ಮಾಜಿ ರಾಜ್ಯಪಾಲ ಭಾರದ್ವಾಜ್ ಮತ್ತು ವಿವಾದಗಳ ಹಿನ್ನೋಟ
ಬೆಂಗಳೂರು, ಜೂ 29: ರಾಜ್ಯಪಾಲರು ಅಂದರೆ ಸರಕಾರದ ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ತೋರಿಸಿಕೊಟ್ಟ ಕರ್ನಾಟಕದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಶನಿವಾರ (ಜೂ 28) ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಎಐಸಿಸಿ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಭಾರದ್ವಾಜ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ತನ್ನ ಅಧಿಕಾರದ ಅವಧಿಯಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರಕಾರವನ್ನು ಅದರಲ್ಲೂ ಪ್ರಮುಖವಾಗಿ ಯಡಿಯೂರಪ್ಪ ಸರಕಾರವನ್ನು ಎಡೆಬಿಡದೇ ಕಾಡಿ ರಾಜ್ಯಪಾಲರ ಅಸ್ತಿತ್ವವನ್ನು ತೋರಿಸಿಕೊಟ್ಟವರೆಂದರೆ ಭಾರದ್ವಾಜ್.
ಸಾಮಾನ್ಯ ಜನರಿಗೆ ರಾಜಭವನದ ಪ್ರವೇಶವಿಲ್ಲ ಎನ್ನುವ ಕಟ್ಟುಪಾಡನ್ನು ದೂರವಾಗಿಸಿದ ರಾಜ್ಯಪಾಲರು, ಆರಂಭದಿಂದಲೇ ಬಿಜೆಪಿ ಸರಕಾರದ ಕಾರ್ಯವೈಖರಿಯನ್ನು ಟೀಕಿಸುತ್ತಲೇ ಬಂದವರು. (ಸಿಎಂ ಸಿದ್ದರಾಮಯ್ಯ ಕಿವಿ ಹಿಂಡಿದ ರಾಜ್ಯಪಾಲರು)
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹನ್ನೊಂದು ಮಂದಿ ಬಿಜೆಪಿ ಶಾಸಕರು ಮತ್ತು ಐವರು ಪಕ್ಷೇತರರು ಸರಕಾರಕ್ಕೆ ಬೆಂಬಲ ವಾಪಸ್ ಪಡೆದಾಗ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಶಿಫಾರಸು ಮಾಡಿದ್ದರು. ಆದರೆ ಕೇಂದ್ರ ಸರಕಾರ ರಾಜ್ಯಪಾಲರ ಶಿಫಾರಸಿಗೆ ಸೊಪ್ಪು ಹಾಕದೇ ಇದ್ದಾಗ ಭಾರದ್ವಾಜ್ ತೀವ್ರ ಮುಖಭಂಗ ಅನುಭವಿಸಿದ್ದರು.
ರಾಜ್ಯಪಾಲ ಭಾರದ್ವಾಜ್ ತನ್ನ ಅಧಿಕಾರದ ಅವಧಿಯಲ್ಲಿನ ಕೆಲವೊಂದು ವಿವಾದಾತ್ಮಕ, ಕಠಿಣ ನಿರ್ಧಾರಗಳು ಮತ್ತು ಹೇಳಿಕೆಗಳು/ನಿರ್ಧಾರಗಳು ಸ್ಲೈಡಿನಲ್ಲಿ..

ನ್ಯಾಯಾಂಗ ಬಂಧನಕ್ಕೆ ಆದೇಶ
2011ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನಿಗೆ ಆದೇಶ ನೀಡಿದಾಗ. ಅಲ್ಲಿಂದ ರಾಜಭವನ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ನೇರ ಮಾತಿನ ವಾಕ್ಸಮರ ಆರಂಭಗೊಂಡಿತು.

ಅಕ್ರಮ ಸಕ್ರಮ ಯೋಜನೆ ಅನುಮತಿಗೆ ವಿರೋಧ
ಬಿಜೆಪಿ ಅಧಿಕಾರದಲ್ಲಿದ್ದಾಗ ವಿಧಾನಮಂಡಲದಲ್ಲಿ ಆಂಗೀಕರಿಸಲ್ಪಟ್ಟಿದ್ದ ಅಕ್ರಮ ಸಕ್ರಮ ಯೋಜನೆಗೆ ಮೂರು ವರ್ಷದಿಂದ ಸಹಿಹಾಕದೇ ಯೋಜನೆ ಜಾರಿಗೆ ಕಾಲಾವಕಾಶ ಬೇಕೆಂದು ಮುಂದೂಡುತ್ತಲೇ ಬಂದರು. ಕೊನೆಗೆ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರದ್ವಾಜ್ ಮಸೂದೆಗೆ ಸಹಿಹಾಕಿದರು.

