ಕಾಂಗ್ರೆಸ್ : ಪಕ್ಷ ವಿರೋಧಿಗಳಿಗೆ ಕಾದಿದೆ ಕಠಿಣ ಶಿಕ್ಷೆ
ಬೆಂಗಳೂರು, ಮೇ 12 : ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ ನಾಯಕರಿಗೆ ಬಿಸಿ ಮುಟ್ಟಿಸಲು ಕೆಪಿಸಿಸಿ ಸಜ್ಜಾಗಿದೆ. ಇದಕ್ಕಾಗಿಯೇ ಪಕ್ಷ ವಿರೋಧಿ ಕೆಲಸ ಮಾಡಿದ ನಾಯಕರ ಕುರಿತು ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಂದ ವರದಿ ತರಿಸಿಕೊಂಡಿದೆ.
ಹಲವು ಜಿಲ್ಲೆಗಳಲ್ಲಿ ನಾಯಕರು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ದೂರುಗಳು ಕೆಪಿಸಿಸಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಪ್ರತಿ ಜಿಲ್ಲೆಗಳಿಂದ ಪಕ್ಷ ವಿರೋಧಿಗಳ ಕುರಿತು ವರದಿ ತರಿಸಿಕೊಂಡಿರುವ ಪಕ್ಷ, ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪ್ರಮುಖವಾಗಿ ಕೆಪಿಸಿಸಿಗೆ ಶಿವಮೊಗ್ಗ, ಚಿತ್ರದುರ್ಗ, ಮಂಡ್ಯ, ದಾವಣಗೆರೆ, ಬಿಜಾಪುರ, ಬಳ್ಳಾರಿ, ತುಮಕೂರು, ಉತ್ತರ ಕನ್ನಡ, ಬೆಳಗಾವಿ,ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಕೆಲಸ ನಡೆದಿದೆ ಎಂದು ಕೆಪಿಸಿಸಿಗೆ ದೂರುಗಳು ಬಂದಿವೆ. [ಬಂಡಾಯದ ಕಹಳೆ ಊದಿದ ಕುಮಾರ್ ಬಂಗಾರಪ್ಪ]
ಕೆಲವು ನಾಯಕರು ಬಹಿರಂಗವಾಗಿ ಪಕ್ಷದ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡಿದ್ದರೆ, ಇನ್ನೂ ಕೆಲವು ನಾಯಕರು ಇತರ ಪಕ್ಷದ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಕೆಲವು ನಾಯಕರು ಚುನಾವಣಾ ಪ್ರಚಾರದಿಂದ ದೂರ ಉಳಿಯುವ ಮೂಲಕ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂಬ ದೂರುಗಳು ಸಲ್ಲಿಕೆಯಾಗಿವೆ.
ಈ ಕುರಿತು ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷ ವಿರೋಧಿ ಕೆಲಸ ಮಾಡಿದ ಬಗ್ಗೆ ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕಗಳಿಂದ ವರದಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ಕೇಳಿ ನಾಯಕರಿಗೆ ಪತ್ರ ಬರೆಯಲಾಗಿದ್ದು, ಅದು ನಮ್ಮ ಕೈ ಸೇರಿದ ಮೇಲೆ ಕ್ರಮಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ನಡೆಯಲಿರುವ ಪಕ್ಷದ ಶಿಸ್ತು ಸಮಿತಿ ಸಭೆಯ ಮುಂದೆ ಈ ವರದಿಗಳನ್ನು ಇಡಲಾಗುತ್ತದೆ. ಪಕ್ಷ ವಿರೋಧಿ ಕೆಲಸ ಮಾಡಿದ ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸುವ ಮತ್ತು ಅವರ ಸದಸ್ಯತ್ವವನ್ನು ರದ್ದುಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.












Click it and Unblock the Notifications