ಲೋಕಸಭೆ ಚುನಾವಣೆ: ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ
ಬೆಂಗಳೂರು, ಏಪ್ರಿಲ್ 10: ಅಂತರರಾಜ್ಯ ಗಡಿ ಭಾಗಗಳ ಜಿಲ್ಲೆಗಳಲ್ಲಿ ಹಣ, ಮದ್ಯ ಮತ್ತಿತರ ವಸ್ತುಗಳ ಸಾಗಣೆ ಬಗ್ಗೆ ಅತಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈವರೆಗೆ ಚುನಾವಣಾ ಅಕ್ರಮ, ವಸ್ತುಗಳನ್ನು ವಶಪಡಿಕೊಂಡ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಡಿ ಜಿಲ್ಲೆಗಳಲ್ಲಿಯೇ ಹೆಚ್ಚಾಗಿ ದಾಖಲಾಗಿರುವುದನ್ನು ಗಮನಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರದಿಂದ 50 ಕಂಪನಿ ಪೊಲೀಸ್ ಪಡೆಯನ್ನು ಮುಂಚಿತವಾಗಿಯೇ ರಾಜ್ಯಕ್ಕೆ ಕರೆತರಲಾಗಿದೆ ಎಂದು ಅವರು ವಿವರಿಸಿದರು.

ಚುನಾವಣಾ ಅಕ್ರಮ:
ಕಳೆದ ಎರಡು ದಿನಗಳಲ್ಲಿ ರಾಮನಗರ ಜಿಲ್ಲೆಯಲ್ಲಿ 28 ಲಕ್ಷ ರೂ., ಬೆಂಗಳೂರಿನ ಚಾಮರಾಜಪೇಟೆಯಲ್ಲಿ 71 ಲಕ್ಷ ರೂ., ಕಾಟನ್ ಪೇಟೆಯಲ್ಲಿ 8 ಲಕ್ಷ ರೂ. ನೆಲಮಂಗಲದಲ್ಲಿ ಎರಡು ಪ್ರಕರಣಗಳಲ್ಲಿ ಒಟ್ಟು 18 ಲಕ್ಷ ರೂ., ಚಿತ್ರದುರ್ಗದಲ್ಲಿ 11 ಲಕ್ಷ ರೂ., ತುಮಕೂರು ಜಿಲ್ಲೆ ಕ್ಯಾತಸಂದ್ರ 4.5 ಲಕ್ಷ ರೂ., ದೊಡ್ಡಬಳ್ಳಾಪುರದಲ್ಲಿ 4.75 ಲಕ್ಷ ರೂ. ಮತ್ತು 140 ಚೀಲ ಅಕ್ಕಿ, ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ 3.65 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ವಶಪಡಿಸಿಕೊಳ್ಳಲಾದ ಹಣದ ಒಟ್ಟು ಮೊತ್ತ 7.76 ಕೋಟಿ ರೂ. ಎಂದು ಅವರು ತಿಳಿಸಿದರು.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕಾಗವಾಡ ಠಾಣೆ ವ್ಯಾಪ್ತಿಯಲ್ಲಿ 13 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಮತ್ತು ವಿದ್ಯುತ್ ಉಪಕರಣಗಳು, ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿ ಚೆಕ್ ಪೋಸ್ಟ್ ನಲ್ಲಿ 4 ಲಕ್ಷ ರೂ. ಮೌಲ್ಯದ ಸೀರೆಗಳು, ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ 2.12 ಲಕ್ಷ ರೂ. ಮೌಲ್ಯದ 4.5 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೊತ್ತ 1.88 ಕೋಟಿ ರೂ. ಎಂದು ಅವರು ತಿಳಿಸಿದರು.
ಮದ್ಯ :
ಕಳೆದ ಎರಡು ದಿನಗಳಲ್ಲಿ ದಾವಣಗೆರೆ, ಗದಗ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಒಟ್ಟು 2.183 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಒಟ್ಟಾರೆ 2.58 ಕೋಟಿ ರೂ. ಮೌಲ್ಯದ 42,823 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನೀತಿ ಸಂಹಿತೆ ಉಲ್ಲಂಘನೆ:
ರಾಜ್ಯದಲ್ಲಿ ಈವರೆಗೆ ಒಟ್ಟಾರೆ 1079 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 188, ಮೈಸೂರಿನಲ್ಲಿ 170, ಚಿಕ್ಕಬಳ್ಳಾಪುರದಲ್ಲಿ 163, ಗುಲಬರ್ಗಾದಲ್ಲಿ 87 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಮಾಣ ಪತ್ರ:
ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸುವ ಪ್ರಮಾಣ ಪತ್ರದ ಸತ್ಯಾಸತ್ಯತೆಯನ್ನು ಆಯೋಗ ಪರಿಶೀಲಿಸಲಾಗದು. ಅಭ್ಯರ್ಥಿಯ ಪ್ರಮಾಣಪತ್ರವನ್ನು ಸಾರ್ವಜನಿಕರ ವೀಕ್ಷಣೆಗಾಗಿ ಆಯೋಗದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು. ಆದರೆ ಈ ಪ್ರಮಾಣ ಪತ್ರದಲ್ಲಿರುವ ಮಾಹಿತಿ ಸತ್ಯಕ್ಕೆ ದೂರವಾಗಿದ್ದರೆ, ದೂರುದಾರರು ಪ್ರತಿ ಪ್ರಮಾಣ ಪತ್ರ ಸಲ್ಲಿಸಬಹುದು. ಅದನ್ನೂ ಸಹ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿದರು. (ಕರ್ನಾಟಕ ವಾರ್ತೆ)












Click it and Unblock the Notifications