ಕುಷ್ಟಗಿಯಲ್ಲಿ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆ; ಪ್ರಿಯತಮ ಪರಾರಿ
ಮೂರು ವರ್ಷಗಳಿಂದ ಪ್ರೀತಿಸಿ, ಇತ್ತೀಚೆಗೆ ಮದುವೆಯಾಗಲೊಲ್ಲೆ ಎಂದವಳ ಮೇಲೆ ರಾಕ್ಷಸನಂತೆ ಎರಗಿಬಿದ್ದ ಪ್ರಿಯತಮ; ಯುವತಿಯ ಕತ್ತು ಕೊಯ್ದು, ಪೆಟ್ರೋಲ್ ಸುರಿದು ಕೊಲ್ಲುವ ಯತ್ನ.
ಕುಷ್ಟಗಿ (ಕೊಪ್ಪಳ), ಮಾರ್ಚ್ 25: ಮೂರು ವರ್ಷಗಳಿಂದ ಪ್ರೇಮಿಸಿದ್ದ ಯುವತಿ ಮದುವೆಗೆ ಒಪ್ಪಲಿಲ್ಲವೆಂದು ರೊಚ್ಚಿಗೆದ್ದ ಆಕೆಯ ಪ್ರಿಯತಮ ಆಕೆಯ ಕತ್ತು ಸೀಳಿ, ಪೆಟ್ರೋಲು ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದನೂರಿನಲ್ಲಿ ನಡೆದಿದೆ.
ಪ್ರಿಯತಮನ ಹೆಸರು ಅಮರೇಗೌಡ ಎಂದಾಗಿದ್ದು, ಆತನಿದ ಹಲ್ಲೆಗೊಳಗಾದ ಪ್ರೇಯಸಿ ಶಹಾನಾಬೇಗಂ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಆಕೆಯ ತಾಯಿಯ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಕಳೆದ ಮೂರು ವರ್ಷಗಳಿಂದ ಅಮರೇ ಗೌಡ, ಶಹಾನಾ ಬೇಗಂಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಕಾರಣಾಂತರಗಳಿಂದ ಆಕೆಯು ಅಮರೇಗೌಡರನ್ನು ಮದುವೆಯಾಗಲು ನಿರಾಕರಿಸಿದ್ದಳು ಎನ್ನಲಾಗಿದೆ.
ಆದರೆ, ಮದುವೆಗಾಗಿ ಪದೇ ಪದೇ ಒತ್ತಾಯಿಸುತ್ತಿದ್ದ ಅಮರೇ ಗೌಡ, ಶಹಾನಾ ಬೇಗಂಳನ್ನು ಕಾಡುತ್ತಿದ್ದ. ಏತನ್ಮಧ್ಯೆ, ಶಹಾನಾಳ ವಿವಾಹ ಬೇರೊಬ್ಬರ ಜತೆಗೆ ನಿಶ್ಚಯವೂ ಆಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಶನಿವಾರ ಆಕೆಯ ಮನೆ ಬಂದ ಆತ, ಶಹಾನಾ ಹಾಗೂ ಆಕೆಯ ತಾಯಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಊರಿನ ಹೊರವಲಯಕ್ಕೆ ಕರೆ ತಂದಿದ್ದಾನೆ.
ಹತ್ಯೆಗೆ ಮೊದಲೇ ಸಿದ್ಧವಾಗಿ ಬಂದಿದ್ದ ಆತ ಜಗಳ ತೆಗೆದು, ಶಹಾನಾ ತಾಯಿ ಮುಂದೆಯೇ ಶಹಾನಾ ಬೇಗಂ ಳ ಕತ್ತು ಸೀಳಿದ್ದಾನೆ. ತಕ್ಷಣವೇ ಕಿರುಚಿಕೊಂಡು ಮಗಳ ರಕ್ಷಣೆಗೆ ಬಂದ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ. ಆನಂತರ, ಶಹಾನಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ತಾಯಿ, ಮಗಳ ಚೀರಾಟ ಕೇಳಿ ಸ್ಥಳೀಯರು ಓಡಿಬಂದು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುದೇನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಹೇಳಲಾಗಿದೆ.
ಆರೋಪಿ ಅಮರೇ ಗೌಡನಿಗಾಗಿ ಶೋಧ ಮುಂದುವರಿದಿದೆ.












Click it and Unblock the Notifications