BY Vijayendra ಸ್ಪರ್ಧೆಗೆ 'ಸಂತೋಷ ಕೂಟ' ತಡೆ: BL Santosh ಗುರಿಯಾಗಿಸಿ ಸರಣಿ ಟ್ವೀಟ್- #BSYvsBJP ಹ್ಯಾಶ್ಟ್ಯಾಗ್ ಬಳಕೆ
ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪಗೆ ಅಪಮಾನ ಇದೇ ಮೊದಲಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ 'ಸಂತೋಷ ಕೂಟ' ಮೊದಲಿಂದಲೂ ಇದೆ ಎಂದು ಟ್ವೀಟ್ ಮಾಡಲಾಗಿದೆ. #BSYvsBJP ಹ್ಯಾಶ್ಟ್ಯಾಗ್ ಬಳಸಲಾಗಿದೆ.
ಬೆಂಗಳೂರು, ಮಾರ್ಚ್ 18: ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪಗೆ ಅಪಮಾನ ಇದೇ ಮೊದಲಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ 'ಸಂತೋಷ ಕೂಟ' ಮೊದಲಿಂದಲೂ ಇದೆ. ಈ 'ಸಂತೋಷ ಕೂಟ' ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಅಧಿಕಾರ ಸಿಗದಂತೆ ಮಾಡಲು, ಅಧಿಕಾರದಿಂದ ಇಳಿಸಲು, ಮೂಲೆಗುಂಪು ಮಾಡಲು ಕೊನೆಗೆ ಜೈಲಿಗೆ ಕಳುಹಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
#BSYvsBJP ಹ್ಯಾಶ್ಟ್ಯಾಗ್ ಅಡಿ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, '2018ರ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ದಿಸಲು ತಯಾರಿ ನಡೆಸಿದ್ದರು. ಇದಕ್ಕೆ ಕಾರ್ಯಕರ್ತರ ಬೆಂಬಲವೂ ಇತ್ತು. ಆದರೆ ಕೊನೇ ಕ್ಷಣದಲ್ಲಿ ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಲಿಲ್ಲ. ಇದರ ಹಿಂದೆ ಇದ್ದದ್ದು ಇದೇ 'ಸಂತೋಷ ಕೂಟ'ದ ಕೈವಾಡ' ಎಂದು ಟೀಕಿಸಿದೆ.

ದಶಕಗಳ ಕಾಲದ ಹೋರಾಟದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದು 'ಮುಖ್ಯಮಂತ್ರಿ' ಹುದ್ದೆಗೆ ಏರಿದವರು ಬಿ ಎಸ್ ಯಡಿಯೂರಪ್ಪ. ಆದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು 'ಸಂಚು' ನಡೆಸಿ ಅದರಲ್ಲಿ ಎರಡೆರಡು ಬಾರಿ ಯಶಸ್ವಿಯೂ ಆಗಿದ್ದು ಬಿಜೆಪಿಯಲ್ಲಿರುವ ಇದೇ 'ಸಂತೋಷ ಕೂಟ' ಎಂದು ಬಿ ಎಲ್ ಸಂತೋಷ್ ಅವರನ್ನು ಗುರಿಯಾಗಿಸಿ ಕೆಪಿಸಿಸಿ ಆರೋಪಿಸಿದೆ.
ಚುನಾವಣೆ ಹತ್ತಿರವಾದಂತೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಬಿ ಎಸ್ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಹೈಕಮಾಂಡ್ ಸೇರಿದಂತೆ ಆರೆಸ್ಸೆಸ್ ಬಣ ಯತ್ನಿಸಿದರೆ ಯಡಿಯೂರಪ್ಪ ಪರ ಇನ್ನೊಂದು ಬಣ ತೊಡೆ ತಟ್ಟುತ್ತಿದೆ. ಇಂದಿನ ಚಾಮರಾಜನಗರದ ಕಾರ್ಯಕ್ರಮದಲ್ಲಿ #BSYvsBJP ಕಿತ್ತಾಟ ಬಟಾಬಯಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಬಿಎಸ್ವೈ ವಿಚಾರದ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ,' ದಕ್ಷಿಣ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ( ಬಿಜೆಪಿ ) ವಿಶ್ವಾಸಾರ್ಹ ಮುಖಗಳಿಲ್ಲ. ಆದ್ದರಿಂದ ಅವರು ಮತ್ತೆ ಬಿಎಸ್ವೈ ಅವರ ಹಿಂದೆ ಬಿದ್ದಿದ್ದಾರೆ' ಹೇಳಿದ್ದಾರೆ.
