ಬರದಲ್ಲೂ ತಾಳೆ ಬೆಳೆದು ಯಶಸ್ಸು ಕಂಡ ಕೊಪ್ಪಳದ ರೈತ
ಕೊಪ್ಪಳ, ಸೆಪ್ಟೆಂಬರ್ 15 : ಸರಿಯಾದ ಸಮಯಕ್ಕೆ ಮಳೆ ಇಲ್ಲದೇ ಒಂದೆಡೆ ಬರ ಆವರಸಿದ್ದರೆ ಮತ್ತೊಂದೆಡೆ ಇಂತಹ ಬರದಲ್ಲೂ ಕೊಪ್ಪಳ ಜಿಲ್ಲೆಯ ಕ್ಯಾದಿಗುಪ್ಪಿ ಗ್ರಾಮದ ರೈತ ತಾಳೆ ಬೆಳೆ ಬೆಳೆದು ಯಶಸ್ಸು ಕಂಡಿದ್ದಾನೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಿ ಗ್ರಾಮದ ರೈತ ಶಂಕರಗೌಡರ, ತೆಂಗಿನ ಬೆಳೆಯಂತೆ ರೈತರಿಗೆ ಹೆಚ್ಚಿನ ಆದಾಯ ಕೊಡುವ ಹಾಗೂ ಕಡಿಮೆ ನಿರ್ವಹಣೆಯುಳ್ಳ ಬಹು ವಾರ್ಷಿಕ ಬೆಳೆಯಾದ ತಾಳೆ ಬೆಳೆಯನ್ನು ಬರದಲ್ಲೂ ಲಾಭದಾಯಕವಾಗಿ ಬೆಳೆದ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಕಡಿಮೆ ನೀರು, ಹೆಚ್ಚು ಆದಾಯ : ಮಾದರಿಯಾದ ಕೊಪ್ಪಳದ ರೈತ
ಶಂಕರಗೌಡ್ರು ಅವರು ಒಬ್ಬ ಪ್ರಗತಿಪರ ರೈತರಾಗಿದ್ದು, 8.20 ಎಕರೆ ಕೃಷಿ ಜಮೀನನ್ನು ಹೊಂದಿದ್ದಾರೆ. ಈ ಮೊದಲು ಇದರಲ್ಲಿ ಜೋಳ, ಹತ್ತಿ, ಶೇಂಗಾ ಮತ್ತು ಇತರೇ ಕೃಷಿ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದರು. ಆದರೆ, ಕೃಷಿಯಿಂದ ಇವರಿಗೆ ಹೆಚ್ಚಿನ ಲಾಭ ಕಂಡುಬರದ ಕಾರಣ ಮತ್ತು ಕೂಲಿಕಾರರ ಕೊರತೆಯಿಂದಾಗಿ, ತೋಟಗಾರಿಕೆ ಬೆಳೆಯತ್ತ ಆಸಕ್ತಿ ತೋರಿಸಿದ್ದಾರೆ.
27 ವರ್ಷಗಳ ಶ್ರಮದಿಂದ ಕೆರೆ ನಿರ್ಮಿಸಿ ಹಳ್ಳಿಯ ಬರ ನೀಗಿಸಿದ ಸಾಧಕ
ಈ ಬಗ್ಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದಾಗ, ಅವರಿಗೆ ಸರ್ಕಾರದ "ಸಾಮರ್ಥ್ಯವುಳ್ಳ ಎಣ್ಣೆ ತಾಳೆ ಯೋಜನೆಯು" ಇಲಾಖೆ ಮತ್ತು ಖಾಸಗಿ ಸಂಸ್ಥೆಯವರೊಂದಿಗೆ (ಪಿ.ಪಿ.ಪಿ) ಒಡಗೂಡಿ ಅನುಷ್ಠಾನಗೊಳಿಸುತ್ತಿರುವುದನ್ನು ತಿಳಿದು, ತಾಳೆ ಬೆಳೆಯಲು ಮುಂದಾದರು.
ಕೃಪೆ: ಕೊಪ್ಪಳ ವಾರ್ತೆ
ಅತ್ಯಂತ ಲಾಭದಾಯಕ ಬೆಳೆ ಈ ತಾಳೆ ಬೆಳೆ
ತೋಟಗಾರಿಕೆ ಅನೇಕ ವೈವಿಧ್ಯಮಯ ಬೆಳೆಗಳನ್ನು ಹೊಂದಿದ್ದು, ಇವುಗಳಲ್ಲಿ ತೆಂಗಿನ ಜಾತಿಗೆ ಸೇರಿದ ತಾಳೆ ಬೆಳೆಯೂ ಒಂದು. ತೆಂಗಿನ ಬೆಳೆಯಂತೆ ಇದೂ ಕೂಡ ರೈತರಿಗೆ ಹೆಚ್ಚಿನ ಆದಾಯ ಕೊಡುವ ಕಡಿಮೆ ನಿರ್ವಹಣೆಯುಳ್ಳ ಬಹುವಾರ್ಷಿಕ ಬೆಳೆ. ಅಲ್ಪ ನೀರಿನೊಂದಿಗೆ ನಿಯಮಿತವಾಗಿ ಗೊಬ್ಬರ ಹಾಕಿದರೆ ಅತ್ಯಂತ ಲಾಭದಾಯಕ ಬೆಳೆ ಈ ತಾಳೆ ಬೆಳೆ.
