವಿ ಚೆನ್ನಬಸವೇಶ್ವರ ಜಾತ್ರೆ ಮಹಾರಥೋತ್ಸವ
ಇದೇ ತಿಂಗಳ 3ರಿಂದ ಆರಂಭವಾಗಿರುವ ಜಾತ್ರಾ ಮಹೋತ್ಸವ; ಮಹಾ ರಥೋತ್ಸವಕ್ಕೆ 4 ಲಕ್ಷ ಜನರು ಆಗಮಿಸವ ನಿರೀಕ್ಷೆ; ಚನ್ನಬಸವೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ಗಂಗಾಧರ ಚನ್ನಬಸಪ್ಪ ಕಿತ್ತೂರ ಹೇಳಿಕೆ
ಧಾರವಾಡ, ಫೆಬ್ರವರಿ 9: ಇದೇ ತಿಂಗಳ 3 ರಿಂದ ಆರಂಭವಾಗಿರುವ ಕಾರವಾರ ಜಿಲ್ಲೆಯ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಫೆ.11 ರಂದು ಜರುಗಲಿದೆ ಎಂದು ಚನ್ನಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಗಂಗಾಧರ ಚನ್ನಬಸಪ್ಪ ಕಿತ್ತೂರ ಹೇಳಿದರು.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 11 ರಂದು ಸಂಜೆ 4 ಗಂಟೆಗೆ ನಡೆಯುವ ಮಹಾರಥೋತ್ಸವಕ್ಕೆ ರಾಜ್ಯದಾದ್ಯಂದ ಸುಮಾರು 4 ಲಕ್ಷ ಜನರು ಬರುವ ನಿರೀಕ್ಷೆಯಿದೆ ಎಂದರು.

ಈಗಾಗಲೇ 300 ಕ್ಕೂ ಹೆಚ್ಚು ಚಕ್ಕಡಿಗಳಲ್ಲಿ ಭಕ್ತರು ಬಂದಿದ್ದಾರೆ. ಎಲ್ಲ ಭಕ್ತರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಚಿವ ಆರ್.ವಿ.ದೇಶಪಾಂಡೆ ಮಹಾರಥೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಶಾಸಕರಾದ ಶ್ರೀಕಾಂತ ಘೋಟ್ನೇಕರ್, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಶ್ವನಾಥ ಪಾಟೀಲ, ಮಾಜಿ ಸಚಿವ ಸಿ.ಎಂ.ಉದಾಸಿ ಸೇರಿದಂತೆ ಹಲವರು ಆಗಮಿಸಲಿದ್ದಾರೆ.
1.5 ಕೋಟಿ ರೂ. ವೆಚ್ಚದಲ್ಲಿ ಭಕ್ತಾದಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಕಾನೇರಿ ನದಿ ಮತ್ತು ಕಂಡಕಂಡಿ ಹಳ್ಳಗಳಿಗೆ ಸರಕಾರವು ತಾತ್ಕಾಲಿಕ ಬಾಂದಾರ ನಿರ್ಮಿಸಿದೆ. ನೀರನ್ನು ಶುದ್ಧೀಕರಿಸಿ ಪೂರೈಸಲಾಗುವುದು.
ಫೆ. 12 ರಂದು ಬಯಲು ಕುಸ್ತಿ ಪಂದ್ಯಾವಳಿ, ಫೆ.13 ರಂದು ಪಲ್ಲಕ್ಕಿ ಉತ್ಸವ ಮತ್ತು ಓಕುಳಿ ರಥೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದರು. ಜೊತೆಗೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಹಾಗೂ ಜನರಿಗೆ ಬಟ್ಟೆಯ ಕೈಚಿಲ ವಿತರಿಸಲಾಗುವುದು ಎಂದರು.
ಭಕ್ತಾದಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದ್ದು, ಪಶು ವೈದ್ಯರ ತಂಡವೂ ಸೇವೆ ನೀಡಲಿದೆ. ಚಕ್ಕಡಿ ಗಾಡಿಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು ಎಂದರು. ಈಗಾಗಲೇ 65 ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದ್ದು ಇನ್ನು ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು.
(ಚಿತ್ರಕೃಪೆ: ಡಿಸ್ಕವರ್ ಕರ್ನಾಟಕ)












Click it and Unblock the Notifications