ಅನ್ನಭಾಗ್ಯ:ಕೇಂದ್ರದಿಂದ ಸಿಗದ ನೆರವು, ಅಕ್ಕಿ ಖರೀದಿಸಲು ತೆಲಂಗಾಣಕ್ಕೆ ರಾಜ್ಯ ಅಧಿಕಾರಿಗಳ ತಂಡ
ಬೆಂಗಳೂರು, ಜೂನ್. 16: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ 10 ಕೆಜಿ ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ 'ಅನ್ನ ಭಾಗ್ಯ' ಯೋಜನೆಗೆ ನೆರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಮಾತು ಕೊಟ್ಟಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅನುಮೋದನೆ ನೀಡಿದೆ.
ಆದರೆ, ಕೇಂದ್ರ ಸರ್ಕಾರ ಈ ಯೋಜನೆಗೆ ನೆರವು ನೀಡುತ್ತಿಲ್ಲ. ಅನ್ನ ಭಾಗ್ಯ ಯೋಜನೆಯನ್ನು ಘೋಷಿಸುವ ಮೊದಲು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿಲ್ಲ. ಇದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಆಹಾರ ಧಾನ್ಯವನ್ನು ಸಂಗ್ರಹಿಸಿ ವಿತರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಆಹಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಭೋದ್ ಕುಮಾರ್ ಸಿಂಗ್ ಹೇಳಿದ್ದಾರೆ.

ಹೀಗಾಗಿ ನೆರೆಯ ರಾಜ್ಯಗಳಿಂದ ಅಕ್ಕಿ ಖರೀಧಿಸಲು ರಾಜ್ಯ ಸರ್ಕಾರ ಮುಮದಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ರಾಜ್ಯದ ಅಧಿಕಾರಿಗಳ ತಂಡ ತೆಲಂಗಾಣಕ್ಕೆ ತೆರಳಲಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಜುಲೈ 1 ರಂದು 'ಅನ್ನ ಭಾಗ್ಯ' ಯೋಜನೆಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
"ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಲಂಗಾಣ ಸಹವರ್ತಿಯೊಂದಿಗೆ ಮಾತನಾಡಿದ್ದಾರೆ ಇದೇ ರೀತಿಯ ಯೋಜನೆಗಾಗಿ ಅಕ್ಕಿ ಖರೀದಿಸಲು ಆಂಧ್ರಪ್ರದೇಶ ಮತ್ತು ಪಂಜಾಬ್ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ನಾವು ಈ ಹಿಂದೆ ಎನ್ಸಿಸಿಎಫ್, ಮಾರ್ಕೆಟಿಂಗ್ ಫೆಡರೇಶನ್, ಗ್ರಾಹಕ ಒಕ್ಕೂಟದ ಇತರ ಏಜೆನ್ಸಿಗಳು ಮತ್ತು ನೆರೆಯ ರಾಜ್ಯಗಳಿಂದ ಅಕ್ಕಿ ಖರೀದಿಸಿದ್ದೇವೆ. ನೆರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಲಾಗಿದ್ದು, ಅನ್ನ ಭಾಗ್ಯಕ್ಕಾಗಿ ಅಕ್ಕಿ ಖರೀದಿಗೆ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ" ಎಂದಿದ್ದಾರೆ.
ನೆರೆಯ ರಾಜ್ಯಗಳಿಂದ ಖರೀದಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂಬ ಪ್ರಶ್ನೆಗೆ, ರಾಜ್ಯಕ್ಕೆ ಹೊರೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಮುನಿಯಪ್ಪ ತಿಳಿಸಿದ್ದಾರೆ. ಭಾರತೀಯ ಆಹಾರ ನಿಗಮದ ಮೂಲಕ ಕರ್ನಾಟಕ ಅಕ್ಕಿಯನ್ನು ನಿರಾಕರಿಸುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ ಸಚಿವ, ಜುಲೈ 12 ರಂದು ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ಎಫ್ಸಿಐ ಒಪ್ಪಿಗೆ ನೀಡಿದ್ದು, ಜುಲೈ 13 ರಂದು ಎಫ್ಸಿಐ ಅಕ್ಕಿ ಮಾರಾಟವನ್ನು ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.
ಎಫ್ಸಿಐನಲ್ಲಿ ಸುಮಾರು 13 ಲಕ್ಷ ಟನ್ ಅಕ್ಕಿ ದಾಸ್ತಾನಿದ್ದು, ರಾಜ್ಯಕ್ಕೆ ನೀಡಿಲ್ಲ ಎಂದ ಸಚಿವರು, "ನಾವು ಅದನ್ನು ಉಚಿತವಾಗಿ ಕೇಳುತ್ತಿಲ್ಲ ಆದರೆ ನಿಗದಿತ ದರ 34 ರೂ. ಕೆಜಿಗೆ ನೀಡಲು ಸಿದ್ಧರಿದ್ದೇವೆ. ಆಗಲೂ ಅದನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕಕ್ಕೆ ಅಕ್ಕಿಯನ್ನು ನಿರಾಕರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜಕೀಯ ಎಂದಿರುವ ಅವರು, ದೇಶವನ್ನು ಆಳಿದ ಯಾವುದೇ ಕೇಂದ್ರ ಸರ್ಕಾರಗಳು ರಾಜ್ಯಗಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications