ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಭ್ರೂಣ ತೆಗೆಸಲು ಹೈಕೋರ್ಟ್ ಅನುಮತಿ
ಬೆಂಗಳೂರು, ನವೆಂಬರ್ 12: ಅತ್ಯಾಚಾರಕ್ಕೆ ಸಂಬಂಧಿತ ಪ್ರಕರಣವೊಂದರ ವಿಚಾರಣೆ ನಡೆಸಿರುವ ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಪೀಠ, ಸಂತ್ರಸ್ತೆಯ 25 ವಾರಗಳ ಭ್ರೂಣ ತೆಗೆಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
13 ವರ್ಷದ ಬಾಲಕಿಯೊಬ್ಬರ ಮೇಲೆ ಅತ್ಯಾಚಾರ ನಡೆದಿತ್ತು. ಈ ವೇಳೆ ಸಂತ್ರಸ್ತೆ ಬಾಲಕಿ ಗರ್ಭಧರಿಸಿದ್ದರಿಂದ ಅದನ್ನು ತೆಗೆಸಲು ನಿರ್ಧರಿಸಿದ್ದರು. ಈ ಕಾರಣಕ್ಕೆ ಸಂತ್ರಸ್ತೆ ಕರ್ನಾಟಕ ರಾಜ್ಯ ಹೈಕೋರ್ಟ್ಗೆ ಗರ್ಭಪಾತ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು.
ಆ ಸಂತ್ರಸ್ತ ಬಾಲಕಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ತನ್ನ ಹೊಟ್ಟೆಯಲ್ಲಿರುವ 25 ವಾರಗಳ ಭ್ರೂಣದ ಗರ್ಭಪಾತಕ್ಕೆ ಮನವಿ ಮಾಡಿದ್ದರು. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದು, ಆಕೆಯ ಶಾಲಾ ಪ್ರಮಾಣಪತ್ರ ಮತ್ತು ರೇಡಿಯಾಲಜಿಸ್ಟ್ ನೀಡಿದ ಸ್ಕ್ಯಾನ್ ವರದಿಯನ್ನು ನ್ಯಾಯಪೀಠ ಪರಿಶೀಲಿಸಿತು. ಅದರ ಪ್ರಕಾರ ಆಕೆ 25 ವಾರಗಳ ಗರ್ಭಿಣಿ ಎಂದು ಸಂತ್ರಸ್ತೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಬಳಿಕ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಬಾಲಕಿಯ ಗರ್ಭಪಾತಕ್ಕೆ ವಾಣಿವಿಲಾಸ್ ಆಸ್ಪತ್ರೆಗೆ ಸೂಚನೆ ನೀಡುವ ಮೂಲಕ ಗರ್ಭಪತಾಕ್ಕೆ ಅವಕಾಶ ಮಾಡಿಕೊಟ್ಟರು.
ವೈದ್ಯರು ಸಂತ್ರಸ್ತ ಬಾಲಕಿಯನ್ನು ತಪಾಸಣೆಗೊಳಪಡಿಸಿ ಅವರ ಜೀವಕ್ಕೆ ಹಾನಿಯಾಗುವಂತಿದ್ದರೆ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಭ್ರೂಣ ತೆಗೆಸಿದ ನಂತರ ಪ್ರಕರಣದ ತನಿಖೆಗೆ ನೆರವಾಗುವುದಕ್ಕಾಗಿ ಭ್ರೂಣವನ್ನು ಡಿಎನ್ಎ ಪರೀಕ್ಷೆಗಾಗಿ ಕಾಯ್ದಿರಿಸಬೇಕು ಆದೇಶದಲ್ಲಿ ಪೀಠ ತಿಳಿಸಿದೆ.
ಇನ್ನೂ ಬಾಲಕಿಯನ್ನು ಆಸ್ಪತ್ರೆಗೆ ಹೋಗುವುದು ಹಾಗೂ ಬರುವುದಕ್ಕಾಗಿ ಪೊಲೀಸರು ವ್ಯವಸ್ಥೆ ಮಾಡಬೇಕು. ಜೊತೆಗೆ ವೈದ್ಯರ ಸೂಚನೆ ಮೇರೆಗೆ ಸಂತ್ರಸ್ತ ಬಾಲಕಿಗೆ ಹೆಚ್ಚುವರಿ ಚಿಕಿತ್ಸೆಗೂ ಇದೇ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿ ಆದೇಶಿಸಿತು.