ಆರೋಗ್ಯ ತಪಾಸಣೆಗೆ ಸಿಂಗಪುರಕ್ಕೆ ಕುಮಾರಣ್ಣ
ಬೆಂಗಳೂರು, ಸೆ. 18 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ತಪಾಸಣೆ ಮತ್ತು ವಿಶ್ರಾಂತಿಗಾಗಿ ಸಿಂಗಪುರಕ್ಕೆ ತೆರಳಿದ್ದಾರೆ. ಸುಮಾರು ಎಂಟು ದಿನಗಳ ಕಾಲ ಎಚ್ಡಿಕೆ ಸಿಂಗಪುರದಲ್ಲಿ ಇರುವ ನಿರೀಕ್ಷೆ ಇದೆ. ವೈದ್ಯರ ಸಲಹೆ ಮೇರೆಗೆ ತಪಾಸಣೆಗಾಗಿ ತೆರಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಸತಿ ಸಚಿವ ಅಂಬರೀಶ್ ಚಿಕಿತ್ಸೆ ಪಡೆದಿದ್ದ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಚಿಕಿತ್ಸೆ ಪಡೆಯಲಿದ್ದು, ದೇಹದ ತೂಕವನ್ನು ಇಳಿಸಿಕೊಳ್ಳಲಿದ್ದಾರೆ. ಚಿಕಿತ್ಸೆ ಜೊತೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಲಿದ್ದಾರೆ. ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಕುರಿತಂತೆ ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಪತ್ರೆ ವೈದ್ಯರೊಂದಿಗೆ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ.

ಬುಧವಾರ ರಾತ್ರಿ 11.30ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಕುಮಾರಸ್ವಾಮಿ ಸಿಂಗಪುರಕ್ಕೆ ತೆರಳಿದ್ದಾರೆ. ಆರೋಗ್ಯ ತಪಾಸಣೆ, ವಿಶ್ರಾಂತಿ ಮತ್ತು ತೂಕ ಇಳಿಸಿಕೊಳ್ಳುವ ಬಗ್ಗೆ ಕಡ್ಡಾಯವಾಗಿ ಗಮನ ಹರಿಸಬೇಕು ಎಂದು ಮೂರು ತಿಂಗಳ ಹಿಂದೆ ವೈದ್ಯರು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದರು. [ಜೆಡಿಎಸ್ ಶಾಸಕಾಂಗ ಸಭೆಯ ಮುಖ್ಯಾಂಶಗಳು]
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಂಪೂರ್ಣ ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳುತ್ತಿದ್ದೇನೆ. ಮೂರು ದಿನ ತಪಾಸಣೆ ನಡೆಯಲಿದ್ದು, ನಂತರ ವೈದ್ಯರ ಸಲಹೆಯಂತೆ ವಿಶ್ರಾಂತಿ ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. 2007ರಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ. ಅಂದಿನಿಂದಲೂ ವಿಶ್ರಾಂತಿ ತೆಗೆದುಕೊಂಡಿರಲಿಲ್ಲ. [ಬಿಲ್ ಕಟ್ಟಲಾಗದಷ್ಟು ದರಿದ್ರ ಇಲ್ಲ ಅಂದಿದ್ರು ಅಂಬರೀಶ್]
ಮೂರು ತಿಂಗಳ ಹಿಂದೆ ವೈದ್ಯರು ವಿಶ್ರಾಂತಿಗಾಗಿ ಸಲಹೆ ನೀಡಿದ್ದರು. ಆದರೆ, ಕೆಲಸದ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಸದ್ಯ ಆರೋಗ್ಯ ತಪಾಸಣೆ ಮತ್ತು ವಿಶ್ರಾಂತಿಗಾಗಿ ತೆರಳುತ್ತಿದ್ದೇನೆ. ಸುಮಾರು 15 ಕೆಜಿಯಷ್ಟು ತೂಕ ಇಳಿಸಿಕೊಳ್ಳಬೇಕಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜಕೀಯ ವಿರೋಧಿಗಳು ನನ್ನ ಆರೋಗ್ಯ ಸರಿಯಿಲ್ಲ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನಗೇನು ಆಗಿಲ್ಲ ಜನರ ಪ್ರೀತಿ ಮತ್ತು ವಿಶ್ವಾಸದಿಂದ ಆರೋಗ್ಯವಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications