ಮುನ್ನಾರ್ ಗೆ ಹಿನ್ನಡೆ, ನಮ್ಮ ಕೊಡಗು ಈಗ ನಂ 1
ಮಡಿಕೇರಿ, ನ.26: ಪ್ರವಾಸೋದ್ಯಮದ ವಿಷಯದಲ್ಲಿ ಕರ್ನಾಟಕಕ್ಕಿಂತ ಮುಂಚೂಣಿಯಲ್ಲಿದ್ದ ಪಕ್ಕದ ರಾಜ್ಯ ಕೇರಳಕ್ಕೆ ಈ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಲ್ಲಿ ತನಕ ಕೇರಳ ಇಡುಕ್ಕಿ ಜಿಲ್ಲೆ ಮೆಚ್ಚುತ್ತಿದ್ದ ಪ್ರವಾಸಿಗರು ಈಗ ಕರ್ನಾಟಕದ ಕೊಡಗು ಜಿಲ್ಲೆಯೇ ಬೆಸ್ಟ್ ಎಂದಿದ್ದಾರೆ.
ಎರಡು ರಾಜ್ಯಗಳ ಪ್ರವಾಸೋದ್ಯಮ ಇಲಾಖೆ ಹೊರ ಹಾಕಿರುವ ಇತ್ತೀಚಿನ ಮಾಹಿತಿ ಪ್ರಕಾರ ಮುನ್ನಾರ್ ಬದಲಿಗೆ ಕೊಡಗಿನ ತಾಣಗಳಿಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
2012-13ರ ಅವಧಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮುನ್ನಾರ್ ಈಗ ಆ ಸ್ಥಾನವನ್ನು ಕೊಡಗಿಗೆ ಬಿಟ್ಟು ಕೊಟ್ಟಿದೆ. ಈ ವರ್ಷದ ಜನವರಿಯಿಂದ ನವೆಂಬರ್ ತಿಂಗಳ ತನಕ ಕೊಡಗಿಗೆ 10,73,961 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. 3,53,545 ಪ್ರವಾಸಿಗರು ಮಾತ್ರ ಮುನ್ನಾರ್ ಗೆ ಭೇಟಿ ನೀಡಿದ್ದಾರೆ. ಆದರೆ, ಮೂಲ ಸೌಕರ್ಯ, ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಮುನ್ನಾರ್ ಮುಂದಿದ್ದರೂ ಕೊಡಗಿನ ಸೌಂದರ್ಯಕ್ಕೆ ಜನ ಮರುಳಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ದಾಖಲೆ ಹೇಳಿದೆ.
ನವದೆಹಲಿಯಲ್ಲಿರುವ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಡೆಸಿದ ಸಮೀಕ್ಷೆ ವರದಿಯಲ್ಲಿ ಕೊಡಗಿಗೆ ದೇಶದ ಪರ್ವತ ತಾಣಗಳ ಪ್ರದೇಶಗಳ ಪೈಕಿ ಅಗ್ರಸ್ಥಾನ ನೀಡಲಾಗಿದೆ ಎಂದು ಕೊಡಗಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಫಣೀಸ್ ಹೇಳಿದ್ದಾರೆ.
ಕೊಡಗಿನ ಹೋಂ ಸ್ಟೇಗಳು, ನೈಸರ್ಗಿಕ ಸೌಂದರ್ಯ, ಜಲಪಾತ, ಸ್ಥಳೀಯ ಜನರ ಆದರಾತಿಥ್ಯಗಳು, ದೇಗುಲಗಳು ಜನ ಮೆಚ್ಚುಗೆ ಗಳಿಸಿವೆ ಹೀಗಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಸಮೀಕ್ಷೆ ವರದಿ ಕಂಡು ಕೊಡಗಿನ ಪ್ರವಾಸೋದ್ಯಮ ಇಲಾಖೆ ಉತ್ತೇಜನಗೊಂಡಿದ್ದು ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ಸಜ್ಜಾಗುತ್ತಿದೆ.
ಮೊದಲ ಹಂತದಲ್ಲಿ ಅನಧಿಕೃತ ಹೋಂ ಸ್ಟೇ, ರೆಸಾರ್ಟ್ ಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ಉತ್ತಮ ಆದಾಯ ತರುತ್ತಿರುವ ಪ್ರವಾಸೋದ್ಯಮದ ಬಗ್ಗೆ ಸ್ಥಳೀಯರಿಗೂ ಆಸಕ್ತಿ ಬೆಳೆದಿದ್ದು, ಲಾಭಕ್ಕಿಂತ ಆತಿಥ್ಯ ಮುಖ್ಯ ಎಂಬುದನ್ನು ಮನಗಂಡಿದ್ದಾರೆ. ಎಲ್ಲೆಡೆ ಸಾರಿಗೆ ಸಂಪರ್ಕ ವ್ಯವಸ್ಥೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದು ಫಣೀಶ್ ಹೇಳಿದ್ದಾರೆ.
ಮುನ್ನಾರ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪ್ರವಾಸಿಗರನ್ನು ಕಳೆದುಕೊಂಡಿದೆ. ಜನರಿಂದ ತುಂಬಿರುತ್ತಿದ್ದ ಪ್ರವಾಸಿ ತಾಣಗಳು ಖಾಲಿಯಾಗಿವೆ. ದಿನವೊಂದಕ್ಕೆ 6000ಕ್ಕೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಮುನ್ನಾರ್ ಈ ವರ್ಷ ಸರಾಸರಿ 3000 ಜನರನ್ನು ಮಾತ್ರ ಸ್ವಾಗತಿಸಿದೆ. ಶೇ 40 ರಷ್ಟು ಪ್ರವಾಸಿಗರನ್ನು ನಾವು ಮಿಸ್ ಮಾಡಿಕೊಂಡೆವು ಎಂದು ಎರವಿಕುಲಂ ರಾಜಮಲ ವೈಲ್ಡ್ ಲೈಫ್ ಧಾಮದ ವಾರ್ಡನ್ ಸೋಮನ್ ವ್ಯಥೆಪಡುತ್ತಾರೆ.