ಲಕ್ಷ್ಮೇಶ್ವರ ಲಾಕಪ್ ಡೆತ್ ಪ್ರಕರಣ: ಪಿಎಸ್ ಐ ಅಮಾನತು
ಗದಗ, ಫೆಬ್ರವರಿ. 05 : ಭಾನುವಾರ ನಡೆದ ಶಿವಾನಂದ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪಟ್ಟಣದ ಸಬ್ ಇನ್ಸ್ ಪೆಕ್ಟರ್ ದೇವಾನಂದ್ ಹಾಗೂ ಕಾರು ಚಾಲಕ ಪೂಜಾರಿ ಅವರನ್ನು ಅಮಾನತು ಮಾಡಿ ಭಾನುವಾರ ಉತ್ತರ ವಲಯದ ಐಜಿಪಿ ರಾಮಚಂದ್ರ ರಾವ್ ಆದೇಶ ಹೊರಡಿಸಿದ್ದಾರೆ.
ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಶಿವಾನಂದ್ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಆದರೆ ಶಿವಾನಂದ್ ಠಾಣೆಯಲ್ಲಿ ಮೃತಪಟ್ಟಿದ್ದಾನೆ. [ಠಾಣೆಯಲ್ಲಿ ಯುವಕನ ಸಾವು, ಲಕ್ಷ್ಮೇಶ್ವರ ಪಟ್ಟಣ ಉದ್ವಿಗ್ನ]
ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಕರು ಮತ್ತು ಸಾರ್ವಜನಿಕರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಒಂದು ಜೀಪ್, 2 ಬೈಕ್ ಸುಟ್ಟು ಹಾಕಿದ್ದಾರೆ. ಇದರಿಂದ ಲಕ್ಷ್ಮೇಶ್ವರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕೆ.ಸಂತೋಷ್ ಬಾಬು ಭೇಟಿ ನೀಡಿ ಪ್ರತಿಭಟನೆಕಾರರನ್ನು ಮನಹೋಲಿಸಲು ಪ್ರಯತ್ನ ನಡೆಸಿದರಾದರೂ ಅದಕ್ಕೆ ಬಗ್ಗದೆ ಪಿಎಸ್ ಐ ದೇವಾನಂದ್ ಅವರನ್ನು ಇಲ್ಲಿಗೆ ಬರುವಂತೆ ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ಒಂದು ವೇಳೆ ಪೊಲೀಸರಿಂದ ತಪ್ಪು ನಡೆದಿದ್ದರೆ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಕೆ.ಸಂತೋಷ್ ಹೇಳಿದ್ದಾರೆ.