ರಾಜ್ಯಾದ್ಯಂತ ಮಳೆ: ಜಲಾಶಯಗಳ ಮಟ್ಟ ಎಷ್ಟಿದೆ?
ಬೆಂಗಳೂರು, ಸೆಪ್ಟೆಂಬರ್. 11: ಮರೆಯಾಗಿದ್ದ ವರುಣ ರಾಜ್ಯದ ಹಲವೆಡೆ ಹದ ಮಳೆ ಸುರಿಸುತ್ತಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಬಳ್ಳಾಪುರ, ದಕ್ಷಿಣಕನ್ನಡ, ರಾಮನಗರ, ಉತ್ತರಕನ್ನಡ, ಹಾಸನ, ಮಂಡ್ಯ, ಧಾರವಾಡ, ಚಿಕ್ಕಮಗಳೂರು, ಬೆಂಗಳೂರು ನಗರ, ತುಮಕೂರು, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಬಿದ್ದಿದೆ.['ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು ಯಾವವು?!]
ವಿಜಯಪುರ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾದ ವರದಿಯಾಗಿದೆ. ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರ್ಗಿ, ಬೆಳಗಾವಿ, ಬೀದರ್, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ.[ಜೂನ್ ತಿಂಗಳ ಮಳೆ ಮಾಡಿದ್ದ ಹಾನಿ ಚಿತ್ರಗಳಲ್ಲಿ]
ನವಲಗುಂದಲ್ಲಿ ಅತ್ಯಧಿಕ ಅಂದರೆ 10 ಸೆಂಮೀ, ಯಾದಗಿರಿಯ ಸೈದಾಪುರದಲ್ಲಿ 9 ಸೆಂಮೀ, ಬಾಗಲಕೋಟೆ, ಸಿಂಧನೂರಲ್ಲಿ 8 ಸೆಂಮೀ ಮಳೆಯಾಗಿದೆ. ಉಳಿದಂತೆ ದೇವದುರ್ಗ, ವಿಜಯಪುರ, ಕಲಬುರಗಿ, ರಾಯಚೂರಲ್ಲಿ 7 ಸೆಂಮೀ ಮಳೆಯಾಗಿದೆ. ಹೊನ್ನಾವರ, ಜೇವರ್ಗಿ, ಮುದಗಲ್, ಚಿಂಚೊಳ್ಳಿ, ನಾರಾಯಣಪುರ, ಹುನಗುಂದ, ಕುಂದರಗಿ, ಆಲಮಟ್ಟಿ, ಮುದ್ದೇನಹಳ್ಳಿ, ತಾಳಿಕೋಟೆ, ಔರಾದ್, ಗೇರುಸೊಪ್ಪಾ, ಭೀಮಖೇಡ್, ಬೀದರ್, ಜಾಲಹಳ್ಳಿ, ಮಸ್ಕಿ, ಆಗುಂಬೆ, ಕೊಟ್ಟಿಗೆಹಾರದಲ್ಲಿ 4 ಸೆಂಮೀ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಆದರೆ ಈ ಮಳೆ ಜಲಾಶಯಗಳ ಒಳಹರಿವು ಹೆಚ್ಚಳ ಮಾಡಲು ವಿಫಲವಾಗಿದೆ. ರಾಜ್ಯಾದ್ಯಂತ ಈಗಾಗಲೇ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದು ಮುಂದಿನ ದಿನಗಳಲ್ಲಿ ನಾಗರಿಕರು ಮತ್ತಷ್ಟು ಪರಿತಪಿಸುವುದರಲ್ಲಿ ಅನುಮಾನವಿಲ್ಲ. ಹಾಗಾದರೆ ಜಲಾಶಯದಲ್ಲಿ ಯಾವ ಪ್ರಮಾಣದ ನೀರು ಸಂಗ್ರಹಣೆಯಿದೆ ನೋಡಿಕೊಂಡು ಬರೋಣ...
ಜಲಾಶಯ ನೀರಿನ ಮಟ್ಟ(ಆವರಣದಲ್ಲಿ ಗರಿಷ್ಠ ಮಟ್ಟ) | |
---|---|
ಆಲಮಟ್ಟಿ | 514ಮೀ (519 ಮೀ) |
ಲಿಂಗನಮಕ್ಕಿ | 1,787 (1819 ಅಡಿ) |
ಭದ್ರಾ | 168(186 ಅಡಿ) |
ತುಂಗಭದ್ರಾ | 1625 (1633 ಅಡಿ) |
ಕೆಆರ್ ಎಸ್ | 106 (124 ಅಡಿ) |
ಹಾರಂಗಿ | 2851 (2859 ಅಡಿ) |
ಹೇಮಾವತಿ | 2901(2992 ಅಡಿ) |
ಕಬಿನಿ | 2283 (2 284 ಅಡಿ) |
ಘಟಪ್ರಭಾ | 2127 (2175 ಅಡಿ) |
ಮಲಪ್ರಭಾ | 2055 (2079 ಅಡಿ) |