ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಅಮಾನತು ವಾಪಸ್!
ಬೆಂಗಳೂರು, ಫೆ. 9 : ಕೆಎಂಎಫ್ನ ಅಧ್ಯಕ್ಷ ಪಿ.ನಾಗರಾಜ್ ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಸರ್ಕಾರ ವಾಪಸ್ ಪಡೆಯಲಿದೆ. ಈ ಕುರಿತು ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ನಲ್ಲಿ ಕೆಎಂಎಫ್ ಅಧ್ಯಕ್ಷರಾಗಿದ್ದ ಪಿ.ನಾಗರಾಜ್ ಅವರನ್ನು ಫೆ.5ರಂದು ಕರ್ನಾಟಕ ಸರ್ಕಾರ ಎರಡು ವರ್ಷಗಳ ಅವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅನುಮತಿ ಇಲ್ಲದೆ ಪ್ರವಾಸ, ವಾಹನ ಖರೀದಿ, ವ್ಯವಸ್ಥಾಪಕ ನಿರ್ದೇಶಕರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮುಂತಾದ ಆರೋಪಗಳ ಹಿನ್ನಲೆಯಲ್ಲಿ ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿತ್ತು. ಸೋಮವಾರ ಅಮಾನತು ಆದೇಶವನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಹೈಕೋರ್ಟ್ಗೆ ಹೇಳಿಕೆ ನೀಡಿದೆ. [ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಅಮಾನತು]
ಹೈಕೋರ್ಟ್ ಮೆಟ್ಟಿಲೇರಿದ್ದ ಪಿ.ನಾಗರಾಜ್ ಅವರು ರಿಟ್ ಅರ್ಜಿ ಸಲ್ಲಿಸಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ನೇಮಕ ಕುರಿತು ಸರ್ಕಾರ ನೋಟಿಸ್ ನೀಡಿದ್ದು, ಇದಕ್ಕೆ ಉತ್ತರಿಸಲು ಕೇವಲ 2 ದಿನ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಆ ಸಮಯದಲ್ಲಿ ಉತ್ತರ ನೀಡಲಿಲ್ಲ ಎಂದು ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದರು. [ಕೆಎಂಎಫ್ ಅಧ್ಯಕ್ಷರಾದ ನಾಗರಾಜ್, ಡಿಕೆಶಿ ಬಣಕ್ಕೆ ಗೆಲುವು]
ನಾಗರಾಜ್ ಪರ ವಕೀಲರು ನೋಟಿಸ್ಗೆ ಉತ್ತರಿಸಲು ಸರ್ಕಾರ ನೀಡಿದ ಕಾಲಾವಕಾಶ ತುಂಬಾ ಕಡಿಮೆಯಾಯಿತು ಒಂದು ವಾರವಾದರೂ ಅವಕಾಶ ನಿಡಬೇಕಿತ್ತು ಎಂದು ವಾದ ಮಂಡಿಸಿದ್ದರು. ತಮ್ಮ ಕಕ್ಷೀದಾರರು ಯಾವುದೇ ರೀತಿಯ ಅಕ್ರಮದಲ್ಲಿ ಪಾಲ್ಗೊಂಡಿಲ್ಲ. ನಾಗರಾಜ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬೇರೆ ರಾಜ್ಯಗಳ ಪ್ರವಾಸ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಸೋಮವಾರ ಅರ್ಜಿಯ ವಿಚಾರಣೆ ವೇಳೆ ಅಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಅಮಾನತು ಆದೇಶವನ್ನು ವಾಪಸ್ ಪಡೆಯುತ್ತಿರುವುದಾಗಿ ಅಡ್ವೊಕೇಟ್ ಜನರಲ್ ಕೋರ್ಟ್ಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಅಮಾನತು ವಿವಾದ ಸದ್ಯಕ್ಕೆ ಬಗೆಹರಿದಂತಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮೊದಲು ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಅವರ ಹೆಸರು ಹೇಳಿಬಂದಿತ್ತು. ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಪಿ.ನಾಗರಾಜ್ ಅವರು ಕೆಎಂಎಫ್ ಅಧ್ಯಕ್ಷರಾಗಲು ಸಹಕಾರ ನೀಡಿದ್ದರು. ಸೆಪ್ಟೆಂಬರ್ನಲ್ಲಿ ನಾಗರಾಜ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು.












Click it and Unblock the Notifications