ನೈಸ್ ವಿರುದ್ಧ ಹೇಳಿಕೆ ನೀಡದಂತೆ ದೇವೇಗೌಡರಿಗೆ ನಿರ್ಬಂಧ, 2 ಕೋಟಿ ರು ದಂಡ
ಬೆಂಗಳೂರು, ಜೂನ್ 22: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (ನೈಸ್) ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ದಂಡ ವಿಧಿಸಲಾಗಿದೆ. ದೇವೇಗೌಡರ ಹೇಳಿಕೆಯಿಂದ ನೈಸ್ ಸಂಸ್ಥೆ ಘನತೆಗೆ ಚ್ಯುತಿ ಉಂಟಾಗಿದೆ ಎಂದು ಆರೋಪಿಸಲಾಗಿದೆ.
2011ರಲ್ಲಿ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೀಡಿದ್ದ ಹೇಳಿಕೆಗಳನ್ನು ಆಧರಿಸಿ ದೇವೇಗೌಡರ ವಿರುದ್ಧ ನೈಸ್ ಸಂಸ್ಥೆ ಮೊಕದ್ದಮೆ ಹೂಡಿತ್ತು. ''ದೇವೇಗೌಡರ ಹೇಳಿಕೆಯಿಂದ ಸಂಸ್ಥೆಯ ಘನತೆಗೆ ಚ್ಯುತಿಯಾಗಿದ್ದು, ಅದಕ್ಕಾಗಿ ರೂ. 10 ಕೋಟಿ ಪರಿಹಾರ ಕೊಡಿಸಬೇಕು," ಎಂದು ನೈಸ್ ಸಂಸ್ಥೆ ಕೋರಿತ್ತು.
ರೈತರಿಂದ 'ನೈಸಾ'ಗಿ ಭೂಮಿ ವಶಪಡಿಸಿಕೊಂಡು ಬಿಡಿಗಾಸು ಪರಿಹಾರ
''ನೈಸ್ ವಿರುದ್ಧ ಮಾಡಿದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಪ್ರತಿವಾದಿ ದೇವೇಗೌಡರು ಯಾವುದೇ ತೆರನಾದ ದಾಖಲೆಗಳನ್ನು ನೀಡಿಲ್ಲ,'' ಎಂದು ನ್ಯಾಯಾಧೀಶ ಮಲ್ಲನಗೌಡ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಇಂಥ ಹೇಳಿಕೆಗಳಿಂದ ಮಹತ್ವದ ಯೋಜನೆ ಜಾರಿಗೊಳಿಸಲು ತಡವಾಗಬಹುದು, ನೈಸ್ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ತೆರನಾದ ಹೇಳಿಕೆಗಳನ್ನು ನೀಡಬಾರದು ಎಂದು ದೇವೇಗೌಡರಿಗೆ ನ್ಯಾಯಾಲಯ ನಿರ್ಬಂಧ ಹೇರಿದೆ.
ದೇವೇಗೌಡ ಅವರು ನೈಸ್ ಕಾರಿಡಾರ್ ಪ್ರಾರಂಭವಾದಾಗಿನಿಂದಲೂ ಅದರ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ಕುಮಾರಸ್ವಾಮಿ ಅವರು ಸಹ ನೈಸ್ ಸಂಸ್ಥೆಯು ರೈತರ ಭೂಮಿ ಕಬಳಿಸಿದೆ ಎಂದು ಹಲವು ಬಾರಿ ಆರೋಪ ಮಾಡಿದ್ದರು.ನೈಸ್ ಸಂಸ್ಥೆ ಮುನ್ನೆಡೆಸುತ್ತಿರುವ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಯೋಜನೆಯ ಲೋಪಗಳನ್ನು ಬಳಸಿಕೊಂಡ ನೈಸ್ ಸಂಸ್ಥೆ ಅಗತ್ಯಕ್ಕಿಂತ ಹೆಚ್ಚು ಭೂಮಿ ವಶಪಡಿಸಿಕೊಂಡಿದ್ದು ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡ ಪತ್ರ ಬರೆದಿದ್ದರು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)
Recommended Video