ಕೊರೊನಾ ಪಾಸಿಟಿವ್ ವರದಿ ಬಂದು 1 ಗಂಟೆಯಲ್ಲೇ ಮನೆ ಬಾಗಿಲಿಗೆ ಮೆಡಿಕಲ್ ಕಿಟ್!
ಬೆಂಗಳೂರು, ಮೇ 14: ಕರ್ನಾಟಕದಲ್ಲಿ ಕೊರೊನಾವೈರಸ್ ರೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗೃಹ ದಿಗ್ಬಂಧನ(ಹೋಮ್ ಐಸೋಲೇಷನ್)ನಲ್ಲಿ ಇರುವ ಸೋಂಕಿತರ ಮನೆ ಬಾಗಿಲಿಗೆ ಮೆಡಿಕಲ್ ಕಿಟ್ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಸಿ ಎನ್ ಅಶ್ವತ್ಥ ನಾರಾಯಣ್ ಘೋಷಿಸಿದ್ದಾರೆ.
ರಾಜ್ಯದಲ್ಲಿ 5 ಲಕ್ಷ ಹೋಮ್ ಐಸೋಲೇಷನ್ ಕಿಟ್ ಅನ್ನು ಸರ್ಕಾರ ಖರೀದಿ ಮಾಡಿದೆ. ಕೊವಿಡ್-19 ಸೋಂಕು ತಗುಲಿರುವ ಬಗ್ಗೆ ವರದಿ ದೃಢಪಟ್ಟ ಒಂದು ಗಂಟೆಯಲ್ಲೇ ಸೋಂಕಿತ ವ್ಯಕ್ತಿಯ ಮನೆ ಬಾಗಿಲಿಗೆ ಮೆಡಿಕಲ್ ಕಿಟ್ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
ಮೇ 15 ರಿಂದ ಗೃಹ ದಿಗ್ಬಂಧನದಲ್ಲಿ ಇರುವ ಸೋಂಕಿತರಿಗೆ ವ್ಯವಸ್ಥಿತ ರೀತಿಯಲ್ಲಿ ವೈದ್ಯಕೀಯ ಕಿಟ್ಗಳನ್ನು ವಿತರಿಸಬೇಕಿದೆ. ಈ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಉರಿಯೂತ ನಿವಾರಿಸಲು ಸ್ಟಿರಾಯ್ಡ್ ಮಾತ್ರಗಳ ಬಳಕೆ
ಕೊರೊನಾವೈರಸ್ ಸೋಂಕಿತರು ಪ್ರಾರಂಭಿಕ ಹಂತದಲ್ಲಿ ಉರಿಯೂತ ಸಮಸ್ಯೆಯನ್ನು ಎದುರಿಸುತ್ತಾರೆ. ಇದೇ ಹಂತದಲ್ಲಿ ಅಗತ್ಯವಿರುವ ಉರಿಯೂತ ನಿರೋಧಕ ಚಿಕಿತ್ಸೆ ಅಗತ್ಯವಿರುತ್ತದೆ. ಮೆಡಿಕಲ್ ಕಿಟ್ ಈ ಚಿಕಿತ್ಸೆ ಜೊತೆಗೆ ಪ್ರತಿಕಾಯ ವ್ಯವಸ್ಥೆಯನ್ನು ಹೆಚ್ಚಿರುವ ಔಷಧಿ ಮತ್ತು ಮಾತ್ರೆಗಳನ್ನು ಹೊಂದಿರುತ್ತದೆ. ಐಸೊಲೇಷನ್ ಕಿಟ್ನಲ್ಲಿ ಸ್ಟೀರಾಯ್ಡ್ ಮಾತ್ರೆಗಳು ಸಹ ಒಳಗೊಂಡಿರುತ್ತವೆ. ರೋಗದ ಲಕ್ಷಣಗಳನ್ನು ತಗ್ಗಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮುಂದಿನ ಹಂತದಲ್ಲಿ ಈ ಮಾತ್ರೆಗಳನ್ನು ಬಳಸಬಹುದಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲೇ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ
ಕೊರೊನಾವೈರಸ್ ಸೋಕಿನ ಲಕ್ಷಣಗಳನ್ನು ಹೊಂದಿರುವವರು ಉರಿಯೂತದ ಔಷಧಿಗಳನ್ನು ತೆಗೆದುಕೊಳ್ಳಲು ಅಂತಿಮ ಫಲಿತಾಂಶದವರೆಗೆ ಕಾಯಬೇಕಾಗಿಲ್ಲ. ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಔಷಧಿಗಳನ್ನು ತೆಗೆದುಕೊಳ್ಳಲು ಆರಂಭಿಸುವುದು ಸೂಕ್ತ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಕೆಮ್ಮು, ಜ್ವರ, ವಾಂತಿ, ಅತಿಸಾರದ ಬಗ್ಗೆ ಎಚ್ಚರವಾಗಿರಿ
ಕೆಮ್ಮು, ಜ್ವರ, ವಾಂತಿ ಮತ್ತು ಅತಿಸಾರದ ಲಕ್ಷಣಗಳು ಸಾಮಾನ್ಯ ರೋಗದ ಲಕ್ಷಣಗಳಷ್ಟೇ ಎಂದು ಅಂದುಕೊಳ್ಳುವ ಹಾಗಿಲ್ಲ. ಈ ಲಕ್ಷಣಗಳ ಕುರಿತು ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮನೋಭಾವನ್ನು ತೋರಿಸುವಂತಿಲ್ಲ. ಏಕೆಂದರೆ ಇಂಥ ಲಕ್ಷಣಗಳನ್ನು ಹೊಂದಿರುವವರಲ್ಲೇ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಸಾರ್ವಜನಿಕರು ಮಾನಸಿಕವಾಗಿ ಅಣಿಯಾಗಬೇಕು ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
Recommended Video

ಆಕ್ಸಿಜನ್ ಯುಕ್ತ ಬೆಡ್ ಸಾಕಾಗುತ್ತೆ ಎಂದ ಡಿಸಿಎಂ
ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಂಚಿಕೆ ಮಾಡಿರುವ ಆಮ್ಲಜನಕಯುಕ್ತ ಬೆಡ್ ವ್ಯವಸ್ಥೆ ಸಾಕಾಗುತ್ತದೆ. ಒಂದು ವೇಳೆ ನಾವು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದ ಸಂದರ್ಭದಲ್ಲಿ ಹೆಚ್ಚುವರಿ ಆಮ್ಲಜನಕದ ಅಗತ್ಯತೆ ಸೃಷ್ಟಿಯಾಗುತ್ತದೆ. ಆಗ ಹೆಚ್ಚಿನ ಬೇಡಿಕೆಯನ್ನು ನೀಗಿಸುವುದಕ್ಕೆ ಹೆಚ್ಚುವರಿ ಆಮ್ಲಜನಕವನ್ನು ಉತ್ಪಾದಿಸಬೇಕಾಗುತ್ತದೆ. ಪ್ರತಿಪಕ್ಷಗಳು ಕೊರೊನಾವೈರಸ್ ನಿರ್ವಹಣೆಯಲ್ಲಿ ವಿನಾಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.












Click it and Unblock the Notifications