ಗೋಹತ್ಯಾ ನಿಷೇಧ ಕಾಯ್ದೆ ವಾಪಸ್
ಬಿಜೆಪಿ ಸರಕಾರ ಮಂಡಿಸಿದ್ದ ಗೋಹತ್ಯಾ ನಿಷೇಧ ಮತ್ತು ಗೋರಕ್ಷಣಾ (ತಿದ್ದುಪಡಿ) ವಿಧೇಯಕಕ್ಕೆ ಸದನದ ಆಂಗೀಕಾರ ಪಡೆಯಲಾಗಿತ್ತು. ಆದರೆ ರಾಜ್ಯಪಾಲರು ವಿಧೇಯಕವನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿಕೊಟ್ಟರು.

ಅನಂತಮೂರ್ತಿ ಜೊತೆ ಮಾತಿನ ಚಕಮಕಿ
ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ನೇಮಕಾತಿ ವಿಚಾರದಲ್ಲಿ ಅನಂತಮೂರ್ತಿ ಮಾಡಿದ ಪ್ರಶ್ನೆಗೆ ಕಿಡಿಕಾರಿದ್ದ ರಾಜ್ಯಪಾಲರು, ನನ್ನನ್ನು ಪ್ರಶ್ನೆ ಮಾಡಲು ಅನಂತಮೂರ್ತಿ ಯಾರು. ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚಿಸಿದ್ದೇ ನಾನು. ನನ್ನ ಅಧಿಕಾರವನ್ನು ಅನಂತಮೂರ್ತಿ ಪ್ರಶ್ನಿಸುವಂತಿಲ್ಲ ಎಂದು ಹೇಳಿದ್ದರು.

ಚಿದಾನಂದಮೂರ್ತಿಗೆ ಗೌರವ ಡಾಕ್ಟರೇಟ್
ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿಗೆ ಗೌರವ ಡಾಕ್ಟರೇಟ್ ನೀಡುವ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ನಿರ್ಧಾರವನ್ನು ತಿರಸ್ಕರಿಸಿದ್ದರು. ತದನಂತರ ಎಲ್ಲಡೆ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೇ, ತನ್ನ ನಿರ್ಧಾರವನ್ನು ಬದಲಿಸಿದರು.

ಸಿದ್ದು ಸರಕಾರಕ್ಕಿಂತ ಬಿಎಸ್ವೈ ಸರಕಾರವೇ ಲೇಸು
ಉರ್ದು ಅಕಾಡೆಮಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ತನ್ನ ಸಲಹೆಗೆ ಸ್ಪಂದಿಸದ ಪೌರಾಡಳಿತ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಖಮರುಲ್ಲಾ ಇಸ್ಲಾಂ ವಿರುದ್ದ ಕಿಡಿಕಾರಿದ್ದ ರಾಜ್ಯಪಾಲರು ನಿಮ್ಮ ಸರಕಾರಕ್ಕಿಂತ ಯಡಿಯೂರಪ್ಪನವರ ಸರಕಾರವೇ ಲೇಸು. ಹೋಗಿ ಈ ಮಾತನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ಎಂದು ಬೆಂಡೆತ್ತಿದ್ದರು.

ಬೆಂಗಳೂರು ಕಸದ ಸಮಸ್ಯೆ
ಕಸದ ಸಮಸ್ಯೆ ಪರಿಹರಿಸಲು ಬಿಬಿಎಂಪಿಗೆ ಮನಸ್ಸಿರಬೇಕು. ಕಸದ ಸಮಸ್ಯೆ ಪರಿಹರಿಸುವುದಿಲ್ಲ, ನಾವು ಹೀಗೇ ಇರುತ್ತೇವೆ ಎನ್ನುವವರಿಗೆ ನಾವು ಏನು ಮಾಡಲು ಸಾಧ್ಯ. ಬಿಬಿಎಂಪಿ ನನಗೆ ಇಪ್ಪತ್ತು ಜನರನ್ನು ಕೊಡಲಿ, ನಾನೇ ಮುಂದೆ ನಿಂತು ಕಸ ತೆಗೆಸುತ್ತೇನೆಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಖಾಸಗಿ ವಿವಿಗಳಿಗೆ ವಿರೋಧ
ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದ ರಾಜ್ಯಪಾಲರು, ನಂತರ ಪ್ರಸ್ತಾವನೆ ಬಂದ ಹೆಚ್ಚುಕಮ್ಮಿ ಎಲ್ಲಾ ಅರ್ಜಿಗಳಿಗೆ ಅಸ್ತು ಅಂದರು.

