Ayodhya Ram Mandir: ಕನ್ನಡಿಗರ ನೆಲ ಕಿಷ್ಕಿಂಧೆಗೂ, ಶ್ರೀರಾಮನಿಗೂ ಬಿಡಿಸಲಾರದ ನಂಟು!
ಅಯೋಧ್ಯೆ ಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ಇನ್ನೇನು ಉದ್ಘಾಟನೆ ಆಗಲಿದೆ. ಈ ಮಹತ್ವದ ಕಾರ್ಯಕ್ಕೆ ಇಡೀ ಹಿಂದೂಸ್ತಾನ ಕಾದು ಕೂತಿದೆ. ಆದ್ರೆ ಇದೇ ಸಮಯದಲ್ಲಿ ಈ ಬಗ್ಗೆ ಕನ್ನಡಿಗರು ಡಬಲ್ ಖುಷಿಯಲ್ಲಿ ಇದ್ದಾರೆ. ಯಾಕಂದ್ರೆ ಮರ್ಯಾದ ಪುರುಷ ಶ್ರೀರಾಮ ಹಾಗೂ ಶ್ರೀರಾಮನ ಬಂಟ ಹನುಮನಿಗೂ ಸಂಬಂಧ ಬೆಸೆಯುವಲ್ಲಿ ಕೊಂಡಿಯಾದ ಜಾಗವೇ ಕರ್ನಾಟಕ ಎಂಬುದು ವಿಶೇಷ!
ಹೌದು, ಶ್ರೀರಾಮ ಮತ್ತು ಹನುಮಂತರ ನಡುವೆ ಅದೆಷ್ಟು ಗಾಢವಾದ ಬಂಧವಿತ್ತು ಎಂಬ ವಿಚಾರ ಇಡೀ ಜಗತ್ತಿಗೆ ಗೊತ್ತಿದೆ. ಅದರಲ್ಲೂ ಎಲ್ಲಿ ರಾಮನೋ ಅಲ್ಲಿ ಹನುಮನು ಎನ್ನುವ ಮಾತು ಜನಜನಿತ. ಹೀಗಿದ್ದಾಗ ಹನುಮಂತನ ಜನ್ಮಸ್ಥಳ ನಮ್ಮ ಕರ್ನಾಟಕ. ಅದರಲ್ಲೂ, ಹನುಮಂತನ ಜನ್ಮಸ್ಥಳ ಅಂಜನಾದ್ರಿ ಇಡೀ ರಾಮಾಯಣದ ಕಾಲಘಟ್ಟದಲ್ಲಿ ದೊಡ್ಡದಾದ ಪರಿಣಾಮ ಬೀರಿತ್ತು. ಹಾಗೇ ಶ್ರೀರಾಮ ಹನುಮಂತನ ತಾಯಿ ಅಂಜನಾದೇವಿಯನ್ನು ಭೇಟಿ ಮಾಡಿ, ಆಶೀರ್ವಾದ ಪಡೆದ ಸ್ಥಳವೂ ಇದೇ ಆಗಿತ್ತು. ಹೀಗೆ ಶ್ರೀರಾಮ ಹಾಗೂ ಕನ್ನಡಿಗರ ನಡುವೆ ಅವಿನಾಭಾವ ಸಂಬಂಧ ಇದೆ.

ಮಂದಿರ ಉದ್ಘಾಟನೆಗೆ ಕ್ಷಣಗಣನೆ!
ಅಂದಹಾಗೆ ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲವೇ ಗಂಟೆ ಬಾಕಿ ಇದೆ. ಹೀಗಿದ್ದಾಗ ಕನ್ನಡ ನಾಡಿನ ನೆಲ ಕಿಷ್ಕಿಂಧೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳು ಇವೆ. ಅಯೋಧ್ಯೆಯಿಂದ ಪತ್ನಿಯನ್ನ ಹುಡುಕುತ್ತಾ ಹೊರಟಿದ್ದ ಪ್ರಭು ಶ್ರೀರಾಮ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ಪ್ರದೇಶದ ಕಿಷ್ಕಿಂಧೆ ಭಾಗಕ್ಕೆ ಆಗಮಿಸಿದ್ದರು. ಆಗ ಅಲ್ಲಿಯೇ ಹನುಮಂತನ ಭೇಟಿ ಆಗಿರುತ್ತದೆ. ಆ ನಂತರ ಲಂಕೆ ಮೇಲೆ ದಾಳಿ ಮಾಡಿ ರಾವಣನ ಸೋಲಿಸಿ ಸೀತೆಯನ್ನು ಬಿಡಿಸಿಕೊಂಡು ಬರುವಲ್ಲಿ ಹನುಮಂತ ಮತ್ತು ಕಿಷ್ಕಿಂಧೆ ವಾನರ ಸೇನೆ ಯಶಸ್ವಿಯಾಗಿತ್ತು.
ಹನುಮಂತನ ತಾಯಿಗೆ ಶ್ರೀರಾಮನ ಧನ್ಯವಾದ
ಇದೇ ಕಾರಣಕ್ಕೆ ಲಂಕೆಯಿಂದ ಮರಳುವಾಗ ಶ್ರೀರಾಮ ನೇರ ಅಯೋಧ್ಯೆಗೆ ಹೋಗದೆ, ಮರಳಿ ಅಂಜನಾದ್ರಿಗೆ ಬಂದಿದ್ದರು ಎಂಬ ಮಾಹಿತಿ ಇದೆ. ಅಂಜನಾದ್ರಿಯಲ್ಲಿ ಹನುಮಂತನ ತಾಯಿ ಅಂಜನಾ ದೇವಿ ಅವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದು ಕೃತಜ್ಞತೆ ಸಲ್ಲಿಸಿದ್ದ ಶ್ರೀರಾಮ ಎನ್ನುವ ಮಾಹಿತಿ ಇದೆ. ಹನುಮಂತ ಹಾಗೂ ವಾನರ ಸೇನೆ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ತೆರಳಿದ್ದ ಮರ್ಯಾದ ಪುರುಷನ ಕುರುಹು ಇನ್ನೂ ಹಾಗೇ ಇದೆ.

ಅಂದಹಾಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ, ಹನುಮನ ಜನ್ಮ ಸ್ಥಳ ಎಂಬುದು ಗ್ಯಾರಂಟಿ. ಅಂಜನಾದ್ರಿ ಬೆಟ್ಟದಲ್ಲಿ ಹನುಂತನ ದೇವಸ್ಥಾನ ಇದೆ. ಹನುಮಂತನ ದೇವಸ್ಥಾನ ಆವರಣದಲ್ಲಿ ಹನುಮಂತನ ತಾಯಿ ಅಂಜನಾದೇವಿ ಅವರ ದೇವಸ್ಥಾನವೂ ಇದೆ. ಅಂಜನಾದೇವಿಗೆ ನಿತ್ಯ ಪೂಜೆ ನಡೆಯುತ್ತದೆ. ಒಟ್ನಲ್ಲಿ ಇನ್ನೇನು ಕೆಲವೇ ಗಂಟೆಯಲ್ಲಿ ಇದೀಗ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಆಗಲಿದೆ. ಹೀಗಾಗಿ ಜಗತ್ತಿನ ಗಮನ ಅಯೋಧ್ಯೆ ಜೊತೆಗೆ ಕರ್ನಾಟಕದ ಹನುಮಂತನ ಜನ್ಮಸ್ಥಳದ ಮೇಲೆ ಕೂಡ ಈಗ ನೆಟ್ಟಿದೆ.












Click it and Unblock the Notifications