ಮಡೆಸ್ನಾನದ ವಿರುದ್ಧ ಸುಪ್ರೀಂಕೋರ್ಟ್ಗೆ ಮೊರೆ
ಬೆಂಗಳೂರು, ನ.28 : ಕರ್ನಾಟಕ ಸರ್ಕಾರ ಮಡೆಸ್ನಾನದ ವಿರುದ್ಧ ಕಾನೂನು ಸಮರ ಆರಂಭಿಸಿದೆ. ಮಡೆಸ್ನಾನ ಮುಂದುವರೆಸಲು ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಮಡೆಸ್ನಾನ ಆಚರಣೆಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಇಂದಿನ ಯುಗದಲ್ಲೂ ಇಂತಹ ಆಚರಣೆ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕುಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನ ನಡೆಸುವ ಕುರಿತು ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಮಡೆಸ್ನಾನ ನಿಷೇಧಿಸಬೇಕೆಂಬ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. [ಮಡೆಸ್ನಾನ ನಿಲ್ಲಿಸಿ, ಮಂಗಳೂರಲ್ಲಿ ಪ್ರತಿಭಟನೆ]

ನನ್ನ ವಿರೋಧವಿದೆ : ತುಮಕೂರಿನಲ್ಲಿ ಗುರವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಮಡೆಸ್ನಾನದ ಆಚರಣೆಗೆ ನನ್ನ ವೈಯಕ್ತಿಕ ವಿರೋಧವಿದೆ. ಇಂದಿನ ಯುಗದಲ್ಲೂ ಮಡೆಸ್ನಾನದಂತಹ ಮೌಢ್ಯವನ್ನು ಆಚರಿಸಿಕೊಂಡು ಬರುತ್ತಿರುವುದು ಸರಿಯಲ್ಲ' ಎಂದು ಹೇಳಿದ್ದರು. [ಮಡೆ ಮಡೆಸ್ನಾನಕ್ಕೆ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್]
ಇದು ಅಮಾನವೀಯ : ಮಡೆಸ್ನಾನಕ್ಕೆ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಯಾವುದೇ ಆಚರಣೆಗಳು ನೈತಿಕತೆ ಮತ್ತು ಸಭ್ಯತೆಗೆ ಧಕ್ಕೆ ತರುವಂತೆ ಇರಬಾರದು. ಮಡೆಸ್ನಾನ ಕುರಿತು ಹೈಕೋರ್ಟ್ ತೀರ್ಪು ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತದೆ ಎಂದು ತಿಳಿಸಿದ್ದರೆ.
ಅಂದಹಾಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯಾದ ಚಂಪಾಷಷ್ಠಿ ಪ್ರಯುಕ್ತ ನಡೆಯುವ ಮಡೆಸ್ನಾನ ಹರಕೆ ಸೇವೆಯು ನ.25ರಿಂದ 27ರವರೆಗೆ ನಡೆದಿದೆ. ಮಡೆಸ್ನಾನ ಪದ್ಧತಿಯನ್ನು ನಿಲ್ಲಿಸಬೇಕೆಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂದೆ ಎತ್ತಿ ಹಿಡಿದಿತ್ತು. ಆದರೆ, ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆಯನ್ನು ಕೆಲವು ದಿನಗಳ ಹಿಂದೆ ತೆರವುಗೊಳಿಸಿತ್ತು.












Click it and Unblock the Notifications