ವಿ ಸೋಮಣ್ಣಗೆ ಮುಖಭಂಗ
ವಿ ಸೋಮಣ್ಣ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ವಿಧಾನ ಪರಿಷತ್ ಪ್ರವೇಶಿಸಲು ಬಯಸಿದ್ದರು. ಬಿಜೆಪಿ ಸರಕಾರ ಕೂಡಾ ಅವರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ರಾಜ್ಯಪಾಲರು 'ಸಮಾಜ ಸೇವಾ ಕ್ಷೇತ್ರದಡಿ' ಸೋಮಣ್ಣ ಸೂಕ್ತ ವ್ಯಕ್ತಿಯಲ್ಲ. ಅವರೊಬ್ಬ ರಾಜಕಾರಣಿ ಎಂದು ಭಾರದ್ವಾಜ್ ಪರಿಷತ್ತಿಗೆ ನಾಮಕರಣ ಮಾಡಲು ವಿರೋಧ ವ್ಯಕ್ತ ಪಡಿಸಿ ವಾಪಸ್ ಕಳುಹಿಸಿದ್ದರು. ಇದರಿಂದ ಮತ್ತೆ ಬಿಜೆಪಿ ಮತ್ತು ರಾಜ್ಯಪಾಲರ ನಡುವೆ ವಾಗ್ಯುದ್ದ ಆರಂಭವಾಯಿತು.

ಧರಂಸಿಂಗ್ ಅಕ್ರಮ ಗಣಿಗಾರಿಕೆ
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಯಡಿಯೂರಪ್ಪ ವಿರುದ್ದ ತಾಳಿದ್ದ ಕಠಿಣ ನಿಲುವನ್ನು ಧರಂಸಿಂಗ್ ವಿಚಾರದಲ್ಲಿ ತಾಳಿಲ್ಲ ಎನ್ನುವ ಆರೋಪ ಎದುರಿಸ ಬೇಕಾಯಿತು.

ಬ್ರಾಹ್ಮಣರ ವಿರುದ್ದ ದಲಿತರು ತಿರುಗಿ ಬೀಳಲಿದ್ದಾರೆ
ಎಲ್ಲಾ ಜಾತಿ ವರ್ಗಗಳೂ ಸಮಾನತೆಯಿಂದ ಬದುಕುವ ದಿನ ಬರಬೇಕು. ಪರಿಸ್ಥಿತಿ ಈಗಿರುವ ರೀತಿಯಲ್ಲೇ ಮುಂದುವರಿದರೆ ಸಮಾಜಕ್ಕಿದು ದುಷ್ಪರಿಣಾಮ ಬೀರಲಿದೆ. ಅಸ್ಪೃಶ್ಯತೆ ಹೀಗೇ ಮುಂದುವರಿದರೆ ದಲಿತರು ಬ್ರಾಹ್ಮಣರ ವಿರುದ್ದ ತಿರುಗಿ ಬೀಳಲಿದ್ದಾರೆಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ವಿವಾದಕಾರಿ ಹೇಳಿಕೆ ನೀಡಿದ್ದರು.

ಮಾನವಹಕ್ಕುಗಳ ಆಯೋಗ
ಹುದ್ದೆಯಿಂದ ನಿರ್ಗಮಿಸುವ ಎರಡು ದಿನದ ಮೊದಲು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿಯಾಗಿ ನಿವೃತ್ತ ಐಎಎಸ್ ಅಧಿಕಾರಿಯ ನೇಮಕಕ್ಕೆ ಅಸ್ತು ನೀಡುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಈ ಹುದ್ದೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಕಾಯ್ದೆ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರಬೇಕು ಅಥವಾ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು. ಇಲ್ಲವೇ, ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿರಬೇಕು ಅಥವಾ ಜಿಲ್ಲಾ ನ್ಯಾಯಾಧೀಶರಾಗಿದ್ದು ಕನಿಷ್ಠ ಏಳು ವರ್ಷಗಳ ಅನುಭವ ಹೊಂದಿರಬೇಕು.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications