Karnataka Rain Alert: ಕರಾವಳಿ ಸೇರಿ ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ, ಹವಾಮಾನ ವರದಿ
ಬೆಂಗಳೂರು ಮೇ 22: ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯಗಳು, ವಾತಾವರಣದಲ್ಲಿ ದಢೀರ್ ಬದಲಾವಣೆಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಟ್ಟು ಬಿಡದೇ ಒಂದು ವಾರದಿಂದ ಮಳೆ ಆಗುತ್ತಿದೆ. ಒಣಹವೆಯ ಜಿಲ್ಲೆಗಳು ಇದೀಗ ಮಳೆಯ ಜಿಲ್ಲೆಗಳಾಗಿ ಪರಿವರ್ತನೆ ಆಗಿವೆ. ರಾಜ್ಯದ ಕೆಲವು ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಮುಂದಿನ ಐದು ದಿನ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಒಂದು ವಾರದಿಂದ ರೌದ್ರಾವತಾರ ತಾಳಿದೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಬೇಸಿಗೆ ವಾತಾವರಣ ಕಳೆದು ಮೇ ತಿಂಗಳಲ್ಲಿಯೇ ಮಳೆಗಾಲದಂತಹ ವಾತಾವರಣ ಸೃಷ್ಟಿಯಾಗಿದೆ.

ಭಾರೀ ಮಳೆಗೆ ಜೀವ ಹಾನಿ: ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಮಳೆಗೆ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಇನ್ನೂ ವಿವಿಧ ಜಿಲ್ಲೆಗಳಲ್ಲಿ ಮಳೆ ಬಂದಾಗ ಮೃತಪಟ್ಟವರ ಅಂಕಿ ಸಂಖ್ಯೆ ದೊಡ್ಡದಿದೆ. ಅಷ್ಟರ ಮಟ್ಟಿಗೆ ಮಳೆ ಸುರಿದು ದಾಖಲೆ ನಿರ್ಮಿಸಿಸಿದೆ. ಶಿವಮೊಗ್ಗ, ಬೆಳಗಾವಿ, ಧಾರವಾಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಭಾರೀ ಮಳೆ ಬರಲಿದೆ. ಗುಡುಗು ಮಿಂಚು ಸಮೇತ ಇಲ್ಲಿ ವ್ಯಾಪಕ ಮಳೆ ಸುರಿಯಲಿದೆ. ಈ ಸಂಬಂಧ 'ಆರೆಂಜ್ ಅಲರ್ಟ್' ಘೋಷಿಸಿಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆ ಜೋರಾಗಿರಲಿದೆ.
ಇಲ್ಲೆಲ್ಲ 200 ಮಿ.ಮೀ. ಮಳೆ ಸಾಧ್ಯತೆ
ಇಂದಿನಿಂದ ಮೇ 28ರ ವರೆಗೆ ಶಿವಮೊಗ್ಗ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಿಗೂ ಗರಿಷ್ಠ 200 ಮಿಲಿ ಮೀಟರ್ವರೆಗೆ ಮಳೆ ಬರುವ ನಿರೀಕ್ಷೆ ಇದೆ. ಹೀಗಾಗಿ ಅಷ್ಟು ದಿನಗಳು 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಉಳಿದಂತೆ ಬೇರೆ ಬೇರೆ ಭಾಗಗಳಲ್ಲಿ ಅಷ್ಟು ಮಳೆ ಬಾರದು. ಸಾಧಾರಣದಿಂದ ಭಾರೀ ಮಳೆ ಬರಲಿದೆ.
ಭಾರೀ ಮಳೆಯ ಜಿಲ್ಲೆಗಳ ಪಟ್ಟಿ
ಪೂರ್ವ ಮುಂಗಾರಿನ ಅಬ್ಬರ ಕೊಂಚ ಕಡಿಮೆ ಆದಂತೆ ಕಾಣುತ್ತಿದೆ. ಈ ಕಾರಣದಿಂದಲೇ ಉತ್ತರ ಕರ್ನಾಟಕ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಂದಿನಿಂದ ಮುಂದಿನ ಐದು ದಿನ ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ನಿರಂತರವಾಗಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಇದರೊಂದಿಗೆ ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಹಾವೇರಿ, ತುಮಕೂರು, ಬೆಂಗಳೂರು ನಗರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಜೋರು ಮಳೆ ಬರಲಿದೆ. ಹೀಗಾಗಿ ಈ ಮೇಲಿನ ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಬಿದ್ದ ಪ್ರದೇಶಗಳ ವಿವರ
ನೆನ್ನೆ ಉಡುಪಿ, ದಕ್ಷಿಣ ಕನ್ನಡ, ಮಂಗಳೂರು ಮತ್ತು ಕುಂದಾಪುರ ಭಾಗಗಳಲ್ಲಿ ಅತ್ಯಧಿಕ 100 ಮಿಲಿ ಮೀಟರ್ಗಿಂತಲೂ ಹೆಚ್ಚಿನ ಮಳೆ ಆಗಿದೆ. ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಚಾಮರಾಜನಗರ, ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ ದಾಖಳಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.












Click it and Unblock the Notifications