ಸ್ಥಳೀಯ ಸಂಸ್ಥೆ ಚುನಾವಣೆ; ವಿಪ್ ಉಲ್ಲಂಘನೆ ನಿಯಮ ರೂಪಿಸಲು ಆದೇಶ
ಬೆಂಗಳೂರು, ಡಿಸೆಂಬರ್ 21; ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ವಿಪ್ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಾಯಿದೆ ಇದ್ದರೂ ಅದಕ್ಕೆ ನಿಯಮಗಳನ್ನು ಸರ್ಕಾರ ರೂಪಿಸಿಲ್ಲ, ಹಾಗಾಗಿ ವಿಪ್ ವಿಚಾರ ದೊಡ್ಡ ತಲೆನೋವಾಗಿದೆ.
ಆದ್ದರಿಂದ ಇದೀಗ ಕರ್ನಾಟಕ ಹೈಕೋರ್ಟ್ ವಿಪ್ ಉಲ್ಲಂಘನೆ ಮಾಡಿ ಸದಸ್ಯರು ಅನರ್ಹತೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ) 1987ರಡಿ ಅನರ್ಹತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪ ಸಂಬಂಧ ತಮ್ಮನ್ನು ಸದಸ್ಯರ ಸ್ಥಾನದಿಂದ ಅನರ್ಹತೆಗೊಳಿಸಿದ ಜಿಲ್ಲಾಧಿಕಾರಿಯ ಕ್ರಮ ಪ್ರಶ್ನಿಸಿ ಸವಿತಾ, ಚಾಂದಿನಿ ಮತ್ತು ಗೋದಾವರಿ ಸಲ್ಲಿಸಿದ್ದ ಅರ್ಜಿಗಳನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ನ್ಯಾಯಲಯದ ಆದೇಶವೇನು?;ರಾಜ್ಯ ಸರ್ಕಾರವು ಪಕ್ಷಾಂತರ ನಿಷೇಧ ಕಾಯ್ದೆ 1987 ರಡಿಯಲ್ಲಿ ಅನರ್ಹತೆ ಪ್ರಕ್ರಿಯೆಗೆ ನಿಯಮ ರೂಪಿಸುವವರೆಗೆ ರಾಜಕೀಯ ಪಕ್ಷದ ತೀರ್ಮಾನವನ್ನು (ವಿಪ್) ಚುನಾಯಿತ ಸದಸ್ಯರಿಗೆ ರವಾನಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸೂಚಿಸಿದೆ. ಅವುಗಳನ್ನು ಪಾಲನೆ ಮಾಡಬೇಕೆಂದು ಆದೇಶ ನೀಡಿರುವ ನ್ಯಾಯಾಲಯ, ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುವಂತೆ ಸೂಚಿಸಿದೆ.
ಸ್ಥಳೀಯ ಸಂಸ್ಥೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ರಾಜಕೀಯ ಪಕ್ಷ ವಿಪ್ (ತೀರ್ಮಾನ) ತೆಗೆದುಕೊಳ್ಳಬೇಕು. ಅದನ್ನು ಚುನಾಯಿತ ಸದಸ್ಯರ ಸಭೆ ನಡೆಸುವ ಸಕ್ಷಮ ಅಧಿಕಾರಿಗೆ ರವಾನಿಸಬೇಕು. ಪಕ್ಷವು ತನ್ನ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ಐದು ದಿನಗಳ ಮುನ್ನ ತಲುಪಿಸಬೇಕು.
ಪಕ್ಷದ ತೀರ್ಮಾನವನ್ನು ಸಭೆ ನಡೆಸುವ 5 ದಿನಗಳ ಮುನ್ನ ಸಕ್ಷಮ ಅಧಿಕಾರಿಯು ಸ್ಥಳೀಯ ಸಂಸ್ಥೆಯ ತನ್ನ ಸದಸ್ಯರಿಗೆ ಕಳುಹಿಸಬೇಕು. ವಿಪ್ ನೋಟಿಸ್ ಅನ್ನು ಆರ್ಪಿಎಡಿ, ಕೊರಿಯರ್ ಅಥವಾ ಇ-ಮೇಲ್ ಮೂಲಕ ಕಳುಹಿಸುವುದು ರಾಜಕೀಯ ಪಕ್ಷಗಳಿಗೆ ಬಿಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: 2020ರ ನ.11ರಂದು ಮಹಾಲಿಂಗಪುರ ಪುರರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಇದರಿಂದ ಯಾರ ಪರವಾಗಿ ಮತ ಚಲಾಯಿಸಬೇಕು ಎಂಬ ಕುರಿತು ಚರ್ಚಿಸಲು ಬಿಜೆಪಿ ಪಕ್ಷವು 2020ರ ನ.7ರಂದು ಸದಸ್ಯರ ಸಭೆ ನಡೆಸಿತ್ತು. ಅಧ್ಯಕ್ಷ ಹುದ್ದೆಗೆ ಲಕ್ಷ್ಮೀ ಮಹಾಲಿಂಗಪ್ಪ ಮದ್ದಾಪುರ ಅವರನ್ನು ಮತ್ತು ಉಪಾಧ್ಯಕ್ಷ ಹುದ್ದೆಗೆ ಸ್ನೇಹಾ ಶಿವಾನಂದ ಅಂಗಡಿ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಮತಹಾಕುವಂತೆ ಎಲ್ಲಾ ಪುರಸಭೆ ಸದಸ್ಯರಿಗೆ ಸೂಚಿಸಲಾಗಿತ್ತು. ಸಭೆಗೆ ಅರ್ಜಿದಾರರು ಸಭೆಗೆ ಗೈರಾಗಿದ್ದರು.
ಚುನಾವಣೆ ನಡೆದಾಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಕ್ರಮವಾಗಿ ಸವಿತಾ ಮತ್ತು ಚಾಂದಿನಿ ಸ್ಪರ್ಧಿಸಿದ್ದರು. ಇದರಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಸಮಾನವಾಗಿ ಅಂದರೆ ತಲಾ 10 ಮತಗಳನ್ನು ಗಳಿಸಿದ್ದರು.
ಇದರಿಂದ ಟಾಸ್ ಮೂಲಕ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಟಾಸ್ನಲ್ಲಿ ಸವಿತಾ ಸೋತರೆ, ಚಾಂದಿನಿ ಜಯ ಸಾಧಿಸಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ಚುನಾವಣೆಯಲ್ಲಿ ಮತದಾನ ಮಾಡಿದಕ್ಕೆ ಅವರನ್ನು ಅನರ್ಹಗೊಳಿಸಲು ಕೋರಿ ದೂರು ಸಲ್ಲಿಕೆಯಾಗಿತ್ತು. ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಅರ್ಜಿದಾರರನ್ನು ಅನರ್ಹಗೊಳಿಸಿ 2021ರ ಏ.8ರಂದು ಆದೇಶಿಸಿದ್ದರು. ಈ ಆದೇಶವನ್ನು ಹೈಕೊರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.












Click it and Unblock the Notifications