ತಾಳೆ ಬೆಳೆ ಜತೆಗೆ ಇತರೆ ಕೃಷಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಶಂಕರಗೌಡ್ರು, "ನಾನು ಇಲಾಖೆ ಮತ್ತು ಖಾಸಗಿ ಸಂಸ್ಥೆಯವರ ಮಾರ್ಗದರ್ಶನದಂತೆ 8.20 ಎಕರೆ ಜಮೀನಿನ ಪೈಕಿ 5 ಎಕರೆ ಪ್ರದೇಶದಲ್ಲಿ ಒಟ್ಟು 290 ತಾಳೆ ಬೆಳೆಯನ್ನು ಬೆಳೆಯುತ್ತಿದ್ದೇನೆ. ಅಲ್ಲದೇ ಹಾಲು ಉತ್ಪಾದನೆಗೋಸ್ಕರ ಏಳು ಎಮ್ಮೆಗಳನ್ನು ಸಾಕಿದ್ದೇನೆ. ಈ ಜಾನುವಾರುಗಳ ನಿರ್ವಹಣೆಗೆ ಇನ್ನುಳಿದ ಮೂರು ಎಕರೆ ಜಮೀನಿನಲ್ಲಿ ಮೇವು ಬೆಳೆದಿದ್ದೇನೆ. ಇದರ ಜತೆಯಲ್ಲಿಯೇ 100 ಕೋಳಿ ಸಾಕಾಣಿಕೆಯನ್ನು ಸಹ ಕೈಗೊಂಡಿದ್ದು, ತೋಟದ ಬದುವಿನಲ್ಲಿ 15 ತೆಂಗು 4 ನಿಂಬೆ ಗಿಡಗಳನ್ನು ಹಾಕಿದ್ದೇನೆ. ಒಟ್ಟಾರೆಯಾಗಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದೇನೆ ಎಂದರು.
ತಾಳೆ ಬೆಳೆದ ರೈತ ಶಂಕರಗೌಡ್ರು ಆದಾಯ ಎಷ್ಟು?
ತಾಳೆ ಗಿಡಗಳಿಂದ ಕಳೆದ ವರ್ಷ, 30 ಟನ್ ತಾಳೆ ಹಣ್ಣಿನ ಇಳುವರಿ ಪಡೆದಿದ್ದು, ಪ್ರತಿ ಟನ್ ಗೆ 10,000 ರು. ಗಳಂತೆ ಬೆಂಬಲ ಬೆಲೆ ಸಿಗುತ್ತಿದ್ದು, ಖರ್ಚು ತೆಗೆದು ಎಕರೆಗೆ 40 ರಿಂದ 50 ಸಾವಿರ ರೂಪಾಯಿವರೆಗೆ ಉಳಿತಾಯವಾಗುತ್ತಿದೆ. ಇದಲ್ಲದೇ ಹೈನುಗಾರಿಕೆ ಹಾಗೂ ಕೋಳಿಗಳಿಂದ ವರ್ಷಕ್ಕೆ 1 ರಿಂದ 1.5 ಲಕ್ಷಗಳವರೆಗೆ ಆದಾಯ ಬರುತ್ತಿದ್ದು, ಒಟ್ಟಾರೆಯಾಗಿ ಎಲ್ಲಾ ಮೂಲಗಳಿಂದ ವರ್ಷಕ್ಕೆ ಕನಿಷ್ಠ 4 ಲಕ್ಷ ರು, ಗಳ ಆದಾಯವನ್ನು ಶಂಕರಗೌಡರ ಅವರು ಪಡೆಯುತ್ತಿದ್ದಾರೆ.
ನೀವೂ ತಾಳೆ ಬೆಳೆ ಬೆಳೆಯಲು ಸಂಪರ್ಕಿಸಬಹುದು
ರೈತ ಶಂಕರಗೌಡ್ರು ಅವರ ಆರ್ಥಿಕ ಅಭಿವೃದ್ಧಿಯಿಂದಾಗಿ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದೆ. ಕಡಿಮೆ ನಿರ್ವಹಣೆಯಲ್ಲಿ ತಾಳೆ ಬೆಳೆಯನ್ನು ಸಮರ್ಪಕವಾಗಿ ಬೆಳೆಯಬಹುದೆಂದು ಸಾಬೀತುಪಡಿಸಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಂಕರಗೌಡ್ರು ಮೊಬೈಲ್ ನಂಬರ್ 9901622550, ಹಾರ್ಟಿಕ್ಲಿನಿಕ್ ವಿಷಯ ತಜ್ಞರು ವಾಮನಮೊರ್ತಿ 9482672039 ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರ (ತಾಳೆ ಬೆಳೆ ಯೋಜನೆ) ಕಚೇರಿ ಇವರನ್ನು 9900775894 ಮತ್ತು 9886200574 ಕ್ಕೆ ಸಂಪರ್ಕಿಸಬಹುದಾಗಿದೆ.