'ಬಿ ಎಸ್ ಯಡಿಯೂರಪ್ಪ ನಿವೃತ್ತಿ ಹೊಂದಲು ಯೋಚಿಸಿರಲಿಲ್ಲ. ಬಿಎಸ್ವೈ ಮುಕ್ತ ಬಿಜೆಪಿಯನ್ನು ನಿರ್ಮಿಸಲು ಅವರನ್ನು ನಿವೃತ್ತವಂತೆ ಸೂಚಿಸಲಾಯಿತು. ಬಿಜೆಪಿಯಲ್ಲಿ ನಂಬಲರ್ಹ ಮುಖವಿಲ್ಲ ಎಂದು ಗೊತ್ತಾದಾಗ ಮತ್ತೆ ಯಡಿಯೂರಪ್ಪನವರ ಕೈ ಹಿಡಿದು ತಿರುಗಾಡಲು ಆರಂಭಿಸಿದ್ದಾರೆ' ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಗುರಿಯನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ಕೇಂದ್ರ ನಾಯಕತ್ವವು ಪ್ರಭಾವಿ ಲಿಂಗಾಯತ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅನುಭವ ಮತ್ತು ಜನಪ್ರಿಯತೆ ಮೇಲೆ ಮತ್ತೆ ನಂಬಿಕೆಯನ್ನು ಇರಿಸಿದೆ. ಲಿಂಗಾಯತರದ್ದು ಕರ್ನಾಟಕದಲ್ಲಿ ಏಕೈಕ ದೊಡ್ಡ ಸಮುದಾಯವಾಗಿದ್ದು, ಜನಸಂಖ್ಯೆಯ ಸುಮಾರು 17 ಪ್ರತಿಶತವನ್ನು ಹೊಂದಿದ್ದಾರೆ. ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಲಿಂಗಾಯತ ನಾಯಕರಾಗಿದ್ದಾರೆ.
ತಮ್ಮ ಸ್ವಂತ ಕ್ಷೇತ್ರವಾದ ಶಿಕಾರಿಪುರದಿಂದ ಕಿರಿಯ ಪುತ್ರ ಬಿ ವೈ ವಿಜಯೇಂದ್ರ ಅವರು ಸ್ಪರ್ಧಿಸಬೇಕೆಂಬುದು ಯಡಿಯೂರಪ್ಪನವರ ಒತ್ತಾಸೆಯಾಗಿದೆ. ಆದಾಗ್ಯೂ, ಅಂತಿಮ ನಿರ್ಧಾರವು ಇನ್ನೂ ದೆಹಲಿಯ ಉನ್ನತ ನಾಯಕರದ್ದಾಗಿದೆ. ಬಿಎಸ್ ಯಡಿಯೂರಪ್ಪನವರು ಶಿಕಾರಿಪುರದಿಂದ ಎಂಟು ಬಾರಿ ಶಾಸಕರಾಗಿದ್ದರು.
2008 ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪನವರು ಕಾರಣರಾಗಿದ್ದರು. 2011ರಲ್ಲಿ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟಿಕೊಂಡಿದ್ದರು. ಸ್ವಲ್ಪ ಸಮಯದ ನಂತರ ಬಿಜೆಪಿಯೊಂದಿಗೆ ವಿಲೀನಗೊಂಡು 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿ ಗೆದ್ದರು.












Click it and Unblock the Notifications