ಶಿವಾಜಿನಗರದಲ್ಲಿ ಗೆದ್ದ ಕಾಂಗ್ರೆಸ್; ಲಕ್ಷ್ಮಣ ಸವದಿಗೆ ಸಂತಸ!
Recommended Video
ಬೆಂಗಳೂರು, ಡಿಸೆಂಬರ್ 9 : 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಇದರಿಂದಾಗಿ ಬಿಜೆಪಿ ನಾಯಕರಿಗೆ ಬೇಸರವಾದರೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಸಂತಸವಾಗಿದೆ.
ಸೋಮವಾರ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜೆಡಿಎಸ್ 2018ರಲ್ಲಿ ಗೆದ್ದಿದ್ದ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಮಹೇಶ್ ಕುಮಟಳ್ಳಿ ಗೆಲವು ಸಾಧಿಸಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತವರು ಕ್ಷೇತ್ರವದು. 2018ರ ಚುನಾವಣೆಯಲ್ಲಿ ಅಥಣಿಯಲ್ಲಿ ಲಕ್ಷ್ಮಣ ಸವದಿ ಸೋತರು ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳು, ಸಾರಿಗೆ ಖಾತೆಯ ಸಚಿವರು.
ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಎಂ. ಸರವಣ ಸೋಲು ಲಕ್ಷ್ಮಣ ಸವದಿಗೆ ಒಂದು ರೀತಿಯಲ್ಲಿ ಸಂತಸ ತಂದಿದೆ. ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ಇದರ ಲೆಕ್ಕಾಚಾರಗಳೇನು? ಎಂಬುದು ಚಿತ್ರಗಳಲ್ಲಿದೆ...

ಒಂದು ವಿಧಾನ ಪರಿಷತ್ ಸದಸ್ಯ ಖಾಲಿ
ಶಿವಾಜಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದರು. ವಿಧಾನ ಪರಿಷತ್ ಸದಸ್ಯರಾಗಿರುವ ಅವರು ವಿಧಾನಸಭೆ ಪ್ರವೇಶಿಸುವ ಕಾರಣ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ತೆರವಾಗುವ ಈ ಸ್ಥಾನದ ಮೇಲೆ ಬಿಜೆಪಿ ನಾಯಕರೊಬ್ಬರ ಕಣ್ಣು ಬಿದ್ದಿದೆ.

ಲಕ್ಷ್ಮಣ ಸವದಿ ಹಾದಿ ಸುಗಮ
ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ವಿಧಾನಸಭೆ ಅಥವ ಪರಿಷತ್ ಸದಸ್ಯರಲ್ಲ. 6 ತಿಂಗಳಿನಲ್ಲಿ ಸದಸ್ಯತ್ವ ಪಡೆಯದಿದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈಗ ರಿಜ್ವನ್ ಅರ್ಷದ್ ರಾಜೀನಾಮೆಯಿಂದ ತೆರವಾಗುವ ಕ್ಷೇತ್ರದಿಂದ ಲಕ್ಷ್ಮಣ ಸವದಿ ಆಯ್ಕೆಯಾದರೆ ಅವರ ಹಾದಿ ಸುಗಮವಾಗಲಿದೆ. ಇದಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ.

ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು
ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಕಾಂಗ್ರೆಸ್ನಿಂದ ಬಂದ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿತು. ಇದರಿಂದಾಗಿ ಲಕ್ಷ್ಮಣ ಸವದಿಗೆ ಹಿನ್ನಡೆ ಉಂಟಾಯಿತು. ಈಗ ಮಹೇಶ್ ಕುಮಟಳ್ಳಿ ಸಹ ಗೆಲುವು ಸಾಧಿಸಿದ್ದಾರೆ. ಅತ್ತ ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಪರಿಷತ್ಗೆ ಸದಸ್ಯರಾಗುವ ಸವದಿ ಹಾದಿಯೂ ಸುಗಮವಾಗಿದೆ.

ಪರಿಷತ್ ಸ್ಥಾನ ಖಾಲಿ ಇರಲಿಲ್ಲ
ವಿಧಾನ ಪರಿಷತ್ನಲ್ಲಿ ಜೂನ್ ತನಕ ಯಾವುದೇ ಸ್ಥಾನ ಖಾಲಿ ಇರಲಿಲ್ಲ. ಇದರಿಂದಾಗಿ ಲಕ್ಷ್ಮಣ ಸವದಿ ಸಂಕಷ್ಟಕ್ಕೆ ಸಿಲುಕಿದ್ದರು. ಯಾವ ವಿಧಾನ ಪರಿಷತ್ ಸದಸ್ಯರೂ ಸಹ ಲಕ್ಷ್ಮಣ ಸವದಿಗೆ ಸ್ಥಾನ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಈಗ ರಿಜ್ವಾನ್ ಅರ್ಷದ್ ಗೆಲ್ಲುವ ಮೂಲಕ ಒಂದು ಪರಿಷತ್ ಸ್ಥಾನ ತೆರವಾಗಲಿದೆ.












Click it and Unblock the Notifications