ಅಚ್ಚರಿಗಳಿಗೆ ಸಾಕ್ಷಿಯಾದ ಕರ್ನಾಟಕ ಚುನಾವಣೆ: 300 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳ ಬಗ್ಗೆ ತಿಳಿಯಿರಿ
ಬೆಂಗಳೂರು, ಮೇ 15: ಮೇ 10 ರಂದು ನಡೆದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ಗೆ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಕೆಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಕೆಲವರು ನಿರಾಯಾಸವಾಗಿ ಜಯಗಳಿಸಿದರೆ, ಇನ್ನು ಕೆಲವರು ಬಹಳಷ್ಟು ಕಷ್ಟಪಟ್ಟು ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನಲ್ಲಿ ಎರಡು ಕ್ಷೇತ್ರಗಳಲ್ಲಿ ಅತೀ ಕಡಿಮೆ ಅಂತರದಿಂದ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪ್ರತಿಷ್ಠಿತ ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೇವಲ 105 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ 16 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರು ಜಯಗಳಿಸಿದ್ದಾರೆ. ಅದೇ ರೀತಿ ಶೃಂಗೇರಿ ಮತ್ತು ಮಾಲೂರಿನಲ್ಲಿ ಕಾಂಗ್ರೆಸ್ ಕ್ರಮವಾಗಿ 201 ಮತ್ತು 248 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ ಗೆಲುವಿನ ಅಂತರವು 1,000 ಕ್ಕಿಂತ ಕಡಿಮೆ ಇರುವ ಎಂಟು ಸ್ಥಾನಗಳಿವೆ. ಅದರಲ್ಲಿ ನಾಲ್ಕು ಸ್ಥಾನಗಳು 300 ಮತಗಳ ಅಂತರದಲ್ಲಿ ಗೆದ್ದಿವೆ. ಇನ್ನು ನಾಲ್ಕು ಕ್ಷೇತ್ರಗಳಲ್ಲಿ ಗೆಲುವಿನ ಅಂತರ 1,000 ಮತಗಳಿಗಿಂತ ಕಡಿಮೆ ಇವೆ. 3000 ಮತಗಳ ಅಂತರದಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಟ್ಟಾರೆಯಾಗಿ, 5,000 ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 41 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, 65 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 224 ಸದಸ್ಯ ಬಲದ ಮೇ 10 ರಂದು ನಡೆದ ಮತದಾನವು ಶೇ 73.19 ರಷ್ಟು ಪ್ರಮಾಣವನ್ನು ದಾಖಲೆ ಮಾಡಿತ್ತು. ರಾಜ್ಯದ 36 ಕೇಂದ್ರಗಳಲ್ಲಿ ಮತ ಎಣಿಕೆಯನ್ನು ನಡೆಸಲಾಯಿತು.

ಕಳೆದ ಬಾರಿ ಆಡಳಿತಾರೂಢ ಬಿಜೆಪಿ 116 ಶಾಸಕರನ್ನು ಹೊಂದಿತ್ತು. ಕಾಂಗ್ರೆಸ್ 69 ಮತ್ತು ಜೆಡಿಎಸ್ 29, ಬಿಎಸ್ಪಿ 1, ಸ್ವತಂತ್ರರು ಎರಡು ಸ್ಥಾನಗಳನ್ನು ಹೊಂದಿದ್ದರು.
ಹಲವು ಬಿಜೆಪಿ ನಾಯಕರು ತಮ್ಮ ಕ್ಷೇತ್ರಗಳನ್ನು ಕಳೆದುಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಭಾಗವಾಗಿದ್ದ ಒಟ್ಟು 11 ಸಚಿವರು ಕಾಂಗ್ರೆಸ್ ಅಭ್ಯರ್ಥಿಗಳ ಕೈಯಲ್ಲಿ ಸೋಲು ಅನುಭವಿಸಿದ್ದಾರೆ. ಅವರಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತುಪಡಿಸಿ ಬಿ ಶ್ರೀರಾಮುಲು, ಕೆ ಸುಧಾಕರ್, ಜೆಸಿ ಮಾಧುಸ್ವಾಮಿ, ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಮತ್ತು ಕೆಸಿ ನಾರಾಯಣ ಗೌಡ ಸೇರಿದ್ದಾರೆ.
ಸಾರಿಗೆ ಸಚಿವರಾಗಿದ್ದ ಬಿ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಬಿ.ನಾಗೇಂದ್ರ ವಿರುದ್ಧ ಸೋಲು ಕಂಡಿದ್ದಾರೆ. ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರು ಚಿಕ್ಕಬಕ್ಕಾಪುರದಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿ ಪ್ರದೀಪ್ ಈಶ್ವರ್ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದಾರೆ.
ವರುಣಾದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಸಿದ್ದರಾಮಯ್ಯ ವಿರುದ್ಧ ನಿಂತಿದ್ದ ಸಚಿವ ವಿ ಸೋಮಣ್ಣ 46 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.












Click it and Unblock the Notifications