ಲಾಕ್ ಡೌನ್ ಸಡಿಲಿಕೆ ಇಲ್ಲ; ಸಂಪುಟ ಸಭೆ ಕರೆದ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 20: ಕೊರೊನಾ ಹರಡದಂತೆ ತಡೆಯಲು ಈಗ ಜಾರಿಗೊಳಿಸಿರುವ ಲಾಕ್ ಡೌನ್ನಲ್ಲಿ ಏಪ್ರಿಲ್ 21ರ ತನಕ ಯಾವುದೇ ಬದಲಾವಣೆ ಇಲ್ಲ. ಮುಂದಿನ ನಡೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದಾರೆ.
"ಏಪ್ರಿಲ್ 21ರ ಮಧ್ಯರಾತ್ರಿ ತನಕ ಲಾಕ್ ಡೌನ್ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ" ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸೋಮವಾರದಿಂದ ಲಾಕ್ ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಏಪ್ರಿಲ್ 14ರಂದು ಕೇಂದ್ರ ಗೃಹ ಇಲಾಖೆ ಸೂಚಿಸಿರುವ ಲಾಕ್ ಡೌನ್ ನಿಯಮಗಳನ್ನು ಏಪ್ರಿಲ್ 21ರ ಮಧ್ಯರಾತ್ರಿ ತನಕ ವಿಸ್ತರಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಚೇರಿ ಸುತ್ತೋಲೆ ನೀಡಿದೆ.
ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದು, ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸುವ ಕುರಿತು ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ.

ಆದೇಶ ವಾಪಸ್ ಪಡೆಯಲಾಗಿತ್ತು
ಶನಿವಾರ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಏಪ್ರಿಲ್ 20ರ ಸೋಮವಾರದಿಂದ ಐಟಿ-ಬಿಟಿ ಕಂಪನಿಗಳಲ್ಲಿ ಶೇ 33ರಷ್ಟು ಉದ್ಯೋಗಿಗಳು ಕೆಲಸ ಮಾಡುವುದು, ಕೆಲಸಕ್ಕೆ ಹೋಗಲು ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈ ಆದೇಶದ ಬಗ್ಗೆ ಹಲವು ಗೊಂದಲ ಉಂಟಾದ ಬಳಿಕ ಅದನ್ನು ವಾಪಸ್ ಪಡೆಯಲಾಗಿತ್ತು. ಈಗಿರುವ ನಿಯಮ ಏಪ್ರಿಲ್ 21ರ ಮಧ್ಯರಾತ್ರಿ ತನಕ ಹಾಗೇಯೇ ಇರಲಿದೆ.

ಉದ್ಯಮಗಳಿಗೆ ಚಾಲನೆ
ಏಪ್ರಿಲ್ 22ರ ಬಳಿಕ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಲವು ಚಟುವಟಿಕೆಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ. ದೊಡ್ಡ ಉದ್ಯಮಗಳನ್ನು ಪುನಃ ಆರಂಭಿಸಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರು ಯಾವ ಸಲಹೆಗಳನ್ನು ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ನರೇಗಾ, ಕೃಷಿ ಚಟುವಟಿಕೆ
ವಿವಿಧ ಜಿಲ್ಲೆಗಳಲ್ಲಿ ನರೇಗಾ ಚಟುವಟಿಕೆಗೆ ಅವಕಾಶ ನೀಡಿ ಗ್ರಾಮೀಣ ಪ್ರದೇಶ ಜನರಿಗೆ ಉದ್ಯೋಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಮುಂಗಾರು ಆರಂಭವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

ಯಾವುದೇ ಸಡಿಲಿಕೆ ಇಲ್ಲ
ಕೋವಿಡ್ -19 ಹಾಟ್ ಸ್ಪಾಟ್, ಕ್ಲಸ್ಟರ್, ಕಂಟೋನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಗೆ ಲಾಕ್ ನಿಯಮಗಳಿಂದ ಯಾವುದೇ ವಿನಾಯಿತಿ ಸಿಗುವುದಿಲ್ಲ. ಮೇ 3ರ ತನಕ ಅಲ್ಲಿ ಎಲ್ಲಾ ನಿಯಮಾವಳಿಗಳು ಮುಂದುವರೆಯಲಿದೆ.












Click it and Unblock the Notifications