Bajarang Dal Ban: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ಭರವಸೆ: ಸಿ.ಟಿ ರವಿ ಆಕ್ರೋಶ
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲೇ ಕಾಂಗ್ರೆಸ್ ಮಹತ್ವದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮತದಾರರನ್ನು ಸೆಳೆಯಲು ಹಲವು ಭರವಸೆಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ, ಪಿಎಫ್ಐ ಸೇರಿದಂತೆ ಸಮಾಜದ ಶಾಂತಿ ಕದಡುವ ಸಂಘಟನೆಗಳನ್ನು ಬ್ಯಾನ್ ಮಾಡುವುದಾಗಿ ಹೇಳಿದೆ.
ಕಾಂಗ್ರೆಸ್ನ ಭಜರಂಗ ದಳ ನಿಷೇಧಿಸುವ ಕುರಿತ ಪ್ರಣಾಳಿಕೆಯ ಭರವಸೆ ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ವಿರೋಧಿ ಎಂದು ಕರೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿ.ಟಿ ರವಿ, "ಕಾಂಗ್ರೆಸ್ ಹಿಂದೂಗಳ ಮೇಲಿನ ದ್ವೇಷವನ್ನು ಮುಂದುವರೆಸಿದೆ. ನಾಲಾಯಕ್ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇಧಿಸುವ ಉದ್ದೇಶವನ್ನು ಹೊಂದಿದೆ, ಇದು ಹಿಂದೂಗಳಿಗೆ ಮಾಡುವ ಅವಮಾನ, ಕಾಂಗ್ರೆಸ್ ಹಿಂದೂಗಳನ್ನು ಮತ್ತು ಜಿಹಾದಿಗಳನ್ನು ಒಂದೇ ರೀತಿ ನೋಡುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಡಾ. ಸುರೇಂದ್ರ ಜೈನ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇಂದು ಕಾಂಗ್ರೆಸ್ ಬಜರಂಗದಳವನ್ನು ರಾಷ್ಟ್ರ ವಿರೋಧಿ ಮತ್ತು ನಿಷೇಧಿತ ಪಿಎಫ್ಐ ಸಂಘಟನೆಗೆ ಹೋಲಿಕೆ ಮಾಡಿರುವುದು ದುರದೃಷ್ಟಕರ. ಇದನ್ನು ದೇಶದ ಜನ ಒಪ್ಪುವುದಿಲ್ಲ. ಬಜರಂಗದಳ ಈ ಸವಾಲನ್ನು ಸ್ವೀಕರಿಸುತ್ತದೆ ಮತ್ತು ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಉತ್ತರಿಸುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications