ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡದಲ್ಲೇ ವೃತ್ತಿಪರ ಶಿಕ್ಷಣಕ್ಕೆ ಅವಕಾಶ
ಬೆಂಗಳೂರು, ಜುಲೈ 19: ರಾಜ್ಯಾದ್ಯಂತ ಮುಂದಿನ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್ಗಳನ್ನು ಕನ್ನಡದಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದರು.
ಭಾನುವಾರ "ಹೊಸ ಶಿಕ್ಷಣ ನೀತಿ-ಭಾರತೀಯ ಭಾಷೆಗಳ ಅಧ್ಯಯನ" ಎಂಬ ವಿಷಯದ ಕುರಿತು ನಡೆದ ವೆಬಿನಾರ್ನಲ್ಲಿ ಮಾತನಾಡಿದ ಅವರು, "ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ನಂತರ ಪ್ರಾದೇಶಿಕ ಭಾಷೆ (ಮಾತೃ ಭಾಷೆ)ಯನ್ನು ಬಲಗೊಳಿಸುವ ಇನ್ನಷ್ಟು ಪ್ರಯತ್ನಗಳನ್ನು ನಡೆಸಲಾಗುವುದು. ಈ ವಿಷಯದಲ್ಲಿ ಯಾವುದೇ ಆತಂಕಗಳು ಬೇಡ" ಎಂದು ಹೇಳಿದರು.

ಪ್ರಾದೇಶಿಕ ಭಾಷೆಗಳಲ್ಲಿ ವೃತ್ತಿಪರ ಶಿಕ್ಷಣ ನೀಡುವುದನ್ನು ಹೊಸ ಶಿಕ್ಷಣ ನೀತಿ ಒತ್ತಿ ಹೇಳುತ್ತದೆ. ಅದರಂತೆಯೇ ಸರ್ಕಾರವೂ ಈ ನಿಟ್ಟಿನಲ್ಲಿ ಮುಂದುವರೆಯುತ್ತದೆ. ಈಗಾಗಲೇ ಪಠ್ಯಕ್ರಮಗಳ ಅನುವಾದ ಕಾರ್ಯವನ್ನು ಸರ್ಕಾರ ಆರಂಭಿಸಿದೆ ಎಂದು ಮಾಹಿತಿ ನೀಡಿದರು.
"ತಂತ್ರಜ್ಞಾನ ಹಾಗೂ ಆವಿಷ್ಕಾರಕ್ಕೆ ತಕ್ಕಂತೆ ಕನ್ನಡ ಭಾಷೆಯೂ ಏಳಿಗೆಯಾಗಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡ ಇರಬೇಕು. ಹೊಸ ಶಿಕ್ಷಣ ನೀತಿ ಹೊರಗಿನವರು ನಮ್ಮ ಮೇಲೆ ತಮ್ಮ ಭಾಷೆಯನ್ನು ಹೇರಲು ಅನುವು ಮಾಡಿಕೊಡುವುದಿಲ್ಲ. ಈ ಕೋರ್ಸ್ ಹಾಗೂ ಪಠ್ಯಕ್ರಮಗಳನ್ನು ನಮ್ಮ ವಿಶ್ವವಿದ್ಯಾಲಯಗಳು ಹಾಗೂ ವಿಷಯ ತಜ್ಞರೇ ರೂಪಿಸಲಿದ್ದಾರೆ" ಎಂದರು.
"ಶಿಕ್ಷಣ ನೀತಿ ಪ್ರಕಾರ ಮಕ್ಕಳು ಎರಡು ದೇಶೀಯ ಭಾಷೆಗಳನ್ನು ಹಾಗೂ ಒಂದು ಅಂತರರಾಷ್ಟ್ರೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ಅದರಲ್ಲಿ ಮೊದಲು ಮಾತೃಭಾಷೆಗೆ ಆದ್ಯತೆ. ಮೊದಲು ನಮ್ಮ ಭಾಷೆ, ನಂತರ ಅನ್ಯಭಾಷೆ. ಇದರೊಂದಿಗೆ, ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ ಕೊಟ್ಟು ಸಬಲೀಕರಣಗೊಳಿಸಲಾಗುವುದು. ಆಡಳಿತಾತ್ಮಕ, ಶೈಕ್ಷಣಿಕ, ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಕೊಡಲಾಗುವುದು" ಎಂದು ತಿಳಿಸಿದರು.












Click it and Unblock the Notifications