ಲಸಿಕೆ ಹಾಕದಿರುವವರು ಐಸಿಯು ದಾಖಲಾಗುವ ಸಾಧ್ಯತೆ ಹೆಚ್ಚು: ಕರ್ನಾಟಕ ವಾರ್ ರೂಂ ಮುಖ್ಯಸ್ಥ
ಬೆಂಗಳೂರು, ಜನವರಿ 09: ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಶರವೇಗದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಹೇರಿದೆ. ವಾರಾಂತ್ಯದ ಕರ್ಫ್ಯೂ ಹೇರುವುದರೊಂದಿಗೆ ಕೊರೊನಾ ತಡೆಗೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕೊರೊನಾ ತಡೆಗೆ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರ್ ರೂಮ್ಗೆ ಈಗ ರಾಷ್ಟ್ರಪ್ರಶಸ್ತಿ ಲಭಿಸಿದೆ. ಜೊತೆಗೆ COVID-19 ವಾರ್ ರೂಮ್ ತಂಡಕ್ಕೆ ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಅಭಿನಂದಿಸಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸುವ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದೆ. ಹೈದರಾಬಾದ್ನಲ್ಲಿ ನಡೆದ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಲನದಲ್ಲಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನೀಶ್ ಮೌದ್ಗಿಲ್ ತಂಡಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುನೀಶ್ ಮೌದ್ಗಿಲ್ ಅವರು, ''ಭಾರತದಲ್ಲಿ ರಾಕೆಟ್ ವೇಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿ 1 ರಿಂದ 7 ರವರೆಗೆ ಕಳೆದ ಏಳು ದಿನಗಳಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ವೇಗವಾಗಿ ಹರಡುತ್ತಿವೆ. ವಿಶ್ಲೇಷಣೆಯ ಪ್ರಕಾರ ಲಸಿಕೆ ಹಾಕದ ಜನರು ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಸಾಧ್ಯತೆ 30 ಪಟ್ಟು ಹೆಚ್ಚಿದ್ದು ಲಸಿಕೆ ಹಾಕದ ಜನರು ಲಸಿಕೆ ಹಾಕಿದವರಿಗಿಂತ 10 ಪಟ್ಟು ಹೆಚ್ಚು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು. ಜೊತೆಗೆ ಕೊರೊನಾ ತಡೆಗೆ ಲಸಿಕೆ ಸಹಾಯ ಮಾಡುತ್ತದೆ. ಅರ್ಹ ಪ್ರತಿಯೊಬ್ಬರು ಅದನ್ನು ತೆಗೆದುಕೊಳ್ಳಬೇಕು,'' ಎಂದು ಹೇಳಿದರು.

2020ರ ಮಾರ್ಚ್ನಲ್ಲಿ ಕೋವಿಡ್ ಮೊದಲ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು. ಮೊದಲ ಅಲೆ ಆರಂಭವಾದ 2- 3 ದಿನಗಳಲ್ಲಿ ವಾರ್ರೂಮ್ ಸ್ಥಾಪಿಸಲಾಗಿತ್ತು. ಕೊರೊನಾ ವಾಚ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲು ರಚಿಸಲಾಯಿತು. ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆಗಾಗಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ.

ಭಾರತದಲ್ಲಿ ಭಾನುವಾರ 1,59,632 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 40,863 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 327 ಸಾವುಗಳು ವರದಿಯಾಗಿವೆ. ಈ ಪೈಕಿ, ಇದುವರೆಗೆ ಭಾರತದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 3,623 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಓಮಿಕ್ರಾನ್ನಿಂದ ಚೇತರಿಸಿಕೊಂಡವರ ಸಂಖ್ಯೆ 1,409 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.












Click it and Unblock the Notifications